ಉಡುಪಿ, ಜು14 (DaijiworldNews/MS): ಕೋವಿಡ್- 19 ಎರಡನೇ ಅಲೆ ಸಂಕಷ್ಟಕ್ಕೆ ಸಿಲುಕಿದ ಕಾರ್ಮಿಕರ ನೆರವಿಗಾಗಿ ಗ್ರಾಮ ಪಂಚಾಯತ್ ಮೂಲಕ ವಿತರಿಸಬೇಕಾಗಿದ್ದ ಕಿಟ್ ಕಾರ್ಮಿಕ ಇಲಾಖೆಯಿಂದಲೇ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಅಲೆವೂರು ಗ್ರಾಮ ಪಂಚಾಯತ್ ನ ನೊಂದಾಯಿತ ಕಾರ್ಮಿಕರಿಗಾಗಿ ಸರಕಾರದಿಂದ ಬಂದಿದ್ದ ಆಹಾರ ಕಿಟ್ ಕಾರ್ಮಿಕ ಇಲಾಖೆಯ ಮೂಲಕ ಪಡೆದುಕೊಳ್ಳಬೇಕಿತ್ತು. ಇದಕ್ಕಾಗಿ ಅಲೆವೂರು ಗ್ರಾಮ ಪಂಚಾಯತ್ ಕಾರ್ಯದರ್ಶಿಯಗೆ ಕಿಟ್ ಗಳನ್ನು ಬಂದು ಪಡೆದುಕೊಳ್ಳುವಂತೆ ಕಾರ್ಮಿಕ ಇಲಾಖೆ ನೀರೀಕ್ಷಕರಾದ ಪ್ರವೀಣ್ ಮಲ್ಲಿ ಮಾಹಿತಿ ನೀಡಿದ್ದರು.
ಆದರೆ ಇಲಾಖೆಗೆ ಕಿಟ್ ಪಡೆದುಕೊಳ್ಳಲು ತೆರಳಿದಾಗ ಅಲ್ಲಿ ಅಲೆವೂರು ಗ್ರಾಮ ಪಂಚಾಯತ್ ಗೆಂದು ಹಂಚಿಕೆ ಮಾಡಲಾಗಿದ್ದ ಕಿಟ್ ಗಳೇ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಕಾರ್ಮಿಕ ಇಲಾಖೆಯನ್ನು ಪ್ರಶ್ನಿಸಿದಾಗ ಅಲೆವೂರಿನ ಶ್ರೀಕಾಂತ್ ನಾಯಕ್ ಎಂಬವರು ಗ್ರಾಮ ಪಂಚಾಯತ್ ಸದಸ್ಯರೆಂದು ಹೇಳಿ ಕಿಟ್ ಗಳನ್ನು ಗ್ರಾಮ ಪಂಚಾಯತ್ ಗೆ ನೀಡುವುದಾಗಿ ಕೊಂಡುಹೋಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಸುಮಾರು 200ರಷ್ಟು ಕಿಟ್ ಗಳು ಇತ್ತ ಪಂಚಾಯತ್ ಕೈ ಸೇರದೆ, ಅತ್ತ ಕಾರ್ಮಿಕ ಇಲಾಖೆಯಲ್ಲಿಯೂ ಇಲ್ಲದೆ ಆಹಾರದ ಕಿಟ್ ಗಳು ಮೂರನೇ ವ್ಯಕ್ತಿ ಸೇರಿವೆ ಎನ್ನಲಾಗಿದೆ. ಕಾರ್ಮಿಕರಿಗೆ ಸೇರಬೇಕಾಗಿದ್ದ ಆಹಾರ ಕಿಟ್ ಗಳನ್ನು ಹಸ್ತಾಂತರಿಸದ ಕಾರ್ಮಿಕ ಇಲಾಖೆ ನಿರೀಕ್ಷಕರ ಹಾಗೂ ಕಿಟ್ ಕೊಂಡೊಯ್ದಿದ್ದಾನೆ ಎನ್ನಲಾದ ಖಾಸಗಿ ವ್ಯಕ್ತಿ ಶ್ರೀಕಾಂತ್ನಾಯಕ್ ವಿರುದ್ದ ಅಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷ್ಯೆ ಪುಷ್ಪಾ ಅಂಚನ್ರಿಂದ ಮಣಿಪಾಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಹಿಂದೆ ಕಾರ್ಮಿಕ ಇಲಾಖೆಯಿಂದ ನೊಂದಾಯಿತ ಕಾರ್ಮಿಕರಿಗೆ ಗ್ರಾಮ ಪಂಚಾಯತ್ ಮೂಲಕವೇ 50 ಕಿಟ್ ವಿತರಿಸಿದ್ದು ಈ ಬಾರಿ ಮಾತ್ರ ಖಾಸಗಿ ವ್ಯಕ್ತಿ ಕೈಗೆ ನೀಡಿ ಕಾರ್ಮಿಕ ಇಲಾಖೆ ಎಡವಟ್ಟು ಮಾಡಿಕೊಂಡಿದೆ.