ಬಂಟ್ವಾಳ, ಜು 11 (DaijiworldNews/PY): ಕೊರೊನಾ ನಿಯಂತ್ರಣ ಕಾರ್ಯದಲ್ಲಿ ಕೈ ಜೋಡಿಸುವ ಸಲುವಾಗಿ ಕೆಎಸ್ಆರ್ಟಿಸಿಯ ಸಾರಿಗೆ ಸುರಕ್ಷಾ-ಐಸಿಯು ಬಸ್ ಅನ್ನು ವಿನ್ಯಾಸಗೊಳಿಸಿದ್ದು, ಬಂಟ್ವಾಳದ ಜನರಿಗೆ ಆರೋಗ್ಯ ಸೇವೆ ಒದಗಿಸುವ ಸಲುವಾಗಿ ಐಸಿಯು ಬಸ್ ಈಗಾಗಲೇ ಬಿ.ಸಿ. ರೋಡ್ ಘಟಕಕ್ಕೆ ತಲುಪಿದೆ.
ಇದೇ ಪ್ರಥಮ ಬಾರಿಗೆ ದ.ಕ, ಉಡುಪಿ ಹಾಗೂ ಕೊಡಗು ಜಿಲ್ಲೆಗಳನ್ನೊಳಗೊಂಡ ಮಂಗಳೂರು ಹಾಗೂ ಪುತ್ತೂರು ಕೆಎಸ್ಆರ್ಟಿಸಿ ವಿಭಾಗದ ವ್ಯಾಪ್ತಿಯಲ್ಲಿ ಈ ರೀತಿಯ ಬಸ್ ಬಂಟ್ವಾಳಕ್ಕೆ ಬಂದಿದೆ. ಜೂನ್ 17ರಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರನ್ನು ಭೇಟಿ ಮಾಡಿ, ಐಸಿಯು ಬಸ್ ನೀಡುವ ಬಗ್ಗೆ ಚರ್ಚೆ ನಡೆಸಿದ್ದು, ಡಿಸಿಎಂ ಒಪ್ಪಿಗೆ ನೀಡಿದ್ದರು.
ತಾಂತ್ರಿಕ ಸಿಬ್ಬಂದಿಗಳು ಈಗಾಗಲೇ ಬಸ್ಸಿನ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡಿಸಿದ್ದಾರೆ. ಬಸ್ನಲ್ಲಿ ಆಂಬ್ಯುಲೆನ್ಸ್ನಂತಹ ಸೈರನ್ ವ್ಯವಸ್ಥೆ ಇದೆ. ಬಸ್ನ ಒಳಭಾಗವು ವೈದ್ಯಕೀಯ ಚಿಕಿತ್ಸಾಲಯವನ್ನು ಹೋಲುತ್ತದೆ. ಬಸ್ಸಿನ ಹಿಂಭಾಗದಲ್ಲಿ ರೋಗಿಗಳ ಪ್ರವೇಶಕ್ಕೆ ವ್ಯವಸ್ಥೆ ಮಾಡಲಾಗಿದೆ.
ಬಸ್ನಲ್ಲಿ ಐದು ಹಾಸಿಗೆಗಳಿದ್ದು, ಎಲ್ಲಾ ಹಾಸಿಗೆಗಳಿಗೂ ಆಕ್ಸಿಜನ್ ವ್ಯವಸ್ಥೆ, ರೋಗಿಗಳ ರಕ್ತದೊತ್ತಡ, ಆಕ್ಸಿಜನ್ ಪ್ರಮಾಣ, ಇಸಿಜಿ, ತಾಪಮಾನ ಮುಂತಾದವುಗಳನ್ನು ಮಾನಿಟರ್ ಮಾಡುವ ವ್ಯವಸ್ಥೆ ಇದೆ. ತುರ್ತು ಔಷಧ ವ್ಯವಸ್ಥೆ, ಐ.ವಿ ವ್ಯವಸ್ಥೆ, ತುರ್ತು ಅಗತ್ಯಗಳಿಗೆ ಜನರೇಟರ್ ವ್ಯವಸ್ಥೆ ಕೂಡಾ ಇದೆ. ರೋಗಿಗಳ ಚೇತರಿಕೆಯಾಗುವ ಬಗ್ಗೆ ಬರಹಗಳು ಕೂಡಾ ಇವೆ.
ಶಾಸಕ ರಾಜೇಶ್ ನಾಯ್ಕ್ ಅವರ ನೇತೃತ್ವದಲ್ಲಿ ಜುಲೈ 13ರಂದು ಸಾರಿಗೆ ಸುರಕ್ಷಾ ಐಸಿಯು ಬಸ್ಗೆ ಚಾಲನೆ ದೊರೆತಿತ್ತು. ಇದು ಬಂಟ್ವಾಳ ತಾಲೂಕಿನ ಪ್ರತಿ ಗ್ರಾಮಗಳಿಗೆ ತಲುಪಿ ಸಂಚಾರಿ ಆಸ್ಪತ್ರೆಯ ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ. ಆರೋಗ್ಯ ಇಲಾಖೆಯ ವೈದ್ಯರು ಹಾಗೂ ಸಿಬ್ಬಂದಿಗಳು ರೋಗಿಗಳ ತಪಾಸಣೆ ಮಾಡುವುದರೊಂದಿಗೆ ಔಷಧಿ ನೀಡುವ ಕೆಲಸವನ್ನು ಮಾಡಲಿದ್ದಾರೆ. ಈ ಬಸ್ಸು ಕ್ರಮವಾಗಿ ಸಂಚರಿಸಿದಲ್ಲಿ ಎರಡು ತಿಂಗಳಿಗೊಮ್ಮೆ ಪ್ರತಿ ಗ್ರಾಮಕ್ಕೆ ಭೇಟಿ ನೀಡಲಿದೆ ಎನ್ನಲಾಗಿದೆ.
ಶಾಸಕ ರಾಜೇಶ್ ನಾಯ್ಕ್ ಅವರ ಪ್ರಯತ್ನದಿಂದ ಬಂಟ್ವಾಳಕ್ಕೆ ಈ ಬಸ್ಸು ಆಗಮಿಸಿದ್ದು, ಪ್ರತಿದಿನ ಬಿ.ಸಿ.ರೋಡು ಘಟಕಕ್ಕೆ ಆಗಮಿಸಲಿದೆ.