ಉಡುಪಿ, ಜು 14 (DaijiworldNews/PY): "ಜನಪ್ರತಿನಿಧಿಗಳು, ಉಸ್ತುವಾರಿ ಮಂತ್ರಿಗಳು ಶಾಸಕರ ಒತ್ತಾಸೆಯಂತೆ ಸುಸಜ್ಜಿತ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಆಗಿದೆ. ಆದೇಶ ಪತ್ರ ಕೊಡಬೇಕು. ಇದೇ ತಿಂಗಳು ಅಥವಾ ಅಗಸ್ಟ್ 15ರೊಳಗೆ ಜಿಲ್ಲಾಸ್ಪತ್ರೆಯ ಹೊಸ ಕಟ್ಟಡಕ್ಕೆ ಶಂಕು ಸ್ಥಾಪನೆಯನ್ನು ಮಾಡುತ್ತೇವೆ. ಮುಂದಿನ 15 ತಿಂಗಳೊಳಗೆ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಆಗುತ್ತದೆ. 2023ಕ್ಕೆ ಉಡುಪಿ ಜನತೆಯ ಸೇವೆಗೆ ಜಿಲ್ಲಾಸ್ಪತ್ರೆ ಮುಕ್ತವಾಗುತ್ತದೆ" ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, "ಉಡುಪಿಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸಲು ಎಲ್ಲಾ ಕಡೆ ಒತ್ತಡ ಇದೆ. ಮುಖ್ಯಮಂತ್ರಿಗಳು ಮುಂದೆ ರಾಜ್ಯದ 10 ಜಿಲ್ಲೆಗಳಲ್ಲಿ, ಎಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಇಲ್ಲ ಅಲ್ಲಿ ಖಾಸಗಿ ಒಡಂಬಡಿಕೆಯ ಮಾಡಿ ಪಿಪಿಪಿ ಮಾದರಿಯಲ್ಲಿ ಮಾಡಲು ಸರಕಾರ ಚಿಂತಿಸುತ್ತಿದೆ. ಕೇಂದ್ರ ಸರಕಾರ ಈಗಾಗಲೇ ಮಾದರಿ ತಯಾರು ಮಾಡಿದೆ. ಅದೆ ರೀತಿಯಲ್ಲಿ 9-10 ಜಿಲ್ಲೆಯಲ್ಲಿ ಮಾಡುತ್ತೇವೆ. ಅದರಲ್ಲಿ ಉಡುಪಿಯೂ ಒಂದು. ಸಾಕಷ್ಟು ಒಳ್ಳೆಯ ಖಾಸಗಿ ಸಂಸ್ಥೆ ಮುಂದೆ ಬರುತ್ತಿದೆ. ಈಗಾಗಲೇ ಜಿಲ್ಲಾಡಳಿತ 30 ಎಕರೆ ಜಮೀನು ಮೀಸಲಿಟ್ಟಿದೆ . ಮೂಲಭೂತ ಸೌಕರ್ಯಗಳು ಸಿಗುತ್ತಿದೆ. ಉಡುಪಿಯಲ್ಲಿ ವೈದ್ಯಕೀಯ ಕಾಲೇಜು ಮಾಡೋದು ಸುಲಭ" ಎಂದಿದ್ದಾರೆ.
"ತಾಯಿ ಮತ್ತು ಮಕ್ಕಳ ಆಸ್ಪತ್ರೆ ಯನ್ನು ಸರಕಾರ ತೆಗೆದುಕೊಂಡು ನಡೆಸುವ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು, ಇಲ್ಲಿ ತನಕ ಬಿ ಆರ್ ಶೆಟ್ಟಿ ಮ್ಯಾನೆಜ್ಮೆಂಟ್ ನಡೆಸಿಕೊಂಡು ಬಂದಿದೆ. ಈಗ ಆರ್ಥಿಕ ಸಂಕಷ್ಟದಿಂದ ಸರಕಾರದ ಸಹಾಯವನ್ನು ಕೇಳುತ್ತಾ ಇದ್ದಾರೆ. ಅದನ್ನು ಹಾಗೆಯೆ ಬಿಡುವುದಕ್ಕೆ ಆಗಲ್ಲ. ಸರಕಾರ ಗಮನಿಸುತ್ತಾ ಇದೆ. ಅವರನ್ನು ಸಭೆಗೆ ಚರ್ಚಿಸಲು ಕರೆಯಲಾಗಿದೆ. ಮುಂದೆ ಇರುವ 2 ಎಕ್ರೆ ಜಮೀನು ಇದೆ. ಅಲ್ಲಿ ಪಿಪಿಪಿ ಮಾದರಿಯಲ್ಲಿ ಆಸ್ಪತ್ರೆ ಕಟ್ಟಲು ಸರ್ಕಾರದ ಜೊತೆ ಒಡಂಬಡಿಕೆ ಆಗಿತ್ತು. ಎಲ್ಲವನ್ನೂ ವಿಮರ್ಶೆ ಮಾಡಬೇಕು. ಮುಂದಿನ ವಾರದೊಳಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೆವೆ. ಸರಕಾರ ಕೈಯಿಂದ ನಿರ್ವಹಿಸಲು ಆಗದಿದ್ದರೆ ಇನ್ಯಾರ ಕೈಯಿಂದ ಸಾಧ್ಯ ಆಗುತ್ತೆ. ಎಂತೆಂತ ಆಸ್ಪತ್ರೆಗಳನ್ನು ಸರಕಾರ ನಡೆಸಿದೆ. ಜಯದೇವ, ಕಿದುವಾ ಹೀಗೆ 18 ವೈದ್ಯಕೀಯ ಕಾಲೇಜುಗಳನ್ನು ನಿರ್ವಹಿಸುತ್ತ ಇಲ್ವ?" ಎಂದು ಪ್ರಶ್ನಿಸಿದರು.
"ಬಿ ಆರ್ ಶೆಟ್ಟಿ ಅವರು ತಂದೆ- ತಾಯಿ ಹೆಸರಲ್ಲಿ ಆಸ್ಪತ್ರೆ ಕಟ್ಟಿ ಉಚಿತ ಸೇವೆ ಕೊಡುತ್ತೇವೆ ಎಂದಿದ್ದಕ್ಕೆ ಸರಕಾರ ಒಪ್ಪಿಗೆ ನೀಡಿತು. ಈಗ ಆ ಸಂಸ್ಥೆ ಆರ್ಥಿಕ ನಷ್ಟ ಅನುಭವಿಸುತ್ತಿದೆ" ಎಂದು ಹೇಳಿದ್ದಾರೆ.
"ಕೊರೊನಾ ಮೂರನೇ ಅಲೆ ಆತಂಕ ಇರಬಾರದು ಎಂದರೆ ಜನರು ಕೊರೊನಾ ನಿಯಮಗಳನ್ನು ಪಾಲಿಸಬೇಕು. ಆಗ ಯಾವ ಅಲೆಯೂ ಬಾಧಿಸಲ್ಲ. 2 ಕೋಟಿ 60 ಲಕ್ಷ ಲಸಿಕೆ ಹಾಕಿದ್ದೇವೆ. ಇನ್ನೊಂದು ಮೂರು ಕೋಟಿ ಲಸಿಕೆ ಹಾಕಿದರೆ ಒಬ್ಬ ವ್ಯಕ್ತಿಗೆ ಒಂದು ಲಸಿಕೆ ಕೊಟ್ಟಂತೆ ಆಗುತ್ತದೆ. ಅಲೆಯ ಪ್ರಭಾವ ಕಡಿಮೆ ಆಗುತ್ತದೆ. ಅಲ್ಲಿ ತನಕ ನಮ್ಮ ಶಿಷ್ಟಾಚಾರ ಮುಂದುವರಿಯಬೇಕು ಮುನ್ನೆಚ್ಚರಿಕೆ ಕ್ರಮಗಳು ತೆಗೆದುಕೊಳ್ಳಬೇಕು. ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರಿಂದ ಕೊರೊನಾ ಮೂರನೆ ಅಲೆಯನ್ನು ಆಹ್ವಾನ ಮಾಡಿದಂತೆ" ಎಂದಿದ್ದಾರೆ.
ಜಿಲ್ಲೆಯಲ್ಲಿ ಮಕ್ಕಳ ತಜ್ಞರ ಕೊರತೆ ಇದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, "ಮಕ್ಕಳ ತಜ್ಞರನ್ನು ನೇಮಕ ಮಾಡುತ್ತಾತ್ತ ಇದ್ದೇವೆ. ಪಿಎಚ್ಸಿಗೆ ನೇಮಕ ಒಂದು ವರ್ಷದ ಸೇವೆ ಕಡ್ಡಾಯ ಎನ್ನುವವರನ್ನು ಕೂಡ ಇಲ್ಲಿಗೆ ಕಳಿಸಿದ್ದೇವೆ. ನೇರ ನೇಮಕಾತಿಯಲ್ಲೂ ಉಡುಪಿಗೆ ತಜ್ಞ ವೈದ್ಯರನ್ನು ಕಳುಹಿಸಿ ಕೊಟ್ಟಿದ್ದೇವೆ" ಎಂದು ತಿಳಿಸಿದ್ದಾರೆ.
"ಮಹಾರಾಷ್ಟ್ರ ಮತ್ತು ಕೇರಳ ಗಡಿ ಪ್ರವೇಶಿಸುವರಿಗೆ ಲಸಿಕೆ ಕಡ್ಡಾಯ. ಜಿಲ್ಲಾಡಳಿತಕ್ಕೆ ಇದನ್ನು ಗಂಭೀ ವಾಗಿ ತೆಗೆದುಕೊಳ್ಳಲು ಸೂಚಿಸಲಾಗಿದೆ. ಆರ್ಟಿಪಿಸಿಆರ್ ನೆಗಟಿವ್ ಇರುವವರಿಗೆ ಮಾತ್ರ ಕೇರಳ ಪ್ರವೇಶಿಸಬಹುದು" ಎಂದು ಹೇಳಿದ್ದಾರೆ.