ಉಡುಪಿ, ಜು.15 (DaijiworldNews/HR): ನಗರಸಭಾ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ರಾಧಾ ಅಶೋಕ್ರಾಜ್ ಅವರು ಉಡುಪಿ ನಗರಸಭಾ ವ್ಯಾಪ್ತಿಯ ಮೂಡನಿಡಂಬೂರು ಗ್ರಾಮದಲ್ಲಿ ಮೀನು ಮಾರಾಟದ ಗೂಡಂಗಡಿಯನ್ನು ಜುಲೈ 5 ರಂದು ಅನಧಿಕೃತ ಅಂಗಡಿ ಎಂದು ತೆರವುಗೊಳಿಸಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯತಡೆ ಕಾಯ್ದೆ 1989 ಮತ್ತು 2016 ತಿದ್ದುಪಡಿ ಕಲಂ 15 (ಎ)ನ ಅಡಿಯಲ್ಲಿ ನೊಂದವರ ಮತ್ತು ಸಾಕ್ಷಿದಾರರ ಹಕ್ಕುಗಳನ್ನು ರಕ್ಷಣೆ ಉಲ್ಲಂಘಿಸಿದ ಜಿಲ್ಲಾಡಳಿತದ ಕ್ರಮವನ್ನು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಉದಯ್ ಕುಮಾರ್ ತಲ್ಲೂರು ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಯಾರದೋ ದೂರಿನ ಮೇರೆಗೆ ಅಶೋಕ್ ರಾಜ್ ರವರ ಅಂಗಡಿಯನ್ನು ಏಕಾಏಕಿಯಾಗಿ ನಗರಸಭೆಯ ಆಯುಕ್ತರ ನೇತೃತ್ವದಲ್ಲಿ ತೆರವು ಮಾಡಿ ಅನ್ಯಾಯ ಮಾಡಲಾಗಿದ್ದು, ಜಿಲ್ಲಾಧಿಕಾರಿಯವರು ಈ ತಕ್ಷಣವೇ ರಾಧಾ ಅಶೋಕ್ರಾಜ್ರವರಿಗೆ ಮೀನು ವ್ಯಾಪಾರ ಮಾಡುವ ಗೂಡಂಗಡಿಯನ್ನು ಪುನರ್ ವಸತಿ ಮಾಡಿಕೊಡುವ ಬಗ್ಗೆ ಉದಯ್ ಕುಮಾರ್ ಆಗ್ರಹಿಸಿದ್ದಾರೆ.
ಅಂಗಡಿ ಮಾಲಕ ಅಶೋಕ್ ಕಾಡಬೆಟ್ಟು ಮಾತನಾಡಿ, "ನಾವು ಹುಲಿವೇಷ ಕುಣಿದು ಹೇಗೋ ಜೀವನ ನಡೆಸುತ್ತಿದ್ದೆವು ಆದರೆ ಲಾಕ್ಡೌನ್ನಿಂದ ಜೀವನ ದುಸ್ಥರವಾಗಿದೆ. ಹಾಗಾಗಿ ಸರಕಾರಿ ಜಾಗದಲ್ಲಿ ಮೀನು ಅಂಗಡಿ ಹಾಕಿ ವ್ಯಾಪಾರ ನಡೆಸುತ್ತಿದ್ದೆವು. ಅಂಗಡಿ ಮೊದಲು ಪೌರಾಯುಕ್ತರು, ಸ್ಥಳೀಯ ಶಾಸಕರು, ಕೌನ್ಸಿಲರು ಅಂಗಡಿ ಹಾಕಿ ಎಂದು ಮೌಖಿಕ ವಾಗಿ ಒಪ್ಪಿಗೆ ಕೊಟ್ಟಿದ್ದರು. ಆದರೆ ಜುಲೈ 5 ರಂದು ತೆರವು ಮಾಡಲಾಗಿದೆ. ನಗರದಲ್ಲಿ ಸಾಕಷ್ಟು ಅನಧಿಕೃತ ಕಟ್ಟಡಗಳನ್ನು ಕಟ್ಟಲಾಗಿದೆ. ಆದರೆ ಎಷ್ಟು ಕಟ್ಟಡಗಳನ್ನು ತೆರವು ಮಾಡಲಾಗಿದೆ. ನಗರಸಭೆ ಕೇವಲ ಬಡವರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಲಾಗುತ್ತಿದೆ. ನಮಗೆ ಮತ್ತೆ ತೆರವು ಮಾಡಿದ ಜಾಗದಲ್ಲಿ ವ್ಯಾಪಾರ ಮಾಡಲು ನಗರಸಭೆ ಅವಕಾಶ ಮಾಡಿಕೊಡಬೇಕು" ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಧ ಅಶೋಕ್ ರಾಜ್ ಕಾಡಬೆಟ್ಟು, ಪ್ರಮೋದ್ ಉಚ್ಚಿಲ, ಮಧುಕರ್ ಮುದ್ರಾಡಿ, ಉಪಸ್ಥಿತರಿದ್ದರು.
ಇನ್ನು ಈ ಬಗ್ಗೆ ನಗರಸಭೆಯ ಆರೋಗ್ಯಾಧಿಕಾರಿ ಕರುಣಾಕರ್ ಅವರ ವಿರುದ್ದ ಉಡುಪಿ ನಗರ ಠಾಣೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಪ್ರಕರಣ ದಾಖಲಾಗಿದೆ.