ಮಂಗಳೂರು, ಜು. 12 (DaijiworldNews/SM): ಕೋವಿಡ್-19 ಅವಧಿಯಲ್ಲಿ ದಕ್ಷಿಣ ಕನ್ನಡ ಸಾರಿಗೆ ಪ್ರಾಧಿಕಾರ ನಗರ ಮತ್ತು ಗ್ರಾಮಾಂತರ ಪ್ರಯಾಣ ದರ ಏರಿಕೆ ಮಾಡಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಖಾಸಗಿ ಬಸ್ ಮಾಲೀಕರು ಹೆಚ್ಚುವರಿ ದರ ಪಡೆದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಸಾರಿಗೆ ಇಲಾಖೆ ಎಚ್ಚರಿಸಿದೆ.
ಸಾಂದರ್ಭಿಕ ಚಿತ್ರ
ಮೋಟಾರು ವಾಹನ ಕಾಯ್ದೆ ಹಾಗೂ ರಾಜ್ಯ ಸರ್ಕಾರದ ಅಧಿಸೂಚನೆಯ ಪ್ರಕಾರ ನಗರ ಮತ್ತು ಗ್ರಾಮಾಂತರ ಪ್ರಯಾಣ ದರವನ್ನು ನಿಗದಿಪಡಿಸಲಾಗಿದೆ. ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳಿಗೆ ಅಧಿಕಾರ ನೀಡಲಾಗಿದೆ. ಆದರೆ, ದರ ಏರಿಕೆ ಮಾಡುವ ಅಧಿಕಾರ ನೀಡಿಲ್ಲ.
ಒಂದೊಮ್ಮೆ ಬಸ್ ಪ್ರಯಾಣ ದರ ಏರಿಕೆ ಮಾಡಿದ್ದಲ್ಲಿ, ಬಸ್ಸಿನ ನೋಂದಣಿ ಸಂಖ್ಯೆ ಹಾಗೂ ರೂಟ್ ಮಾಹಿತಿಯನ್ನು ಲಿಖಿತ ಪುರಾವೆಯೊಂದಿಗೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಕಚೇರಿಗೆ ಸಲ್ಲಿಸಬೇಕು. ಅಂತಹ ವಾಹನಗಳ ಮೇಲೆ ನಿರ್ಧಾಕ್ಷೀಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.