ಕಾರ್ಕಳ, ಜು 15 (DaijiworldNews/PY): ಫೇಸ್ಬುಕ್ನಲ್ಲಿ ದೇಶದ್ರೋಹದ ಪೋಸ್ಟ್ ವಿಚಾರಕ್ಕೆ ಸಂಬಂಧಪಟ್ಟಂತೆ ಪರ್ಪಲೆಗಿರಿ ದೈವಸ್ಥಾನದಲ್ಲಿ ರಾಧಾಕೃಷ್ಣ ನಾಯಕ್ ಹಿರ್ಗಾನ ಅವರು ಸತ್ಯ ಪ್ರಮಾಣ ಮಾಡಿದ್ದಾರೆ.
"ಸ್ವಾಮಿ ದೈವ, ಕಲ್ಲುರ್ಟಿ, ಕಲ್ಕುಡ, ತೂಕತ್ತೇರಿ ನಿಮ್ಮಲ್ಲೊಂದು ಪ್ರಾರ್ಥನೆ. ನಾನು ನನ್ನ ಫೇಸ್ಬುಕ್ ವಾಲ್ನಲ್ಲಿ ದೇಶದ್ರೋಹದ ಪೋಸ್ಟ್ ಮಾಡಿದ್ದೇನೆ ಎಂದು ಇಲ್ಲಿನ ಶಾಸಕರು, ನಾಯಕರು ಹಾಗೂ ಅವರ ಹಿಂಬಾಲಕರು ನನ್ನ ಮೇಲೆ ದೇಶದ್ರೋಹದ ಆರೋಪ ಮಾಡಿದ್ದಾರೆ. ಆದರೆ, ಆ ಪೋಸ್ಟ್ ನಾನು ಹಾಕಿಲ್ಲ ಎಂದು ನಿಮಗೆ ತಿಳಿದಿದೆ. ನನ್ನ ಮೇಲೆ ಆರೋಪ ಮಾಡಿದವರನ್ನು ನೀವೇ ನೋಡಿಕೊಳ್ಳಿ. ತಪ್ಪಿತಸ್ಥರಿಗೆ ಶಿಕ್ಷೆ ನೀಡಿ" ಎಂದು ಸತ್ಯ ಪ್ರಮಾಣ ಮಾಡಿದ್ದಾರೆ.
ರಾಧಾಕೃಷ್ಣ ನಾಯಕ್ ಅವರು ಫೇಸ್ ಬುಕ್ ಪುಟದಲ್ಲಿ ಕಳೆದ ಒಂದು ವರ್ಷದ ಹಿಂದೆ ಯೋಧರ ವಿರುದ್ಧ ಕೇಂದ್ರ, ರಾಜ್ಯ ಸರ್ಕಾರದ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು ಇದರ ಕುರಿತು ಕೆಲವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆದರೆ ತಮ್ಮ ಹೆಸರಿನ ಫೇಕ್ ಐಡಿ ಮೂಲಕ ಕಿಡಿಗೇಡಿಗಳು ಮಾಡಿದ ಪೋಸ್ಟ್ ಇದಾಗಿದೆ ಎಂದು ಹಾಗೂ ಇದರ ವಿರುದ್ದ ಕ್ರಮ ಕೈಗೊಳ್ಳುವಂತೆ ಉತ್ತರ ಗಂಗಮ್ಮನ ಗುಡಿ ಪೊಲೀಸ್ ಠಾಣೆಯಲ್ಲಿ 2020ರ ಆಗಸ್ಟ್ ನಲ್ಲಿ ರಾಧಾಕೃಷ್ಣ ಅವರು ದೂರು ನೀಡಿದ್ದರು.
ಇದೇ ವಿಚಾರವಾಗಿ ಕಾರ್ಕಳ ಠಾಣೆಗೆ ವಿಚಾರಣೆಗೆ ಬಂದಿದ್ದ ರಾಧಕೃಷ್ಟ ಅವರಿಗೆ ಎಸ್ಐ ಮಧು ರಾಧಾಕೃಷ್ಣ ಅವರು ಎದೆಗೆ ಕಾಲಿನಿಂದ ಒದ್ದು ದೌರ್ಜನ್ಯ ನಡೆಸಿಲಾಗಿದೆ ಎಂದು ಆರೋಪ ಕೇಳಿ ಬಂದಿತ್ತು. ರಾಧಾಕೃಷ್ಣ ಅವರು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದರು.
ಇದೀಗ ರಾಧಾಕೃಷ್ಣ ನಾಯಕ್ ಹಿರ್ಗಾನ ಅವರು ಪರ್ಪಲೆಗಿರಿ ದೈವಸ್ಥಾನಕ್ಕೆ ತೆರಳಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಸತ್ಯ ಪ್ರಮಾಣ ಮಾಡಿದ್ದಾರೆ.