ಕಾರ್ಕಳ, ಜು 12 (DaijiworldNews/MS): ನನ್ನ ಮೇಲೆ ರಾಜ್ಯದ ಯಾವುದೇ ಠಾಣೆಯಲ್ಲಿ ದೇಶ ದ್ರೋಹದ ಕೇಸು ದಾಖಲಾಗದಿದ್ದರೂ ಶಾಸಕ ಸುನೀಲ್ ಕುಮಾರ್ ಮತ್ತು ಬಿಜೆಪಿ ಪದಾಧಿಕಾರಿಗಳು ನನ್ನನ್ನು ದೇಶದ್ರೋಹಿ ಎಂದು ಹೇಳಿಕೆ ನೀಡಿ ನನ್ನ ಮಾನಹಾನಿ ಮಾಡಿದ ಬಗ್ಗೆ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲಿದ್ದೇನೆ ಎಂದು ರಾಧಾಕೃಷ್ಣ ಹಿರ್ಗಾನ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ್ರೋಹ ಪೋಸ್ಟ್ ಹಾಕಿ , ಸೈನಿಕರಿಗೆ ಅವಹೇಳನ ಮಾಡಿದ್ದು ಸಾಬೀತುಪಡಿಸಿದರೆ ನಾನು ಗಲ್ಲಿಗೇರಲು ಸಿದ್ದ, ಇಲ್ಲವಾದಲ್ಲಿ ಅವಮಾನಕ್ಕೊಳಗಾದ ನಾನು ಶಾಸಕ ಸುನೀಲ್ ಕುಮಾರ್ ಅವರ ಮನೆ ಮುಂದೆ ಆತ್ಮಹತ್ಯೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ನನ್ನ ನಕಲಿ ಫೇಸ್ ಬುಕ್ ಖಾತೆಯ ಬಗ್ಗೆ ದೂರು ನೀಡಿ ವರ್ಷವಾಗುತ್ತಾ ಬಂದರೂ ಆ ಬಗ್ಗೆ ಯಾಕೆ ತನಿಖೆಯಾಗುತ್ತಿಲ್ಲ? ಈ ಹಿಂದೆ ನಾನು ಮೂರ್ನಾಲ್ಕು ಬಾರಿ ಠಾಣೆಗೆ ಹಾಜರಾದ ಸಂದರ್ಭ ಒಂದು ಬಾರಿ ನನ್ನ ಹೇಳಿಕೆಯನ್ನು ಪಡೆದಿದ್ದು, ಪ್ರತಿ ಬಾರಿಯೂ ಸಂದರ್ಶಕರ ಪುಸ್ತಕದಲ್ಲಿ ಸಹಿ ಹಾಕಿದ್ದೆ. ಅದಾಗ್ಯೂ ತಾನು ತಲೆ ಮರೆಸಿಕೊಂಡಿದ್ದೆ ಎಂದು ಶಾಸಕರು ಸುಳ್ಳು ಹೇಳಿದ್ದಾರೆ.
ನಾನು ಪೊಲೀಸರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ದಾಖಲಾದ ನಂತರ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದೇನೆಂದು ತಪ್ಪು ದೂರು ದಾಖಲಿಸಲು ಯಾರ ಒತ್ತಡವಿತ್ತು?ಒಬ್ಬ ಸಾಮಾನ್ಯ ವ್ಯಕ್ತಿ ಪೊಲೀಸ್ ಸ್ಟೇಷನ್ ಒಳಗೆ ಅದೂ ಅಷ್ಟೊಂದು ಪೋಲೀಸರ ಮದ್ಯೆ ಠಾಣಾಧಿಕಾರಿಯವರಿಗೆ ಹಲ್ಲೆ ನಡೆಸಲು ಸಾಧ್ಯವೇ? ಪೋಲೀಸರೇನು ಅಷ್ಟು ದುರ್ಬಲರೇ? ನನ್ನ ತನಿಖೆ ನಡೆಸಿದ ಪೊಲೀಸ್ ಅಧಿಕಾರಿ ಮಧು ಅವರಿಗೆ ನಾನೇ ತಪ್ಪು ಮಾಡಿದ್ದೇನೆಂದು ಖಚಿತವಾಗಿದ್ದರೆ ನನ್ನ ಮೇಲೆ ಕೇಸು ದಾಖಲಿಸದೆ, ಹೇಳಿಕೆಯನ್ನೂ ಪಡೆಯದ ನನ್ನನ್ನು ಮನೆಗೆ ಕಳುಹಿಸಲು ಕಾರಣವೇನು?ಎಂದು ಸರಣಿ ಪ್ರಶ್ನೆಗಳ ಮೂಲಕ ರಾಧಾಕೃಷ್ಣ ನಾಯಕ್ ಪ್ರಶ್ನಿಸಿದ್ದಾರೆ.
ನಾನೇನಾದಾರೂ ದೇಶ ದ್ರೋಹದ ಕೆಲಸ ಅಥವಾ ಸೈನಿಕರ ವಿರುದ್ಧ ಅವಹೇಳನಕಾರಿ ಪೋಸ್ಟ್ ಗಳನ್ನು ಹಾಕಿದ್ದು ಸಾಬೀತಾದರೆ ಯಾವುದೇ ಶಿಕ್ಷೆ ಎದುರಿಸಲು ಸಿದ್ದನಿದ್ದೇನೆ. ಆದರೆ ಶಾಸಕರು ಅಥವಾ ಅವರ ಯಾರೇ ಪದಾಧಿಕಾರಿಗಳು ಯಾವುದೇ ಪವಿತ್ರ ಸ್ಥಳದಲ್ಲಿ ಪ್ರಮಾಣಿಸಲು ಸಿದ್ದರಿದ್ದರೆಯೇ ಎಂದು ಇದೇ ವೇಳೆ ಸವಾಲು ಹಾಕಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಯೋಧರ ವಿರುದ್ಧ ಪೋಸ್ಟ್ ವಿಚಾರಕ್ಕೆ ಸಂಬಂಧಿಸಿ ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ವಿಚಾರಣೆ ಸಂದರ್ಭದಲ್ಲಿ ರಾಧಾಕೃಷ್ಣ ನಾಯಕ್ ಅವರಿಗೆ ಕಾರ್ಕಳ ಟೌನ್ ಎಸ್ ಐ ಮಧು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು.'