ಉಡುಪಿ, ಜು 11 (DaijiworldNews/PY): ಸುಮಾರು ಮೂರು ನಾಲ್ಕು ವರ್ಷಗಳಿಂದ ಕೊಡವೂರು ಲಕ್ಷ್ಮೀನಗರದಲ್ಲಿ ಸರಕಾರದಿಂದ ಮಂಜೂರಾದ ನಿವೇಶನದಲ್ಲಿ ಸಣ್ಣ ಗುಡಿಸಲೊಂದನ್ನು ಕಟ್ಟಿ ಕಷ್ಟದ ಬದುಕನ್ನು ಸಾಗಿಸುತ್ತಿದ್ದ ಗೀತಾ ದಿನೇಶ್ ದಂಪತಿಗೆ ಕಲ್ಯಾಣಪುರ ರೋಟರಿ ಕ್ಲಬ್ ಸುಂದರ ಸೂರು ನಿರ್ಮಾಣ ಮಾಡಿ ಕೊಟ್ಟಿದೆ.
ಗೀತಾ ದಿನೇಶ್ ದಂಪತಿಗಳ ಸಮಸ್ಯೆಯನ್ನು ಗಮನಿಸಿದ್ದ ರೋ. ಆನಂದ ಶೆಟ್ಟಿ ಕಲ್ಯಾಣಪುರ ರೋಟರಿ ಕ್ಲಬ್ನ ಸದಸ್ಯರ ಜೊತೆ ಚರ್ಚಿಸಿದ್ದರು. ಆಗ ಅಧ್ಯಕ್ಷರಾಗಿದ್ದ ರೋ. ಡೆಸ್ಮಂಡ್ ಎಚ್. ವಾಸ್ ದಂಪತಿಗಳ ಕಷ್ಟವನ್ನು ಅರಿತು ಮನೆ ನಿರ್ಮಾಣದ ಮುತುವರ್ಜಿ ವಹಿಸಿದರು.
ಜೂನ್ 11ರಂದು ರೋ. ದಿವಾಕರ್ ಪಿ. ನೇತೃತ್ವದಲ್ಲಿ ಮನೆಯ ಕಾಮಗಾರಿ ಪ್ರಾರಂಭಿಸಲಾಗಿ ಚಾವಡಿ, ಮಲಗುವ ಕೋಣೆ, ಅಡುಗೆ ಕೋಣೆ, ಶೌಚಾಲಯ, ಸ್ನಾನದ ಕೊಠಡಿ ಸಹಿತ 300 ಚದರ ಅಡಿಯ, ನೆಲಕ್ಕೆ ಟೈಲ್ಸ್ ಅಳವಡಿಸಿದ ಸುಸಜ್ಜಿತ ಹೊಸ ಮನೆಯನ್ನು ಒಂದು ತಿಂಗಳ ಒಳಗಾಗಿ ನಿರ್ಮಿಸಿ ಜುಲೈ 8 ರಂದು ಕಲ್ಯಾಣಪುರ ರೋಟರಿಯ ನೂತನ ಅಧ್ಯಕ್ಷ ರೋ. ಶಂಭುಶಂಕರ್ ಉದ್ಘಾಟಿಸಿ ಗೀತಾ ದಿನೇಶ್ ದಂಪತಿಗಳಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ರೋಟರಿ ಜಿಲ್ಲೆ 3182 ಇದರ ನಿಕಟಪೂರ್ವ ಕಾರ್ಯದರ್ಶಿ ರೋ. ಅಲೆನ್ ವಿ. ಲೂಯಿಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಿಸ್ವಾರ್ಥ ಸೇವೆಯಿಂದ ಸಮಾಜದಲ್ಲಿ ಬದಲಾವಣೆ ತರುತ್ತಿರುವ ಸಂಘಟನೆ ರೋಟರಿ ಕ್ಲಬ್ ಸುತ್ತಮುತ್ತಲಿನ ಅಶಕ್ತರನ್ನು ಗಮನಿಸಿ ಕನಿಷ್ಠ ಮೂಲಭೂತ ಸೌಕರ್ಯಗಳೊಂದಿಗೆ ಆನಂದದಿಂದ ಬದುಕುವಂತೆ ನೆರವಿನ ಹಸ್ತ ನೀಡೋಣ ಎಂಬ ಧ್ಯೇಯ ವಾಕ್ಯದೊಂದಿಗೆ ಈ ಕೆಲಸ ಮಾಡುತ್ತಿದೆ.
ಕೌನ್ಸಿಲರ್ ವಿಜಯ್ ಕೊಡವೂರು, ಕಲ್ಯಾಣಪುರ ರೋಟರಿಯ ನೂತನ ಕಾರ್ಯದರ್ಶಿ ರೋ. ಪ್ರಕಾಶ್, ಮಾಜಿ ಸಹಾಯಕ ಗವರ್ನರ್ ರೋ. ದೇವದಾಸ್ ಶೆಟ್ಟಿಗಾರ್, ಕಲ್ಯಾಣಪುರ ರೋಟರಿಯ ಸದಸ್ಯರು ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.
ರೋ. ರಾಮಕೃಷ್ಣ ಆಚಾರ್ ಕಾರ್ಯಕ್ರಮ ನಿರೂಪಿಸಿದರು.