ಉಡುಪಿ, ಜು.13 (DaijiworldNews/HR): ವಿಶಾಲ ಗಾಣಿಗರ ಹತ್ಯೆ ಪ್ರಕರಣ ಇದೀಗ ಉಡುಪಿ ಪೋಲಿಸರಿಗೆ ದೊಡ್ಡ ಸವಾಲಾಗಿ ಎದುರು ನಿಂತಿದ್ದು, ಆಕೆ ಇದ್ದ ಪ್ಲಾಟ್ನಲ್ಲಿ ಯಾವುದೇ ಸಿಸಿ ಟಿವಿಗಳಿಲ್ಲ, ಅಲ್ಲದೆ ಸುತ್ತಮುತ್ತ ವ್ಯಾಪ್ತಿಯಲ್ಲಿ ಕೂಡ ಲಭ್ಯವಾಗಿಲ್ಲ ಅಂತ ಪೋಲಿಸ್ ಮೂಲಗಳು ತಿಳಿಸಿದೆ.
ಈಗಾಗಲೇ ವಿಶಾಲರ ಸಾವಿನ ಸುತ್ತ ಹಲವರು ಪ್ರಶ್ನೆಗಳು ಕಾಡುತ್ತಿದ್ದು, ಎಲ್ಲಾ ಸಂಭಾವ್ಯ ದೃಷ್ಟಿಕೋನದಿಂದ ತನಿಖೆ ನಡೆಸಲಾಗುತ್ತಿದೆ. ಬ್ರಹ್ಮಾವರ ಪೋಲೀಸ್ ಠಾಣೆ ಸೇರಿದಂತೆ ಒಟ್ಟು ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ದಾಯ್ಜಿವಲ್ಡ್ ಗೆ ತಿಳಿಸಿದ್ದಾರೆ.
ಶರಣ ಬಸಪ್ಪ, ಉಡುಪಿ ಸಬ್ ಇನ್ಸಪೆಕ್ಟರ್, ಅನಂತ ಪದ್ಮನಾಭ, ಸರ್ಕಲ್ ಇನ್ಸ್ ಪೆಕ್ಟರ್ ಬ್ರಹ್ಮಾವರ ತನಿಖಾಧಿಯಾಗಿದ್ದು, ಪ್ರಮೋದ್ ಕುಮಾರ್, ಉಡುಪಿ ನಗರ ಠಾಣೆಯ ಪೋಲಿಸ್ ಇನ್ಸ್ ಪೆಕ್ಟರ್, ಮಣಿಪಾಲ ಠಾಣೆಯ ಮಂಜುನಾಥ್ ಎಂ, ಪೋಲಿಸ್ ನಿರಿಕ್ಷಕರು, ಶರಣ ಗೌಡ, ಉಡುಪಿ ವೃತ್ತ ನಿರೀಕ್ಷರು ಅವರ ನೇತೃತ್ವದಲ್ಲಿ ತಂಡ ರಚನೆಯಾಗಿದೆ.
ಕೇವಲ ಚಿನ್ನದ ಆಸೆಗಾಗಿಯೇ ಈ ಕೃತ್ಯವೆಸಗಿದ್ದಾರ ಅಥವಾ ಆಕೆಗೆ ಗಂಡ ರಾಮಕೃಷ್ಣ ಗಾಣಿಗರಿಂದ ಸಿಕ್ಕ ಪವರ್ ಆಫ್ ಅಟಾರ್ನಿಯಿಂದಾಗಿ ಅಸ್ತಿಯನ್ನು ಇನ್ಯಾರೋ ಲಪಟಾಯಿಸಲು ಈ ಕೃತ್ಯ ಮಾಡಲಾಗಿದೆಯೇ ಎಂಬ ಸಂಶಯ ಕಾಣುತ್ತಿದೆ. ಅಲ್ಲದೆ ಆಕೆ ಪ್ಲಾಟ್ನಲ್ಲಿ ಎರಡು ಕಾಫಿ ಕುಡಿದ ಲೋಟ ಇರುವುದು ಕಂಡು ಬಂದಿದೆ. ಹಾಗಾಗಿ ಆಕೆ ಪ್ಲಾಟ್ಗೆ ಹೋಗಿರುವ ಸಂದರ್ಭ ಪರಿಚಯದವರೇ ಯಾರೋ ಬಂದು ಹೋಗಿರಬಹುದು ಎಂಬುದು ಸಂಶಯ ವ್ಯಕ್ತವಾಗುತ್ತಿದೆ.
ಇನ್ನು ಈಗಾಗಲೆ ಪೋಲಿಸರು ಸಿಡಿಆರ್ (ಕಾಲ್ ಡಿಟೈಲ್ ರೆಕಾರ್ಡ್) ಕೂಡ ಚೆಕ್ ಮಾಡುತ್ತಿದ್ದು, ಪ್ಲಾಟ್ನಲ್ಲಿ ವಶಕ್ಕೆ ಪಡೆದ ವಸ್ತುಗಳನ್ನು ಪಾರೆನ್ಸಿಕ್ ಲ್ಯಾಬ್ ಕಳುಹಿಸಿ ಕೊಡಲಾಗಿದೆ.