ಕಾಸರಗೋಡು, ಜು. 12 (DaijiworldNews/HR): ಅವೈಜ್ಞಾನಿಕ ಕಾರಣ ನೀಡಿ ವ್ಯಾಪಾರ ಮಳಿಗೆಗಳನ್ನು ತೆರೆಯಲು ಅವಕಾಶ ನೀಡದಿರುವುದನ್ನು ಪ್ರತಿಭಟಿಸಿ ಬದಿಯಡ್ಕದಲ್ಲಿ ವರ್ತಕರು ಸೋಮವಾರ ಭಿಕ್ಷಾಟನೆ ನಡೆಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ಕೇರಳ ವರ್ತಕರ ಒಕ್ಕೂಟ ಸಮನ್ವಯ ಸಮಿತಿ ಯ ಬದಿಯಡ್ಕ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕೊರೊನಾ ಎರಡನೇ ಅಲೆ ಆರಂಭವಾದ ಬಳಿಕ ಬದಿಯಡ್ಕ ಪೇಟೆಯಲ್ಲಿ ವ್ಯಾಪಾರ ಮಳಿಗೆಗಳನ್ನು ಬಂದ್ ಮಾಡಲಾಗಿದೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ ಎಂದು ವ್ಯಾಪಾರ ಮಳಿಗೆಗಳನ್ನು ತೆರೆಯಲು ಅನುಮತಿ ನೀಡುತ್ತಿಲ್ಲ. ಅವೈಜ್ಞಾನಿಕ ಟಿ.ಆರ್.ಪಿ ಆಧಾರದಲ್ಲಿ ಅಧಿಕಾರಿಗಳು ಇಂತಹ ಕ್ರಮ ತೆಗೆದುಕೊಳ್ಳುತ್ತಿದ್ದು, ಈ ಮಾನದಂಡವನ್ನು ಕೂಡಲೇ ಹಿಂತೆಗೆದು ವ್ಯಾಪಾರ ಮಳಿಗೆಗಳನ್ನು ತೆರೆಯಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.
ಸಮಿತಿಯ ಮುಖಂಡರಾದ ಕುಂಜಾರು ಮುಹಮ್ಮದ್ ಹಾಜಿ ಪ್ರತಿಭಟನೆಯನ್ನು ಉದ್ಘಾಟಿಸಿದರು. ರವಿ ಶಿವಶಕ್ತಿ, ಉದಯಕುಮಾರ್, ರಾಜು ಸ್ಟೀಫನ್, ಹಮೀದ್, ನರೇಂದ್ರ ಬಿ. ಎನ್, ಜ್ಞಾನದೇವ ಶೆಣೈ ಮೊದಲಾದವರು ಉಪಸ್ಥಿತರಿದ್ದರು.