ಉಡುಪಿ, ಜು 11 (DaijiworldNews/PY): ಬ್ರಹ್ಮಾವರ - ಸೀತಾನದಿ ಮುಖ್ಯ ರಸ್ತೆಯು ಅಗಲೀಕರಣಗೊಳ್ಳುತ್ತಿದ್ದು, ಈ ಸಂದರ್ಭದ ರಸ್ತೆ ಬದಿಯ ಒಟ್ಟು 1014 ಬೃಹತ್ ಮರಗಳನ್ನು ತೆರವು ಮಾಡಲಾಗಿತ್ತು. ಅಭಿವೃದ್ಧಿಯ ಜೊತೆಗೆ ಪರಿಸರದ ಸಮತೋಲನದ ದೃಷ್ಠಿಯಿಂದ ಕಡಿದ ಮರಗಳಿಗಿಂತ ಶೇ.10 ರಷ್ಟು ಹೆಚ್ಚುವರಿ ಗಿಡಗಳನ್ನು ನೆಡುವ ಸಲುವಾಗಿ ಬ್ರಹ್ಮಾವರದ ಕೃಷಿ ಕೇಂದ್ರದ ಎದುರಿನಿಂದ ಪ್ರಾರಂಭಿಸಿ ರಸ್ತೆಯ ಎರಡೂ ಬದಿಗಳಲ್ಲಿ ಸುಮಾರು 3 ಸಾವಿರ ವಿವಿಧ ಜಾತಿಯ ಹಣ್ಣಿನ ಮತ್ತು ಹೂವಿನ ಗಿಡಗಳನ್ನು ಹಾಗೂ ಸುತ್ತಮುತ್ತಲಿನ ಅರಣ್ಯದ ಸರಕಾರಿ, ಖಾಸಗಿ ಮತ್ತು ಆಸು ಪಾಸಿನ ಜಾಗದಲ್ಲಿ 7 ಸಾವಿರ ಗಿಡಗಳನ್ನು ನಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಅರಣ್ಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅವರು ಭಾನುವಾರ ಉದ್ಘಾಟಿಸಿದರು.
ಗಿಡನೆಟ್ಟು ಸಾಂಕೇತಿಕವಾಗಿ ಕಾರ್ಯಕ್ರಮಕ್ಕ ಚಾಲನೆ ನೀಡಿ ಮಾತನಾಡಿದ ಅವರು, "ರಸ್ತೆ ಅಗಲೀಕರಣ ಮಾಡಲು ಮರಗಳನ್ನು ಕಡಿದು ಹಾಕುತ್ತೇವೆ. ನೆಟ್ಟ 10 ಸಸಿಗಳಲ್ಲಿ 7 ರಿಂದ 8 ಸಸಿಗಳು ಉಳಿಯುತ್ತವೆ. 1014 ಮರಗಳನ್ನು ಇಲ್ಲಿ ತೆಗೆಯಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ಅರಣ್ಯ ಪ್ರದೇಶದಲ್ಲಿ ಕನಿಷ್ಟ 100 ಎಕ್ರೆ ಪ್ರದೇಶದಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸುವ ಕೆಲಸವನ್ನು ಮಾಡಬೇಕು. ಇದರಿಂದಾಗಿ ಕಾಡು ಪ್ರಾಣಿಗಳಿಗೆ ಬೇಕಾದ ಆಹಾರ ಕೂಡಾ ಲಭ್ಯವಾಗಿ ಅವುಗಳು ವಸತಿ ಪ್ರದೇಶಕ್ಕೆ ಬರುವುದು ಕಡಿಮೆಯಾಗಲಿದೆ. ನಗರೀಕರಣದಿಂದಾಗಿ ನಮ್ಮ ಸಂಸ್ಕೃತಿ ನಾಶ ಆಗುತ್ತಿದೆ. ಇಲ್ಲಿನ ಗುತ್ತಿನ ಮನೆಗಳನ್ನು ಕೂಡಾ ಇವತ್ತು ಪ್ರದರ್ಶನಕ್ಕೆ ಇಡಬೇಕಾದ ಅನಿರ್ವಾಯತೆ ಬಂದಿದೆ. ಇಲ್ಲಿ ನೆಟ್ಟ ಗಿಡಗಳನ್ನು ನಾವು ಪ್ರತಿಯೊಬ್ಬರು ಕೂಡ ಇದರ ರಕ್ಷಣೆ ಮತ್ತು ಪೋಷಣೆ ಮಾಡಬೇಕಾಗಿದೆ" ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿ, "ಬ್ರಹ್ಮಾವರ - ಸೀತಾನದಿ ರಸ್ತೆ ಅಗಲೀಕರಣ ಆಗಬೇಕೆಂಬುವುದು ಬಹುಕಾಲದ ಬೇಡಿಕೆ ಇತ್ತು. ಆದರೆ ರಸ್ತೆ ಅಗಲೀಕರಣ ಮಾಡಲು ಮರಗಳನ್ನು ಕಡಿಯಬೇಕಾದ ಅನಿವಾರ್ಯತೆ ಎದುರಾಗಿತ್ತು. ಈ ಸಂಧರ್ಭದಲ್ಲಿ ಈ ಭಾಗದ ಗ್ರಾಮ ಪಂಚಾಯತ್ನ ಜನರ ಜೊತೆ ಸಮಾಲೋಚನೆ ನಡೆಸಿ ಅವರ ಒಪ್ಪಿಗೆ ಪಡೆದು ಇಲ್ಲಿಯ 1014 ಮರಗಳನ್ನು ನಾವು ಕಡಿದಿದ್ದೇವೆ. ಆದರೆ ಇದಕ್ಕೆ ಪರ್ಯಾಯವಾಗಿ ಬ್ರಹ್ಮಾವರ - ಸೀತಾನದಿ ಚತುಷ್ಪಥ ರಸ್ತೆಯ ಎರಡೂ ಬದಿಗಳಲ್ಲಿ 3 ಸಾವಿರ ಗಿಡ ಮತ್ತು ಇತರ ವ್ಯಾಪ್ತಿಯಲ್ಲಿ 7 ಸಾವಿರ ಗಿಡಗಳನ್ನು ನೆಡುವ ಯೋಜನೆಯನ್ನು ಹಾಕಿಕೊಂಡಿದ್ದೇವೆ" ಎಂದರು.
ಈ ಸಂದರ್ಭದಲ್ಲಿ ಕಾರ್ಕಳ ಕ್ಷೇತ್ರದ ಶಾಸಕ ವಿ ಸುನೀಲ್ ಕುಮಾರ್, ಚಾಂತಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮೀರಾ ಸದಾನಂದ ಪೂಜಾರಿ, ಉಪಾಧ್ಯಕ್ಷ ಲಕ್ಷ್ಮೀ ಹಾಗೂ ಮಿಲ್ಲೋ ಟ್ಯಾಗೋ (ಐಎಫ್ಎಸ್), ಮಂಗಳೂರು ವೃತ್ತದ ನೋಡಲ್ ಅಧಿಕಾರಿ, ಪ್ರಕಾಶ ಎಸ್ ನೆಟಾಲ್ಕರ್,ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು ವೃತ್ತ, ಆಶಿಶ್ ರೆಡ್ಡಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಕುಂದಾಪುರ ವಿಭಾಗ ಮತ್ತು ಚಾಂತಾರು ಗ್ರಾಮ ಪಂಚಾಯತ್ ಸದಸ್ಯರು, ಪಕ್ಷದ ಮುಖಂಡರು, ಪ್ರಮುಖರು, ಸ್ಥಳೀಯರು, ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.