ಮಂಗಳೂರು, ಜು. 13 (DaijiworldNews/SM): ಡಿ.ಕೆ. ಶಿವಕುಮಾರ್ ಮುಂದಿನ ಸಿಎಂ ಎಂದು ಮೊಹಮ್ಮದ್ ನಲಪಾಡ್ ನೀಡಿರುವ ಹೇಳಿಕೆ ಬಾಯ್ತಪ್ಪಿ ಬಂದಿರಬಹುದು. ಕಾಂಗ್ರೆಸ್ ನ ಹಿರಿಯ ನಾಯಕರು, ಹೈಕಮಾಂಡ್ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ. ಮುಂದಿನ ಸಿಎಂ ಯಾರು ಎಂದು ಹೇಳುವುದು ಯುವ ಕಾಂಗ್ರೆಸ್ ನ ಕೆಲಸವಲ್ಲ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಹೇಳಿದರು.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ನಲಪಾಡ್ ಅವರು ಬಾಯ್ತಪ್ಪಿ ಈ ಹೇಳಿಕೆ ನೀಡಿರಬಹುದು. ಯುವ ಕಾಂಗ್ರೆಸ್ ನ ಪ್ರಮುಖ ಕಾರ್ಯ ಪಕ್ಷವನ್ನು ಸಂಘಟಿಸುವುದು ಹಾಗೂ ಬಲಪಡಿಸುವುದು. ನಾಯಕರುಗಳಿಗೆ ಬೆಂಬಲವಾಗಿ ನಿಲ್ಲುವುದು. ಅದನ್ನು ಬಿಟ್ಟು ಯಾರು ಮುಖ್ಯಮಂತ್ರಿ ಎಂಬುದನ್ನು ಯುವ ಕಾಂಗ್ರೆಸ್ ಹೇಳುವಂತಿಲ್ಲ ಎಂದರು.
ನನಗೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಎಷ್ಟು ಸಮಯ ನೀಡುತ್ತಾರೆ ಎನ್ನುವುದಕ್ಕಿಂತ ಕೊಟ್ಟ ಸಮಯದಲ್ಲಿ ಉತ್ತಮ ಕಾರ್ಯಗಳನ್ನು ಮಾಡಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಅವರು ಹೇಳಿದರು.