ಉಡುಪಿ, ಜು. 11 (DaijiworldNews/SM): 2022 ಜನವರಿ 18ರಂದು ನಡೆಯುವ ಕೃಷ್ಣಾಪುರ ಮಠದ ಪರ್ಯಾಯ ಪೂರ್ವ ವಿಧಿ ವಿಧಾನಗಳಲ್ಲಿ ಮೂರನೆಯದಾದ ಕಟ್ಟಿಗೆ ಮುಹೂರ್ತವು ಆದಿತ್ಯವಾರ ಬೆಳಿಗ್ಗೆ ನಡೆಯಿತು. ಶ್ರೀ ಕೃಷ್ಣ ಮಠದ ಮಧ್ವ ಸರೋವರದ ಈಶಾನ್ಯ ಭಾಗದಲ್ಲಿ ಕಾರ್ಯಕ್ರಮವು ನಡೆಯಿತು.
ಇದಕ್ಕೂ ಮುನ್ನ ಕೃಷ್ಣಾಪುರ ಮಠದ ಪಟ್ಟದ ದೇವರಾದ ಕಾಳೀಯಮರ್ಧನ ಕೃಷ್ಣ ಹಾಗೂ ನರಸಿಂಹ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ, ಪ್ರಾರ್ಥನೆ, ನವಗ್ರಹ ಪೂಜೆ ಸಲ್ಲಿಸಲಾಯಿತು. ಬಳಿಕ ಕಟ್ಟಿಗೆಯನ್ನು ತಲೆಹೊರೆಯಲ್ಲಿ ಹೊತ್ತುಕೊಂಡು ಚಂದ್ರೇಶ್ವರ, ಅನಂತೇಶ್ವರ, ಮಧ್ವಾಚಾರ್ಯರ ದರ್ಶನದ ಬಳಿಕ ಮಧ್ವ ಸರೋವರದ ಈಶಾನ್ಯ ಭಾಗದಲ್ಲಿ ಕಟ್ಟಿಗೆಗಳನ್ನು ಇರಿಸಿ ಪೂಜೆ ಸಲ್ಲಿಸಲಾಯಿತು. ಅಷ್ಟಮಠಗಳ ವಿದ್ವಾಂಸರಿಗೆ ನವಗ್ರಹ ದಾನ, ಗೌರವಾರ್ಪಣೆ ನಡೆಸಲಾಯಿತು.
ಕೆ. ಶ್ರೀನಿವಾಸ ಉಪಾಧ್ಯಾಯ ಧಾರ್ಮಿಕ ವಿಧಿವಿಧಾನ ನಡೆಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಭಾವಿ ಪರ್ಯಾಯ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, "ಕೃಷ್ಣ ಮಠದಲ್ಲಿ ಶ್ರೀ ವಾದಿರಾಜರು ಹಾಕಿಕೊಟ್ಟ ಪೂಜಾಕ್ರಮವೇ ವಿಶಿಷ್ಟವಾಗಿದ್ದು, ದೇವರನ್ನು ಗರ್ಭಗೃಹ ಮಾತ್ರವಲ್ಲದೇ ಪ್ರತೀ ಅಧಿಷ್ಠನಗಳಲ್ಲೂ ಆರಾಧಿಸಲಾಗುತ್ತದೆ. ಹಿಂದಿನ ಕಾಲದಲ್ಲಿ ಮಳೆಗಾಲದಲ್ಲಿ ಜನರಿಗೆ ಯಾವುದೇ ಉದ್ಯೋಗ ಇರಲಿಲ್ಲ. ಅಂಥವರ ಅನುಕೂಲಕ್ಕಾಗಿ ಪರ್ಯಾಯಕ್ಕೆ ಅನೇಕ ತಿಂಗಳು ಪೂರ್ವದಲ್ಲೇ ಕಟ್ಟಿಗೆ ರಥ ನಿರ್ಮಾಣ ಮಾಡಲಾಗುತ್ತದೆ. ೧ ಕಟ್ಟು ಕಟ್ಟಿಗೆಗೆ ೧ ಸೇರು ಅಕ್ಕಿ ನೀಡುವ ಪದ್ದತಿ ಚಾಲ್ತಿಯಲ್ಲಿತ್ತು ಎಂದು ಹೇಳಿದರು.