ಮಂಗಳೂರು, ಜು 15 (DaijiworldNews/MS): ರಾಜ್ಯದಲ್ಲಿ ಜು.15 ರ ಗುರುವಾರ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳ ಕಾರ್ಯಾಚರಣೆ ನಡೆಸಿದ್ದು, ಒಂಬತ್ತು ಅಧಿಕಾರಿಗಳಿಗೆ ಸಂಬಂಧಪಟ್ಟಂತೆ ಇರುವ ರಾಜ್ಯದ ವಿವಿಧ 40 ಕಡೆಗಳಲ್ಲಿ ದಾಳಿ ನಡೆಸಿ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
ಕೃಷ್ಣ .ಎಸ್. ಹೆಬ್ಸೂರ ಅವರ ಮನೆ
ಇನ್ನು ಅವಿಭಜಿತ ಜಿಲ್ಲೆಯಲ್ಲೂ ಈ ದಾಳಿ ನಡೆದಿದ್ದು, ಉಡುಪಿ ಕೆ ಆರ್ ಐಡಿಸಿಎಲ್ ಮುಖ್ಯ ಇಂಜಿನಿಯರ್ ಕೃಷ್ಣ.ಎಸ್. ಹೆಬ್ಸೂರ, ದ. ಕ. ಜಿಲ್ಲಾ ನಗರಾಭಿವೃದ್ಧಿ ಘಟಕದ ಎಕ್ಸಿಕ್ಯೂಟಿವ್ ಇಂಜಿನಿಯರ್ ಜಿ. ಶ್ರೀಧರ್ ಅವರ ಮನೆ ಹಾಗೂ ಕಚೇರಿಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದ್ದಾರೆ.
ಮಂಗಳೂರಿನಲ್ಲಿ ಜಿ. ಶ್ರೀಧರ್ ಅವರಿಗೆ ಸೇರಿದ ಮನೆ ಹಾಗೂ ಜಿಲ್ಲಾಧಿಕಾರಿ ಕಚೇರಿಯ ನಗರಾಭಿವೃದ್ಧಿ ಘಟಕಕ್ಕೆ ದಾಳಿ ನಡೆಸಿದ ಅಧಿಕಾರಿ ಗಳು, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದು, ಇನ್ನು ಜಿ. ಶ್ರೀಧರ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇದಲ್ಲದೆ ಶ್ರೀಧರ್ ಅವರ ಮೈಸೂರಿನಲ್ಲಿರುವ ಮನೆಗೂ ದಾಳಿನಡೆಸಲಾಗಿದೆ.
ಉಡುಪಿಯಲ್ಲಿ ಎಸಿಬಿ ಅಧಿಕಾರಿಗಳು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಲಿಮಿಟೆಡ್ ಇ.ಇ ಕೃಷ್ಣ .ಎಸ್. ಹೆಬ್ಸೂರ ಮನೆಗೆ ದಾಳಿ ನಡೆಸಿದ್ದಾರೆ. ದೊಡ್ಡಣಗುಡ್ಡೆಯಲ್ಲಿರುವ ಹೆಬ್ಸೂರ ಅವರ ಡಿವೈಎಸ್ಪಿ ನೇತೃತ್ವದ ತಂಡದಿಂದ ದಾಳಿನಡೆಸಲಾಗಿದ್ದು ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ.