ಕುಂದಾಪುರ, ಜು 12 (DaijiworldNews/MS): ಪ್ರೇಮಿಗಳ ನಡುವಿನ ಭಿನ್ನಾಭಿಪ್ರಾಯವನ್ನೇ ಬಂಡವಾಳ ಮಾಡಿಕೊಂಡ ವ್ಯಕ್ತಿಯೊಬ್ಬ ಯುವತಿಯನ್ನು ನ್ಯಾಯ ದೊರಕಿಸಿಕೊಡುವುದಾಗಿ ನಂಬಿಸಿ, ಪತ್ರಿಕೆ ಹಾಗೂ ಪೊಲೀಸರಿಗೆ ಕೊಡುವ ನೆಪದಲ್ಲಿ ಹಣ ಪಡೆದು ವಂಚಿಸಿದ್ದಾನೆ ಎಂದು ಯುವತಿಯೊಬ್ಬಳು ಶಂಕರನಾರಾಯಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಯುವತಿ ನೀಡಿದ ದೂರಿನ ಅನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.
ಘಟನೆಯ ವಿವರ : ಶಂಕರನಾರಾಯಣ ಠಾಣಾ ವ್ಯಾಪ್ತಿಯ ನೆಂಚಾರು ಎಂಬಲ್ಲಿಯ ಯುವತಿ ಹಾಗೂ ಹಾಲಾಡಿಯ ಯೋಗೀಶ ನಾಯ್ಕ ಎಂಬುವರು ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಬಳಿಕ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ನಡೆದ ಕಾರಣ ಯುವತಿ ಶಂಕರನಾರಾಯಣ ಠಾಣೆಗೆ ದೂರು ನೀಡಿದ್ದಳು. ಠಾಣೆಯಲ್ಲಿ ಪಂಚಾಯಿತಿ ನಡೆದು ಇಬ್ಬರೂ ಪ್ರತ್ಯೇಕವಾಗಿದ್ದರು ಎನ್ನಲಾಗಿದೆ. ಬಳಿಕ ಯುವತಿ ಕುಂದಾಪುರ ಆಸ್ಪತ್ರೆಯೊಂದರಲ್ಲಿ ಶುಶ್ರೂಷಕಿಯಾಗಿದ್ದು, ಕಟ್ ಬೆಲ್ತೂರು ನಿವಾಸಿ ಶೇಖರ್ ಬಳೆಗಾರ್ ಎಂಬಾತ ತನ್ನ ಪತ್ನಿಯ ಆರೋಗ್ಯ ಸಮಸ್ಯೆಯಿಂದಾಗಿ ಅದೇ ಆಸ್ಪತ್ರೆಗೆ ಬಂದಿದ್ದ. ಈ ಸಂದರ್ಭ ಯುವತಿ ಹಾಗೂ ಶೇಖರ ಬಳೆಗಾರ್ ಪರಿಚಯವಾಗಿದ್ದು, ಯುವತಿ ತನ್ನ ಸಮಸ್ಯೆ ಹೇಳಿಕೊಂಡಿದ್ದಾಳೆ ಎನ್ನಲಾಗಿದೆ. ಬಳಿಕ ತನಗೆ ಅಧಿಕಾರಿಗಳು ಹಾಗೂ ಪತ್ರಿಕೆಯವರ ಸಂಪರ್ಕ ಇದೆ ಎಂದು ನಂಬಿಸಿ, ಅವರಿಗೆ ಹಣ ಕೊಡಬೇಕಾಗುತ್ತದೆ ಎಂದು ಹೇಳಿದ್ದು, ಮೂರು ಬಾರಿ ಒಟ್ಟು 95 ಸಾವಿರ ರೂಪಾಯಿ ಹಣ ಪಡೆದುಕೊಂಡಿದ್ದು ಇನ್ನೂ 1 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಷ್ಟು ಹಣ ಇಲ್ಲ ಎಂದಾಗ ಪತ್ರಿಕೆಯಲ್ಲಿ ನಿನ್ನ ಬಗ್ಗೆ ಬರೆಯಿಸುವುದಾಗಿ ಬೆದರಿಕೆ ಹಾಕಿ ಬ್ಲ್ಯಾಕ್ ಮೇಲ್ ಮಾಡಿರುವುದಾಗಿ ಯುವತಿ ಶಂಕರನಾರಾಯಣ ಠಾಣೆಗೆ ದೂರು ನೀಡಿದ್ದಳು.
ಪೊಲೀಸರು ಆರೋಪಿ ಶೇಖರ ಬಳೆಗಾರನನ್ನು ಶನಿವಾರ ಸಂಜೆ ಬಂಧಿಸಿದ್ದು, ಭಾನುವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಧೀಶರು ಆರೋಪಿಗೆ ಜಾಮೀನು ನೀಡಿದ್ದಾರೆ. ಶಂಕರನಾರಾಯಣ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.