ಗಂಗೊಳ್ಳಿ, ಜು.10 (DaijiworldNews/HR): ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ಜಾಗ ಗುರುತಿಸುವ ಕೆಲಸ ನಡೆಯುತ್ತಿದೆ. ಎಲ್ಲಾ ನಿವೇಶನ ರಹಿತರಿಗೆ ನಿವೇಶನ ನೀಡಿ ಮನೆ ನಿರ್ಮಿಸಲು ಸರಕಾರದ ಯೋಜನೆ ಮೂಲಕ ನೆರವು ನೀಡಲು ಕ್ರಮಕೈಗೊಳ್ಳಲಾಗುವುದು. ತ್ರಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊವಾಡಿಯಲ್ಲಿ ಸುಮಾರು 22 ಪ.ಜಾತಿ. ಪ.ಪಂಗಡದ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಿರುವುದು ಅತಿ ದೊಡ್ಡ ಸಾಧನೆ ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಹೇಳಿದರು.
ಜಿಲ್ಲಾ ಪಂಚಾಯತ್ ಉಡುಪಿ, ತಾಲೂಕು ಪಂಚಾಯತ್ ಕುಂದಾಪುರ ಹಾಗೂ ಗ್ರಾಮ ಪಂಚಾಯತ್ ತ್ರಾಸಿ ಇವರ ಆಶ್ರಯದಲ್ಲಿ ತ್ರಾಸಿ ಗ್ರಾಮ ಪಂಚಾಯತ್ನ ಪ.ಜಾತಿ ಫಲಾನುಭವಿಗಳಿಗೆ ಮೊವಾಡಿಯಲ್ಲಿ ನಿವೇಶನ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದ ಅವರು, "ಕ್ಷೇತ್ರದ ಪ್ರತಿಯೊಂದು ಮನೆಗೂ ಕುಡಿಯುವ ನೀರು ಪೂರೈಸುವ ಸುಮಾರು 500 ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಯೋಜನೆ ಕ್ಯಾಬಿನೆಟ್ನಲ್ಲಿ ಮಂಜೂರಾಗಿ ಹಣಕಾಸು ಇಲಾಖೆಯ ಅನುಮೋದನೆ ದೊರೆತಿದೆ. ಕಾಮಗಾರಿಗೆ ಈ ತಿಂಗಳ ಅಂತ್ಯದೊಳಗೆ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಪ್ರತಿಯೊಂದು ಮನೆಗೂ ವಿದ್ಯುತ್ ಸಂಪರ್ಕ ನೀಡುವ ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರಕಾರದ ಯೋಜನೆಗೆ ಗ್ರಾಮ ಪಂಚಾಯತ್ ಸಹಕಾರ ನೀಡಬೇಕು" ಎಂದು ಹೇಳಿದರು.
"ಕೊರೊನಾನಾ ಮುಕ್ತ ಗ್ರಾಮವನ್ನಾಗಿ ಮಾಡಲು ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕು. 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು. ಲಸಿಕೆ ಕೊರತೆ ಇದ್ದಲ್ಲಿ ತಕ್ಷಣ ತಿಳಿಸಿದರೆ ಲಸಿಕೆಯ ವ್ಯವಸ್ಥೆ ಮಾಡಿಕೊಡಲಾಗುವುದು. ಸರಕಾರದಿಂದ ವಸತಿ ರಹಿತರಿಗೆ ಶೀಘ್ರದಲ್ಲಿ ವಸತಿ ನೀಡುವ ಕಾರ್ಯ ಕೂಡ ನಡೆಯಲಿದೆ" ಎಂದು ಅವರು ಹೇಳಿದ್ದಾರೆ.
ತ್ರಾಸಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ದೇವಾಡಿಗ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯರಾದ ರೆನ್ಸಮ್ ಪಿರೇರಾ, ನಾಗರತ್ನ ಶೆಟ್ಟಿಗಾರ್, ಜಿಪಂ ಮಾಜಿ ಸದಸ್ಯೆ ಶೋಭಾ ಜಿ.ಪುತ್ರನ್, ತಾಪಂ ಮಾಜಿ ಸದಸ್ಯ ನಾರಾಯಣ ಕೆ., ರಾಜ್ಯ ಯೋಜನಾ ಸಮಿತಿ ಸದಸ್ಯೆ ಪ್ರಿಯದರ್ಶಿನಿ ದೇವಾಡಿಗ, ವಂಡ್ಸೆ ಹೋಬಳಿ ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ, ಭೋಜ ಪೂಜಾರಿ, ಪ್ರಿಯದರ್ಶನ್ ಮತ್ತಿತರರು ಉಪಸ್ಥಿತರಿದ್ದರು.