ಹಳೆಯಂಗಡಿ, ಜು 13 (DaijiworldNews/MS): ಶ್ರೀ ದುರ್ಗಾಪರಮೇಶ್ವರಿ ವಿನಾಯಕ ಮಠದಿಂದ ಕಳ್ಳರು ಲಕ್ಷಾಂತರ ಮೌಲ್ಯದ ಸೊತ್ತು ಕಳ್ಳತನ ಮಾಡಿರುವ ಘಟನೆ ಜು.13ರ ಮಂಗಳವಾರ ತಿಳಿದುಬಂದಿದೆ.
ಸೋಮವಾರ ರಾತ್ರಿ ಮಠದ ಹಿಂದಿನ ಬಾಗಿಲು ಒಡೆದು ಒಳನುಗ್ಗಿದ ಕಳ್ಳರು ಗರ್ಭಗುಡಿಯ ಬೀಗ ಮುರಿದು ಗಣಪತಿ ದೇವರ ಕವಚ, ಚಿನ್ನದ ತಿಲಕ, ಕಾಣಿಕೆ ಡಬ್ಬಿ ಮತ್ತು ಪ್ರಭಾವಳಿ ಹಾಗೂ ಶ್ರೀದೇವಿಯ ಬೆಳ್ಳಿಯ ಪ್ರಭಾವಳಿ, ಬೆಳ್ಳಿಯ ಕವಚ, ಮೂಗುತಿ ಸೇರಿದಂತೆ ಚಿನ್ನ-ಬೆಳ್ಳಿಯ ಆಭರಣಗಳನ್ನು ಕಳವುಗೈದಿದ್ದಾರೆ.
ಸುಮಾರು ಏಳೂವರೆ ಕೆ.ಜಿ.ಯಷ್ಟು ಬೆಳ್ಳಿ ಹಾಗೂ 9 ಗ್ರಾಂನಷ್ಟು ಚಿನ್ನದ ಸೊತ್ತು ಹಾಗೂ ಕಾಣಿಕೆ ಡಬ್ಬಿಯಲ್ಲಿದ್ದ ನಗದು ಸೇರಿದಂತೆ ಸುಮಾರು 6 ಲಕ್ಷ ರೂ. ವರೆಗಿನ ಸೊತ್ತು ಕಳವಾಗಿರುವುದಾಗಿ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಇಂದು ಮುಂಜಾನೆ ಪೂಜೆಗೆಂದು ಅರ್ಚಕರು ಬಂದು ಮಠ ಬಾಗಿಲು ತೆರೆದಾಗ ಕೃತ್ಯ ಬೆಳಕಿಗೆ ಬಂದಿದೆ. ಈ ಬಗ್ಗೆ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಮಂಗಳೂರು ಉತ್ತರ ವಿಭಾಗದ ಎಸಿಪಿ ಮಹೇಶ್ ಕುಮಾರ್, ಮುಲ್ಕಿ ಪೊಲೀಸ್ ಇನ್ಸ್ಪೆಕ್ಟರ್ ಕುಸುಮಾಧರ, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ.