ಉಡುಪಿ ಜು.10 (DaijiworldNews/HR): ಬ್ರಹ್ಮಗಿರಿ ಸರ್ಕಲ್ ಸುತ್ತಮುತ್ತಲಿನ ಒಟ್ಟು ಐದು ಕಡೆ ಸರಕಾರಿ ಜಾಗದಲ್ಲಿದ್ದ ಏಳೆಂಟು ಮೀನು ಮಾರುತ್ತಿದ್ದ ಗೂಡಂಗಡಿಗಳನ್ನು ಸಾರ್ವಜನಿಕರ ದೂರಿನ ಮೇರೆಗೆ ಉಡುಪಿ ನಗರಸಭೆ ಅಧಿಕಾರಿಗಳು ಕಾರ್ಯಾಚರಣೆ ಮೂಲಕ ತೆರವುಗೊಳಿಸಿದ್ದಾರೆ.
ಅಂಗಡಿ ಮಾಲಕರ ಸಾಕಷ್ಟು ವಿರೋಧದ ಮಧ್ಯೆಯೂ ನಗರಸಭೆಯ ಅಧಿಕಾರಿಗಳು ನಗರದ ಪೋಲಿಸರ ನೇತೃತ್ವದಲ್ಲಿ ಇಂದು ತೆರವು ಮಾಡಿದ್ದಾರೆ. ಯಾವುದೇ ನೋಟೀಸ್ ನೀಡದೆ ಏಕಾಏಕಿ ತೆರವುಗೊಳಿಸಿರುವುದಕ್ಕೆಅಂಗಡಿ ಮಾಲಕರಾದ ಅಶೋಕ್ ರಾಜ್ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ ಗೂಡಂಗಡಿ ಸಾಗಿಸುವ ವಾಹನದಡಿ ಮಲಗಿ ಪ್ರತಿಭಟಿಸಿದರಾದರೂ ಪೋಲಿಸರು ಅವರನ್ನು ಬಿಡಲಿಲ್ಲ.
ಈ ಹಿಂದೆ ಜೂ.5ರಂದು ಲಾಕ್ಡೌನ್ ಇದ್ದ ಸಮಯದಲ್ಲಿ ಅನಧಿಕೃತವಾಗಿ ಗೂಡಂಗಡಿ ಹಾಕಿ ಮೀನಿನ ವ್ಯಾಪಾರ ನಡೆಸುತ್ತಿದ್ದಾರೆಂಬ ದೂರಿನ ಮೇರೆಗೆ ದಲಿತ ಮಹಿಳೆ ರಾಧಾ ಅಶೋಕ್ರಾಜ್ ಎಂಬವರ ಗೂಡಂಗಡಿಯನ್ನು ನಗರಸಭೆ ಅಧಿಕಾರಿಗಳು ತೆರವುಗೊಳಿಸಲು ಮುಂದಾಗಿದ್ದರು.
ಇನ್ನು ಎಲ್ಲೆಡೆ ವಿರೋಧ ವ್ಯಕ್ತವಾದ್ದರಿಂದ ತೆರವು ಕಾರ್ಯವನ್ನು ಸ್ಥಗಿತ ಮಾಡಲಾಗಿತ್ತು. ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರುಗಳು ದಾಖಲಾಗಿದ್ದವು. ಇದಕ್ಕೆ ದಲಿತ ಸಂಘಟನೆಗಳು ಕೂಡ ತೀವ್ರ ವಿರೋಧ ವ್ಯಕ್ತಪಡಿಸಿದ್ದವು.
ಈ ಅಂಗಡಿಗಳು ಅನಧಿಕೃತ ಮತ್ತು ಅಲ್ಲಿ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡುತ್ತಿಲ್ಲ ಎಂಬ ದೂರು ಸ್ಥಳಿಯರು ಮಾಡಿದ್ದರು.
ಇದೀಗ ಪೊಲೀಸ್ ಬಿಗಿ ಭದ್ರತೆಯಲ್ಲಿ ಮತ್ತೆ ಕಾರ್ಯಾಚರಣೆ ನಡೆಸಿದ ನಗರಸಭೆ ಅಧಿಕಾರಿಗಳು, ರಾಧಾ ಅವರ ಮೀನಿನ ಅಂಗಡಿ ಸೇರಿದಂತೆ ಏಳೆಂಟು ಗೂಡಂಗಡಿಗಳನ್ನು ತೆರವುಗೊಳಿಸಿದರು. ಅದೇ ರೀತಿ ಗ್ಯಾರೇಜ್ ಸೇರಿದಂತೆ ಕೆಲವು ಅಂಗಡಿಗಳ ಸರಕಾರಿ ಜಾಗಕ್ಕೆ ವಿಸ್ತರಣೆ ಮಾಡಿರುವ ತಗಡು ಶೀಟು ಗಳನ್ನು ಕೂಡ ತೆರವುಗೊಳಿಸಲಾಯಿತು.
"ಲಾಕ್ಡೌನ್ನಿಂದ ಕೆಲಸ ಇಲ್ಲದ ಕಾರಣಕ್ಕೆ ಪತ್ನಿಯ ಹೆಸರಿನಲ್ಲಿದ್ದ ಪರವಾನಿಗೆಯಲ್ಲಿ ಮೀನಿನ ಅಂಗಡಿಯನ್ನು ತೆರೆದು ವ್ಯಾಪಾರ ಮಾಡುತ್ತಿದ್ದೆವು. ಇದರಲ್ಲಿ ಸರಿಯಾದ ವ್ಯಾಪಾರವೂ ನಡೆಯದೆ ಕಷ್ಟದ ಜೀವನ ಸಾಗಿಸುತ್ತಿದ್ದೇವೆ. ಈ ಹಿಂದೆ ನಮ್ಮ ಅಂಗಡಿ ತೆರವುಗೊಳಿಸುವ ವಿಚಾರಕ್ಕೆ ಸಂಬಂಧಿಸಿ ದೂರು ಪ್ರತಿದೂರುಗಳು ದಾಖಲಾಗಿದ್ದವು. ಅದರ ಮಧ್ಯೆಯೇ ಇವರು ಬೆಳಗಿನ ಜಾವ ನೂರಾರು ಪೊಲೀಸರ ಭದ್ರತೆಯೊಂದಿಗೆ ಬಂದು, ಯಾವುದೇ ನೋಟೀಸ್ ನೀಡದೆ ಅಂಗಡಿಯನ್ನು ತೆಗೆದುಕೊಂಡುಹೋಗಿದ್ದಾರೆ" ಎಂದು ಅಶೋಕ್ರಾಜ್ ಕಾಡಬೆಟ್ಟು ಅಲವತ್ತು ಕೊಂಡಿದ್ದಾರೆ.
ಸಾರ್ವಜನಿಕರಿಂದ ಬಹಳಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಸರಕಾರಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಲಾದ ಗೂಡಂಗಡಿಗಳನ್ನು ತೆರವುಗೊಳಿಸಿದ್ದೇವೆ. ಇದೀಗ ಅಂಗಡಿಗಳು ನಗರಸಭೆ ವಶದಲ್ಲಿದ್ದು, ಸಂಬಂಧಪಟ್ಟವರು ದಂಡ ಪಾವತಿಸಿ ಅದನ್ನು ತೆಗೆದುಕೊಳ್ಳಬಹುದು. ಇಲ್ಲದಿದ್ದರೆ ಕಾನೂನು ಪ್ರಕಾರ ವಿಲೇವಾರಿ ಮಾಡಲಾಗುವುದು ನಗರಸಭೆಯ ಇಂಜಿನಿಯರ್ ಮೋಹನ್ರಾಜ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಡಾ.ಉದಯ ಶೆಟ್ಟಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್ರಾಜ್, ಕಂದಾಯ ಅಧಿಕಾರಿ ಧನಂಜಯ, ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಮೊದಲಾದವರು ಹಾಜರಿದ್ದರು.