ಉಡುಪಿ, ಜು.11 (DaijiworldNews/HR): ಜನಸಂಖ್ಯಾ ಸ್ಫೋಟ ಸದ್ದಿಲ್ಲದೆ ನಮ್ಮ ದೇಶದ ಶ್ರೇಯೋಭಿವೃದ್ಧಿಯ ಮೇಲೆ ದುಷ್ಪರಿಣಾಮವನ್ನು ಬೀರುತ್ತಿದ್ದರೂ, ಸರ್ಕಾರ ಹಲವು ನಿಯಂತ್ರಣ ಕ್ರಮಗಳನ್ನು ಉಚಿತವಾಗಿ ವಿತರಿಸುವ ಸರ್ವ ಸಿದ್ಧತೆಯನ್ನು ಕೈಗೊಳ್ಳುತ್ತಿದ್ದು, ಜನಜಾಗೃತಿ ಎಷ್ಟೇ ಪರಿಣಾಮಕಾರಿಯಾಗಿದ್ದರೂ ಪ್ರತಿಯೊಬ್ಬರು ಈ ನಿಟ್ಟಿನ ಕ್ರಿಯೆಯಲ್ಲಿ ಮನ:ಪೂರ್ವಕವಾಗಿ ಒಪ್ಪಿ ಕೈ ಜೋಡಿಸಬೇಕಾದ ಅಗತ್ಯ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ವಿಶ್ವ ಜನಸಂಖ್ಯಾ ದಿನದ ಕುರಿತು ಸಂದೇಶ ನೀಡಿರುವ ಅವರು, ಶ್ರದ್ಧಾ ಭರಿತ ವಿವೇಚನಾ ಮನಸ್ಕರಾದ ಉಡುಪಿ ಜಿಲ್ಲೆಯ ಸಾರ್ವಜನಿಕರು ಮತ್ತು ಮುಖ್ಯವಾಗಿ ಅರ್ಹ ದಂಪತಿಗಳು, ಯುವಕ-ಯುವತಿಯರು ಜನಸ್ಫೋಟದಿಂದ ದೇಶದ ಮೇಲಾಗುವ ದುಷ್ಪರಿಣಾಮಗಳನ್ನು ಮತ್ತು ಇದರಿಂದ ನಮ್ಮ ದೇಶವು ಅಭಿವೃದ್ಧಿ ಪಥದಲ್ಲಿ ಸಾಗಲು ಆಗುತ್ತಿರುವ ತೊಂದರೆಗಳನ್ನು ಪ್ರಮುಖವಾಗಿ ಅರ್ಥೈಸಿ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಜನ ಸ್ಫೋಟವನ್ನು ತಡೆಗಟ್ಟಲು ಹಮ್ಮಿಕೊಂಡಿರುವ ತಾತ್ಕಾಲಿಕ ಅಥವಾ ಶಾಶ್ವತ ವಿಧಾನಗಳನ್ನು ಅನುಸರಿಸಿ ಚಿಕ್ಕ ಕುಟುಂಬವನ್ನು ಆಳವಡಿಸಿಕೊಳ್ಳುವ ಸಂಕಲ್ಪವನ್ನು ತಪ್ಪದೆ ವಿಶ್ವದಾದ್ಯಂತ ಇಂದು ಆಚರಿಸಲ್ಪಡುವ "ಜನಸಂಖ್ಯಾ ದಿನಾಚರಣೆ" ಈ ದಿನದಂದು ದೃಢ ನಿರ್ಧಾರವನ್ನು ಮಾಡಬೇಕು" ಎಂದಿದ್ದಾರೆ
ಇನ್ನು ಜನಸಂಖ್ಯಾ ಈಗಿನ ದರವನ್ನು ಹಿಡಿತದಲ್ಲಿಟ್ಟು ಅಭಿವೃದ್ಧಿ ಪಥದತ್ತ ದೇಶ ಸಾಗಲು ಎಲ್ಲರೂ ಸಹಕರಿಸೋಣ ಮತ್ತು ಸುಖಿ ಕುಟುಂಬದ ಸೂತ್ರ "ವಿಪತ್ತಿನಲ್ಲೂ ಕುಟುಂಬ ಯೋಜನೆ ಸೇವೆ, ಸ್ವಾವಲಂಬಿ ರಾಷ್ಟ್ರ ಮತ್ತು ಕುಟುಂಬಕ್ಕೆ ನಾಂದ" ಎಂಬ ಘೋಷಣೆ ಎಲ್ಲೆಲ್ಲೂ ಮೊಳಗುವಂತಾಗಲಿ ಎಂದು ಹೇಳಿದ್ದಾರೆ.