ಉಡುಪಿ, ಜು 13 (DaijiworldNews/MS): "ಫಾದರ್ ಸ್ಟಾನ್ ಸ್ವಾಮಿಯವರ ಮರಣದ ಮೂಲಕ ಭಾರತದಲ್ಲಿ ಪ್ರಜಾಪ್ರಭುತ್ವ ಕೇವಲ ಪುಸ್ತಕದಲ್ಲಿ ಮಾತ್ರ ಇದೆ ಎಂಬುವುದು ಸಾಬೀತಾಗಿದೆ" ಎಂದು ಸಾಮಾಜಿಕ ಹೋರಾಟಗಾರ, ಸಹಬಾಳ್ವೆ ಸಂಘಟನೆಯ ಮುಖ್ಯಸ್ಥ ಅಮೃತ್ ಶೆಣೈ ಹೇಳಿದರು.
ಮಾನವ ಹಕ್ಕು ಹೋರಾಟಗಾರ ಫಾದರ್ ಸ್ಟಾನ್ ಸ್ವಾಮಿ ಅವರಿಗೆ ನುಡಿನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು "ಕಾರ್ಟೂನಿಸ್ಟ್ ಗಳ ಮೇಲೆ, 18 ವರ್ಷದ ಹುಡುಗಿಯ ಮೇಲೆ ಯುಎಪಿಎ ಮತ್ತು ಎನ್ ಎಸ್ ಎ ಯಂತಹ ಕಾಯ್ದೆಗಳ ಅಡಿಯಲ್ಲಿ ಕೇಸು ದಾಖಲಾಗುತ್ತದೆ. 137 ಕೋಟಿ ಜನ ಇರುವ ವಿಶ್ವದ ಸುಪರ್ ಪವರ್ ರಾಷ್ಟ್ರದಲ್ಲಿ ೮೪ ವರ್ಷದ ವಯೋವೃದ್ದ ದೇಶದ ಸಾರ್ವಭೌಮತೆಯನ್ನು ಹಾಳು ಮಾಡಲು ಸಂಚು ಹೂಡುತ್ತಾರೆ ಎಂಬ ಆರೋಪ ವಿಪರ್ಯಾಸ. ಸರಕಾರ ಅಂದರೆ ನರೇಂದ್ರ ಮೋದಿ, ಮೋದಿಯ ವಿರುದ್ದ ಮಾತನಡುವವರು, ಬರೆಯುವವರು ದೇಶದ್ರೋಹಿಗಳು ಎಂಬ ಪಟ್ಟವನ್ನು ಕಟ್ಟುವ ಕೆಲಸ ಈ ದೇಶದಲ್ಲಿ ನಡೆಯುತ್ತಿದೆ. ಫಾದರ್ ಸ್ಟಾನ್ ಸ್ವಾಮಿ ನಿಜವಾದ ದೇಶಭಕ್ತ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದದ್ದು ಕೇವಲ ಯು.ಪಿ.ಎ ಸರಕಾರವನ್ನು ಟೀಕೆ ಮಾಡಿ. ಇವರು ಟೀಕೆ ಮಾಡಿ ಅಧಿಕಾರಕ್ಕೆ ಬಂದ ಮೇಲೆ ಇವರನ್ನು ಟೀಕೆ ಮಾಡುವವರನ್ನು ಜೈಲಿಗೆ ಹಾಕುತಿದ್ದಾರೆ. ಇದನ್ನು ನಾವು ನೋಡಿ ಸುಮ್ಮನೆ ಕೂತರೆ ಮತ್ತೊಮ್ಮೆ ಬ್ರಿಟಿಷರಿಗಿಂತ ಘೋರವಾದ ಆಡಳಿತವನ್ನು ಈ ದೇಶದಲ್ಲಿ ತರುತ್ತಾರೆ, ಮತ್ತೊಮ್ಮೆ ಜಲಿಯನ್ ವಾಲಾಭಾಗ್ ಮಾಡುತ್ತಾರೆ. ಇದು ಸ್ವಾತಂತ್ರ್ಯಯವನ್ನು ಉಳಿಸುವುದಕ್ಕಾಗಿ ಮಾಡುವ ಹೋರಾಟ" ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಚಿಂತಕರಾದ ಫಣಿರಾಜ್ ಅವರು "ಆದಿವಾಸಿಗಳ ಮೂಲಭೂತ ಹಕ್ಕಾದ ಜಲ್-ಜಂಗಲ್-ಜಮೀನ್ ಗೆ ಸಂಚಕಾರ ಬರುತ್ತಿರುವುದನ್ನು ಮನಗಂಡ ಫಾದರ್ ಸ್ಟಾನ್ ಸ್ವಾಮಿ ಭಾರತದ ಸಂವಿಧಾನದಲ್ಲಿ ಆದಿವಾಸಿಗಳಿಗೆ ಇರುವ ಹಕ್ಕುಗಳ ಬಗ್ಗೆ ಅಧ್ಯಯನ ಮಾಡಿ ಅದನ್ನು ಆದಿವಾಸಿಗಳ ನಡುವೆ ಪ್ರಚುರಪಡಿಸಿದರು. ಅವರು ಬಂದೂಕು, ಕತ್ತಿ ಯನ್ನು ಉಪಯೋಗಿಸದೇ ಕೇವಲ ಸಂವಿಧಾನಿಕವಾಘಿ ಸರಕಾರದ ವಿರುದ್ದ ಹೋರಾಡಿದರು. ಸ್ಟಾನ್ ಸ್ವಾಮಿಯವರು ಭೀಮಾ ಕೊರೆಗಾಂವ್ ಸಭೆಯಲ್ಲಿ ಭಾಗವಹಿಸಲೇ ಇರಲಿಲ್ಲ. ಆದರೂ ಅವರನ್ನು ಗಲಭೆಗೆ ಕಾರಣ ಎಂದು ಹೇಳಿ ಎಫ್.ಐ.ಆರ್ ನಲ್ಲಿ ಅವರನ್ನು ಹೆಸರಿಸಲಾಯಿತು. ಸ್ಟಾನ್ ಸ್ವಾಮಿಯವರನ್ನು ಎನ್.ಐ.ಎ ಬಂಧಿಸಿದ ಬಳಿಕ ಅರ್ಧ ಗಂಟೆಯ ಕಾಲ ಕೂಡಾ ವಿಚಾರಣೆ ನಡೆಸದೆ ತಲೋಜಾ ಜೈಲಿಗೆ ಅವರನ್ನು ಹಾಕಲಾಯಿತು. ಈ ಸಾವಿನ ಜವಾಬ್ದಾರಿಯನ್ನು ಯಾರು ಹೊರಬೇಕು ಎಂಬ ಪ್ರಶ್ನೆಯನ್ನು ನಾವು ಕೇಳಬೇಕಾಗಿದೆ. ಯಾವುದೇ ಸಾಕ್ಷ್ಯಧಾರಗಳು ಇಲ್ಲದೇ ಭೀಮಾ ಕೊರೆಗಾಂವ್ ಪ್ರಕರಣದಲ್ಲಿ 15 ಮಂದಿಯನ್ನು ಯು.ಎ.ಪಿ.ಎ ಅಡಿ ಬಂಧಿಸಲಾಗಿದೆ" ಎಂದು ಅವರು ಹೇಳಿದರು.
ಈ ಸಂಧರ್ಭದಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ದ.ಸಂ.ಸ. ಮುಖ೦ಡ ಸು೦ದರ್ ಮಾಸ್ತರ್, ಕಾಂಗ್ರೆಸ್ ಮುಖ೦ಡರಾದ ರಮೇಶ್ ಕಾಂಚನ್, ವೆರೋನಿಕ ಕರ್ನೇಲಿಯೋ, ಪ್ರಶಾಂತ್ ಜತ್ತನ್ನ, ಗಣೇಶ್ ನೇರ್ಗಿ, ರೋಶನಿ ಒಲೆವೇರಾ, ಚಿಂತಕ ಫಾ| ವಿಲಿಯಂ ಮಾರ್ಟೀಸ್, ಫಾ| ಚೇತನ್ ಲೋಬೋ ಸೇರಿದಂತೆ ಇತರರು ಕಥೋಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷೆ ಮೇರಿ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.