ಸುಳ್ಯ, ಜು 15 (DaijiworldNews/MS): ಸೇತುವೆ ಅಥವಾ ಸರಿಯಾದ ಸಂಪರ್ಕ ರಸ್ತೆ ಇಲ್ಲದೆ ವೃದ್ದೆಯೊಬ್ಬರನ್ನು ತುಂಬಿ ಹರಿಯುವ ತೋಡಿನಲ್ಲಿ ಸ್ಥಳೀಯ ನಿವಾಸಿಗಳು ಚಿಕಿತ್ಸೆಗಾಗಿ ಸ್ಟ್ರೆಚರ್ ಹೊತ್ತೊಯ್ದಿರುವ ವಿಡಿಯೋ ವೈರಲ್ ಆಗಿದೆ. ಸಚಿವ ಎಸ್. ಅಂಗಾರ ಅವರ ಸ್ವ ಕ್ಷೇತ್ರದ ಜಾಲ್ಸೂರು ಗ್ರಾಮದ ಮರಸಂಕದಲ್ಲಿ ಈ ಘಟನೆ ನಡೆದಿದ್ದು ಇಲ್ಲಿನ ಜನರಿಗೆ ಮಳೆಗಾಲ ಬಂತೆಂದರೆ ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ಅನಿವಾರ್ಯವಾಗಿದೆ.
ಆಗಿದ್ದೇನು?
ಮರಸಂಕ ಪರಿಸರದ ಸುಮಾರು 70 ವರ್ಷದ ವೃದ್ಧೆ, ಮೂಗಿಯಾಗಿರುವ ದೇವಕಿ ಅವರು ಜು.13ರಂದು ಮನೆಯ ಆವರಣದಲ್ಲಿ ಬಿದ್ದು, ಕಾಲಿಗೆ ಗಂಭೀರ ಗಾಯಗೊಂಡಿದ್ದರು. ಇವರಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸುವುದು ಅನಿವಾರ್ಯವಾಗಿತ್ತು. ಹೀಗಾಗಿ ಮನೆಯವರು ಸೇರಿಕೊಂಡು ಸ್ಟ್ರೆಚರ್ ಮೂಲಕ ವಿಪರೀತ ಮಳೆಯಿಂದ ತುಂಬಿ ಹರಿಯುತ್ತಿದ್ದ ತೋಡನ್ನು ದಾಟಿಸಿ, ರಸ್ತೆ ಬದಿಗೆ ಹೊತ್ತುಕೊಂಡು ತಂದು ಅಲ್ಲಿಂದ ಅಂಬ್ಯುಲೆನ್ಸ್ ಮೂಲಕ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ದೇವಕಿ ಅವರನ್ನು ಸ್ಟ್ರೆಚರ್ ಮೂಲಕ ತೋಡು ದಾಟಿಸುತ್ತಿರುವ ವೀಡಿಯೋ ಇದೀಗ ವೈರಲ್ ಆಗಿದೆ.
ಜಾಲ್ಸೂರು ಗ್ರಾಮದ ಮರಸಂಕದಲ್ಲಿ ಪ.ಜಾತಿ ಹಾಗೂ ಪ.ಪಂಗಡ ಸೇರಿದಂತೆ ಇತರೆ ಒಟ್ಟು 12 ಮನೆಗಳಿದ್ದು, ಇಲ್ಲಿಯ ಜನತೆ ಸುಮಾರು 60ಕ್ಕೂ ಹೆಚ್ಚು ವರ್ಷಗಳಿಂದ ಇಲ್ಲಿ ನೆಲೆಸಿದ್ದು ಸೂಕ್ತ ಸೇತುವೆಯಾಗಲಿ, ರಸ್ತೆಯಾಗಲಿ ಇಲ್ಲದೆ ಒದ್ದಾಡುತ್ತಿದ್ದಾರೆ. ಈ ಪರಿಸರದಲ್ಲಿ ಕಳೆದ 28 ವರ್ಷಗಳ ಹಿಂದೆ ಜಿಲ್ಲಾ ಪಂಚಾಯತಿ ವತಿಯಿಂದ ಕಾಲುಸಂಕ ನಿರ್ಮಾಣಗೊಂಡಿದೆ. ಆದರೆ ಈ ಸಂಕದಲ್ಲಿ ಜನತೆಗೆ ನಡೆದುಕೊಂಡು ಹೋಗಲು ಸಾಧ್ಯವಿದ್ದರೂ ವಾಹನ ಸಂಚಾರ ಸಾಧ್ಯವಿಲ್ಲ. ಇದರೊಂದಿಗೆ ಸೂಕ್ತ ರಸ್ತೆ ವ್ಯವಸ್ಥೆ ಇಲ್ಲಿ ಇಲ್ಲ. ಹೀಗಾಗಿ ಕಾಲ್ನಡಿಗೆ ಇಲ್ಲಿನ ಜನರಿಗೆ ಅನಿವಾರ್ಯವಾಗಿದೆ. ಪ್ರತಿನಿತ್ಯ ಅಗತ್ಯ ವಸ್ತುಗಳನ್ನು ಹೊತ್ತುಕೊಂಡು ಕಾಲುದಾರಿಯಲ್ಲಿ ಸಂಚರಿಸಿ, ಕಾಲುಸಂಕದ ಮೂಲಕ ತೋಡು ದಾಟಿ ಹೋಗುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
59 ವರ್ಷಗಳಿಂದ ಸುಳ್ಯ ಮೀಸಲು ವಿಧಾನಸಭಾ ಕ್ಷೇತ್ರವಾಗಿದ್ದು, ಇಲ್ಲಿಂದ ಕಳೆದ ಆರು ಅವಧಿಗೆ ಎಸ್. ಅಂಗಾರರು ಶಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೂ, ಹಲವಾರು ವರ್ಷಗಳಿಂದ ಪ್ರತಿನಿಧಿಸುವ ಎಲ್ಲ ಪಕ್ಷದ ಸ್ಥಳಿಯ ನಾಯಕರುಗಳಿಗೆ ಈ ಸಮಸ್ಯೆ ತಿಳಿದಿದ್ದರೂ ಇಲ್ಲಿ ಜನ ಸಂಪರ್ಕ ರಸ್ತೆ, ಕಾಲುಸಂಕ, ಸಣ್ಣ ಸೇತುವೆ, ಇಂತಹ ಯಾವುದೇ ಸೌಕರ್ಯಗಳಿಲ್ಲದೆ ಬದುಕುತ್ತಿರುವುದು ವಿಪರ್ಯಾಯಸವೇ ಸರಿ.!