ಉಡುಪಿ, ಜು.13 (DaijiworldNews/HR): ಬ್ರಹ್ಮಾವರದ ಅಪಾರ್ಟ್ಮೆಂಟ್ ಒಂದರಲ್ಲಿ ನಡೆದ ವಿಶಾಲಾ ಗಾಣಿಗ(35) ಅವರ ಹತ್ಯೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆಯಲ್ಲಿ ಪೊಲೀಸರು ಜುಲೈ 13ರಂದು ಒಬ್ಬ ವ್ಯಕ್ತಿಯನ್ನು ವಿಚಾರಣೆ ನಡೆಸಿ ಬಳಿಕ ಬಿಡುಗಡೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜುಲೈ 12ರಂದು ಬ್ರಹ್ಮಾವರದ ಅಪಾರ್ಟ್ಮೆಂಟ್ ಒಂದರಲ್ಲಿ ಮಹಿಳೆಯ ಕುತ್ತಿಗೆಗೆ ವಯರ್ ಬಿಗಿದು ಹತ್ಯೆ ಮಾಡಲಾಗಿದ್ದು, ಕೊಲೆಯಾದ ಮಹಿಳೆ ಕೆಲವು ದಿನಗಳ ಹಿಂದೆಯಷ್ಟೆ ವಿದೇಶದಿಂದ ಆಗಮಿಸಿದ್ದರು ಎನ್ನಲಾಗಿದೆ.
ಈ ಘಟನೆ ನಡೆದ ದಿನದಂದು ಮಧ್ಯಾಹ್ನ 12 ಗಂಟೆಗೆ ವಿಶಾಲಾ ಗಣಿಗಾ ತನ್ನ ಪತಿಗೆ ದೂರವಾಣಿಯಲ್ಲಿ ಸಂದೇಶ ಕಳುಹಿಸಿರುವುದು ಪೊಲೀಸ್ ತನಿಖೆಯ ವೇಳೆ ಬೆಳಕಿಗೆ ಬಂದಿದ್ದು, ಬ್ರಹ್ಮಾವರ ಬ್ಯಾಂಕ್ಗೆ ಹೋಗಿ ನಂತರ ಮಗುವಿನ ಬರ್ತ್ಡೇ ಕೇಕ್ ಆರ್ಡರ್ ಮಾಡಿರುವುದಾಗಿ ಸಂದೇಶದಲ್ಲಿ ತಿಳಿಸಿದ್ದರು.
ಇನ್ನು ಆಕೆ ಧರಿಸಿದ್ದ ಮಂಗಳಸೂತ್ರ, ಕಿವಿಯೋಲೆಗಳು ಮತ್ತು ಬಳೆಗಳು ಸೇರಿದಂತೆ 2 ಲಕ್ಷ ಮೌಲ್ಯದ ಚಿನ್ನವನ್ನು ಕಳವು ಮಾಡಲಾಗಿದೆ ಎಂದು ವರದಿಯಾಗಿದೆ.
ವಿಶಾಲಾ ಗಾಣಿಗ ಅವರ ಪತಿ ರಾಮಕೃಷ್ಣರವರ ಹಿರಿಯರ ಆಸ್ತಿಯಲ್ಲಿ ಅವರ ಪಾಲಿಗೆ ಬರುವ ಆಸ್ತಿಗೆ ಸಂಬಂಧಿಸಿದ ದಸ್ತಾವೇಜುಗಳಿಗೆ ಸಹಿ ಹಾಕಲು ಅಧಿಕಾರ ಪತ್ರವನ್ನು ನೀಡಿ ವಾಪಾಸ್ಸು ಮೂರು ತಿಂಗಳ ಹಿಂದೆ ಮೂವರು ದುಬೈಗೆ ಹಿಂದಿರುಗಿದ್ದು, ಆಸ್ತಿ ಪಾಲಿನ ಸಂಬಂಧ ವಿಶಾಲ ಗಾಣಿಗ ಮತ್ತು ಮಗು ಆರ್ವಿ ದುಬೈಯಿಂದ ಜುಲೈ 2 ರಂದು ಊರಿಗೆ ಬಂದು ಬ್ರಹ್ಮಾವರ ತಾಲೂಕು ಕುಮ್ರಗೋಡು ಗ್ರಾಮದಲ್ಲಿರುವ ಮಿಲನ ರೆಸಿಡೆನ್ಸಿಯಲ್ಲಿ ಅವರ ಪ್ಲಾಟ್ ನಲ್ಲಿ ವಾಸಮಾಡಿಕೊಂಡಿದ್ದರು ಎನ್ನಲಾಗಿದೆ.
ಇನ್ನು ಜುಲೈ 12 ರ ಸೋಮವಾರ ವಿಶಾಲಾ ಬ್ರಹ್ಮಾವರದ ತನ್ನ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾಗಿದ್ದು, ಆಕೆಯ ಕುತ್ತಿಗೆಗೆ ಕತ್ತು ಹಿಸುಕಿದ ಗುರುತುಗಳಿವೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.