ಬಂಟ್ವಾಳ, ಜು 12 (DaijiworldNews/PY): "ಭಾವನಾತ್ಮಕ ವಿಚಾರಗಳನ್ನು ಬಿಂಬಿಸಿ ಜನರನ್ನು ಹಾದಿ ತಪ್ಪಿಸುವ ಬಿಜೆಪಿ ಆಳ್ವಿಕೆಯ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರಜ್ಞಾವಂತ ಸಮೂಹ ಜಾತಿ ಮತ ಪಕ್ಷ ಬೇಧಗಳನ್ನು ಮರೆತು ಪ್ರತಿಭಟನೆ ನಡೆಸಬೇಕಾಗಿದೆ" ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಪೆಟ್ರೋಲ್, ಡೀಸೆಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ವಿರೋಧಿಸಿ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಬಂಟ್ವಾಳ ಹನುಮಾನ್ ಮಂದಿರ ಬಡ್ಡಕಟ್ಟೆದಿಂದ ಕೈಕಂಬ ಜಂಕ್ಷನ್ ಬಿ. ಸಿ ರೋಡ್ ತನಕ ಸೈಕಲ್ ಜಾಥ ಮತ್ತು ಪಾದಯಾತ್ರೆಗೆ ಚಾಲನೆ ನೀಡಿ, ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
"ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ದುಬಾರಿಯಾಗಿದ್ದಾಗಲೂ, ಜನಸಾಮಾನ್ಯರಿಗೆ ಹೊರೆಯಾಗದ ಆಡಳಿತ ನೀಡಿದ ಯುಪಿಎ ಸರ್ಕಾರದ ಪ್ರಧಾನಿ ಮನಮೋಹನ್ ಸಿಂಗ್ ಅವರ ಕಾರ್ಯವೈಖರಿಗೆ ವ್ಯತಿರಿಕ್ತವಾದ ಆಡಳಿತ ಈಗಿನ ಮೋದಿ ಸರ್ಕಾರ ನೀಡುತ್ತಿದೆ. ಬದಲಾವಣೆ ತರುತ್ತೇವೆಂದ ಮೋದಿಯ ಗಡ್ಡದಲ್ಲಿ ಬದಲಾವಣೆ ಕಾಣಿಸುತ್ತದೆಯೇ ವಿನಃ ದೇಶದಲ್ಲಿ ಯಾವುದೇ ಒಳ್ಳೆಯ ಬದಲಾವಣೆಗಳು ಕಾಣಿಸುತ್ತಿಲ್ಲ" ಎಂದರು.
ಕೆಪಿಸಿಸಿ ಕಾರ್ಯದರ್ಶಿ ಸವಿತಾ ರಮೇಶ್ ಮಾತನಾಡಿ, "ಸಿಟಿ ರವಿ ಕಾಂಗ್ರೆಸ್ ಬಗ್ಗೆ ಟೀಕಿಸುತ್ತಾರೆ, ಆದರೆ ದೇಶದ ಜನತೆ ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಸ್ಪಂದಿಸುವ ನೈತಿಕತೆ ಇಲ್ಲವಾಗಿದೆ" ಎಂದರು.
ಮಾಜಿ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇ ಗೌಡ ಮಾತನಾಡಿ, "ಯಾವ ಸಂಸದರಿಗೂ ಪ್ರಧಾನಿ ಎದುರು ಮಾತನಾಡಲು ತಾಕತ್ತಿಲ್ಲ. ಪ್ರಧಾನಿಯವರೂ ಡಿಸ್ಟೆನ್ಸ್ ಮೇಂಟೆನ್ಸ್ ಮಾಡಿದ್ದಾರೆ. ಜನರ ಜೊತೆ ಬೆರೆಯುತ್ತಿಲ್ಲ. ರೈತರ ಸಂಕಷ್ಟಕ್ಕೂ ಸ್ಪಂದಿಸುತ್ತಿಲ್ಲ, ಉದ್ಯೋಗ ಸೃಷ್ಟಿಯ ಭರವಸೆ ಯಷ್ಟೆ ಸಿಕ್ಕಿದೆ. ಪ್ರಧಾನಿ ಮೋದಿ ಮಾತಾಡಿದ್ದಾರೆ ಕೆಲಸ ಮಾಡ್ಲಿಲ್ಲ. ಆದರೆ ಮನಮೋಹನ್ ಸಿಂಗ್ ಮೌನವಾಗಿದ್ರೂ ಕೆಲಸ ಮಾಡಿದ್ದಾರೆ ಎನ್ನುವುದನ್ನು ಜನತೆ ಮರೆಯಬಾರದು" ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷಹರೀಶ್ ಕುಮಾರ್ ಕೆ ಮಾತನಾಡಿ, "ಮೋದಿ ಸರ್ಕಾರ ಸುಳ್ಳು ಭರವಸೆಗಳನ್ನು ನೀಡಿ ಜನರಿಗೆ ಮೋಸ ಮಾಡಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶೋಭಕ್ಕ ಎಲ್ಲಿದ್ದಾರೆ..?
"ಯುಪಿಎ ಅಧಿಕಾರವಧಿಯಲ್ಲಿ ಪೆಟ್ರೋಲ್ ಬೆಲೆ 70 ಆಗಿದ್ದಾಗ, ಸೈಕಲ್ ಏರಿ, ರಸ್ತೆ ಬದಿಯಲ್ಲಿ ಪಕೋಡ ಮಾರಿ ಪ್ರತಿಭಟನೆ ನಡೆಸಿದ್ದ ಶೋಭಕ್ಕ ಈಗ ಎಲ್ಲಿದ್ದಾರೆ? ಈಗೇನು ಮಾಡುತ್ತಿದ್ದಾರೆ?" ಎಂದು ಪ್ರಮುಖರಾದ ಹರೀಶ್ ಕುಮಾರ್, ಸವಿತಾ ರಮೇಶ್, ಗಾಯತ್ರಿ ಶಾಂತೇ ಗೌಡ ಪ್ರಶ್ನಿಸಿದರು.
ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ವೀಣಾ ಭಟ್,ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ ಶಾಹುಲ್ ಹಮೀದ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಲುಕ್ಮಾನ್ ಬಂಟ್ವಾಳ, ಕಿಸಾನ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ, ಪುರಸಭಾ ಅಧ್ಯಕ್ಷ ಮೊಹಮ್ಮದ್ ಶರೀಫ್, ಉಪಾಧ್ಯಕ್ಷೆ ಜೇಸಿಂತ ಡಿ'ಸೋಜ, ಮಹಾನಗರ ಪಾಲಿಕೆಯ ಸದಸ್ಯ ಮೊಹಮ್ಮದ್ ರೌಫ್, ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಎಮ್ ಎಸ್ ಮೊಹಮ್ಮದ್, ತಾಲೂಕು ಪಂಚಾಯತ್ ಉಪಾಧ್ಯಕ್ಷ, ಜಿಲ್ಲಾ ಅಸಂಘಟಿತ ಕಾರ್ಮಿಕ ಅಧ್ಯಕ್ಷ ಅಬ್ಬಾಸ್ ಅಲಿ, ಜಿಲ್ಲಾ ಸಹಕಾರಿ ಸಂಘದ ಸಂಚಾಲಕ ಸುದರ್ಶನ್ ಜೈನ್, ತಾಲೂಕು ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ವಿ ಶೆಟ್ಟಿ, ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್ ಹಾಗೂ ಸುದೀಪ್ ಕುಮಾರ್ ಶೆಟ್ಟಿ, ಬಂಟ್ವಾಳ ಹಾಗೂ ಪಾಣೆಮಂಗಳೂರು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ವಿ ಪೂಜಾರಿ, ಶ್ರೀಮತಿ ಲವೀನಾ ವಿಲ್ಮ ಮೋರಸ್, ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರುಗಳಾದ ಸುರೇಶ್ ಜೋರ, ಮೊಹಮ್ಮದ್ ನವಾಝ್ ಬಡಕಬೈಲು ಹಾಗೂ ವಿವಿಧ ವಲಯ ಅಧ್ಯಕ್ಷರು ಬೂತ್ ಅಧ್ಯಕ್ಷರು ಪಂಚಾಯತ್ ಅಧ್ಯಕ್ಷರು ಪಂಚಾಯತ್ ಸದಸ್ಯರು ಮತ್ತು ಬ್ಲಾಕ್ ಕಾಂಗ್ರೆಸ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು.