ಉಡುಪಿ, ಜು 14 (DaijiworldNews/PY): "ಕರ್ನಾಟಕದಲ್ಲಿ ಬದಲಾವಣೆ ಆಗಬೇಕು. ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಪಡಿಸಬೇಕು. ಆ ಬದಲಾವಣೆ ದಕ್ಷಿಣ ಕನ್ನಡ, ಉಡುಪಿಯಿಂದಲೇ ಆರಂಭವಾಗಲಿ. ಕರ್ನಾಟಕದಲ್ಲಿ ಬಿಜೆಪಿ ಸರಕಾರವನ್ನು ಕಿತ್ತೆಸೆಯುವುದು ನಮ್ಮ ಮುಂದಿನ ಗುರಿ. 2012ರಲ್ಲಿ ಮೋದಿ ಪ್ರಧಾನಿಯಾಗಿ ಚುಕ್ಕಾಣಿ ಹಿಡಿದ ನಂತರ ಕೇವಲ ಸುಳ್ಳು ಹೇಳಿಕೊಂಡು ಜನತೆಯನ್ನು ಮೂರ್ಖರನ್ನಾಗಿ ಮಾಡುತ್ತಾ ಬಂದಿದ್ದಾರೆ. ನಿರುದ್ಯೋಗ ನಿರ್ಮೂಲನೆ ಮಾಡುವುದಕ್ಕಾಗಿ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದರು. ಬಿಜೆಪಿ ನೇತೃತ್ವದ ಸರಕಾರ ಬಂದ ನಂತರ ದೇಶದಲ್ಲಿ ಶೇ.30 ರಿಂದ ಶೇ.40 ಕ್ರೈಮ್ ರೇಟ್ ಹೆಚ್ಚಾಗಿದೆ. ಕೊಲೆ ಕೃತ್ಯಗಳು ಹೆಚ್ಚಾಗುತ್ತಿವೆ. ಮೋದಿ ಕೇವಲ ಹಿಂದು ಮುಸ್ಲಿಂ ಧರ್ಮದ ನಡುವೆ ಕೋಮುಗಲಭೆ ಸೃಷ್ಟಿ ಮಾಡುತ್ತಿದ್ದಾರೆ" ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಕ್ಷಾ ರಾಮಯ್ಯ ಬಿಜೆಪಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು
ಅವರು ಬುಧವಾರ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, "ಬಿಜೆಪಿಯ 25 ಸಂಸದರು ಇದುವರೆಗೆ ಏನು ಮಾಡಿದ್ದಾರೆ?. ಪ್ರಧಾನಿ ಮೋದಿಯವರ ಜೊತೆ, ಮುಖ್ಯಮಂತ್ರಿ ಜೊತೆ ಒಂದು ಸಭೆ ಮಾಡಲಿಲ್ಲ. ರಾಜ್ಯಕ್ಕೆ ವಿಶೇಷ ಅನುದಾನ ತಂದಿಲ್ಲ. ಹಾಗಾಗಿ ದೇಶದಲ್ಲಿ, ರಾಜ್ಯದಲ್ಲಿ ಸರಕಾರ ಬದಲಾವಣೆ ಆಗಬೇಕು. ಅದಕ್ಕಾಗಿ ಯುವ ಕಾಂಗ್ರೆಸ್ ಒಗ್ಗಟ್ಟಾಗಿ ಕೆಲಸ ಮಾಡಬೇಕು" ಎಂದರು.
ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ನ ಅಧ್ಯಕ್ಷ ದೀಪಕ್ ಕೋಟ್ಯಾನ್ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, "ಬಿಜೆಪಿಯು ಕಾಂಗ್ರೆಸ್ ವಿರುದ್ದ ಅಪಪ್ರಚಾರ ಮಾಡುತ್ತಲೇ ಯುವಕರನ್ನು ತನ್ನತ್ತ ಸೆಳೆಯಿತು. ಪ್ರಧಾನಿ ಮೋದಿ ಅಧಿಕಾರ ಹಿಡಿಯುವಾಗಲೇ ನಾನು ಟೀ ಮಾರುವವನು ಎಂದು ಹೇಳುತ್ತಿದ್ದರು. ಆಗಲೇ ಅವರಿಗೆ ಟೀ ಸ್ಟಾಲ್ ಮಾಡಿಕೊಡಬೇಕಿತ್ತು. ಆದರೆ ಪ್ರದಾನಿಯಾಗಿ ಚುಕ್ಕಾಣಿ ಹಿಡಿಯುವಂತೆ ಅವಕಾಶ ಕೊಟ್ಟೆವು. ಆದರೆ ಇದು ನಮ್ಮ ತಪ್ಪಲ್ಲ. ರಾಷ್ಟ್ರೀಯ ಕಾಂಗ್ರೆಸ್ನ ರಾಹುಲ್ ಗಾಂಧಿಯವರು ಕೊರೊನಾ ಎಚ್ಚರಿಕೆಯನ್ನು ನೀಡಿದ್ದರು. ಬಹುಶಃ ಅದನ್ನು ಗಂಭೀರವಾಗಿ ಸರಕಾರ ಪರಿಗಣಿಸಿದ್ದರೆ ದೇಶಕ್ಕೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ" ಎಂದು ದೀಪಕ್ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡ ಆಸೀಪ್ ಆಪಾತ್ಪಾಂದವ, ನಿತ್ಯಾನಂದ ಒಳಕಾಡು, ಈಶ್ವರ್, ಅನ್ಸರ್ ಅಹ್ಮದ್, ಡಾ ಸುನೀತಾ ಶೆಟ್ಟಿ ಇವರನ್ನು ಗುರುತಿಸಿ ಸನ್ಮಾನಿಸಲಾಯಿತು
ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ವಿನಯ್ ಕುಮಾರ್ ಸೊರಕೆ, ಮಾಜಿ ಸಚಿವರು, ವಿಶ್ವಾಸ್ ಅಮೀನ್, ಉಪಾಧ್ಯಕ್ಷ ರು ಯುವ ಕಾಂಗ್ರೆಸ್, ಸೌರಭ್ ಬಲ್ಲಾಳ, ಎನ್ಎಸ್ಯು ಐ ಘಟಕದ ಜಿಲ್ಲಾ ಅಧ್ಯಕ್ಷರು, ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಅನಿಲ್ ಯಾದವ್, ವಿದ್ಯಾ ಬಾಲಕೃಷ್ಣನ್, ಸುರಭಿ ದ್ವಿವೇದಿ, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಭವ್ಯ ಕೆ,ಆರ್, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಉಸ್ತುವಾರಿ ಹನುಮ ಕಿಶೋರ್, ರಾಜ್ಯ ಕಾರ್ಯದರ್ಶಿ ದ.ಕ ಜಿಲ್ಲಾ ಯುವ ಕಾಂಗ್ರೆಸ್ ಉಸ್ತುವಾರಿ ದೀಪಿಕಾ ರೆಡ್ಡಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಎಮ್ ಜ್ಯೋತಿಷ್, ಮನ್ನಾರ್ ಮನ್ನನ್, ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರುಗಳು, ರಮೇಶ್ ಕಾಂಚನ್, ಹರೀಶ್ ಕಿಣಿ ಪದಾಧಿಕಾರಿಗಳು ಉಪಸ್ಥಿತರಿದ್ದರು.