ಕುಂದಾಪುರ, ಜು 10 (DaijiworldNews/PY): "ಈ ಭಾಗದ ಹಿನ್ನೀರು ಪ್ರದೇಶಗಳಲ್ಲಿನ ಕಾಂಡ್ಲಾವನಗಳನ್ನೇ ಆಧಾರವಾಗಿಟ್ಟುಕೊಂಡು ಕರಾವಳಿಯಾದ್ಯಂತ ಕಾಂಡ್ಲಾವನಗಳ ಅಭಿವೃದ್ದಿಗೆ ರೂಪುರೇಷೆ ತಯಾರಿಸಲಾಗುವುದು. ಕಾಂಡ್ಲಾವನಗಳಿಂದ ಸ್ಥಳೀಯ ಮೀನು ಪ್ರಬೇಧಗಳ ಸಂತಾನೋತ್ಪತಿ, ಚಂಡಮಾರುತ ತಡೆ, ಹಸಿರು ವಲಯಗಳ ವಿಸ್ತರಣೆಗೆ ಅನುಕೂಲವಾಗುತ್ತದೆ. ಕಾಂಡ್ಲಾವನಗಳ ಮೂಲಕ ಇಕೋ ಟೂರಿಸಂ ಉತ್ತೇಜಿಸಲು ಇಲಾಖೆ ಮಟ್ಟದಲ್ಲಿ ಚಿಂತನೆ ನಡೆಸಲಾಗುತ್ತಿದೆ" ಎಂದು ರಾಜ್ಯ ಅರಣ್ಯ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.
ಅವರು ಕರಾವಳಿಯಾದ್ಯಂತ ಕಾಂಡ್ಲಾವನ ಬೆಳೆಸುವ ನಿಟ್ಟಿನಲ್ಲಿ ಅದರ ಪೂರ್ವಭಾವಿಯಾಗಿ ಕುಂದಾಪುರದ ಚರ್ಚ್ ರಸ್ತೆಯ ಸಮೀಪದಲ್ಲಿ ಕಾಂಡ್ಲಾವನವನ್ನು ವೀಕ್ಷಿಸಿ, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
"ಇಕೋ ಟೂರಿಸಂ ಮೂಲಕ ಅದರಲ್ಲಿ ಬಂದ ಆದಾಯದಲ್ಲಿ ಹಿನ್ನೀರು ಪ್ರದೇಶದ ಕಾಂಡ್ಲಾವನವಿಲ್ಲದ ಕಡೆ ಕಾಂಡ್ಲಾವನ ಬೆಳೆಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕಾಂಡ್ಲಾವನ ಬೆಳೆಸುವ ಬಗ್ಗೆ ಬೈಂದೂರು ಹಾಗು ಕುಂದಾಪುರದ ಶಾಸಕರು ಮನವಿ ಸಲ್ಲಿಸಿದ್ದಾರೆ. ಹೊಸತಾಗಿ ಕಾಂಡ್ಲಾವನ, ಅರಣ್ಯ ಬೆಳೆಸುವ ನಿಟ್ಟಿನಲ್ಲಿ ಇಲಾಖೆ ಕಾರ್ಯನಿರತವಾಗಿದೆ" ಎಂದರು.
"ನಿರ್ಬಂಧಗಳನ್ನು ಗಮನದಲ್ಲಿ ಇಟ್ಟುಕೊಂಡು ಪ್ರವಾಸೋಧ್ಯಮಕ್ಕೆ ಅವಕಾಶ ನೀಡಲಾಗುತ್ತದೆ. ಕೆಲವೊಂದು ವಲಯಗಳಲ್ಲಿ ಪ್ರವಾಸಿಗಳಿಗೆ ಅವಕಾಶವಿಲ್ಲದಿದ್ದರೂ ಇವತ್ತು ಅತ್ಯಾಧುನಿಕ ಕ್ಯಾಮರಾಗಳ ಬಂದಿವೆ. ಅವುಗಳ ಮೂಲಕ ಚಿತ್ರೀಕರಿಸಿ ತೋರಿಸುವ ಕೆಲಸ ಮಾಡಬೇಕಿದೆ. ಹಾಗೆಯೇ ಕರಾವಳಿ ಭಾಗದ ರಮಣೀಯ ತಾಣಗಳ ಚಿತ್ರೀಕರಣ ಮಾಡಿ ಪ್ರವಾಸಿಗಳ ಮುಂದಿಟ್ಟರೆ ನಿಶ್ಚಿತವಾಗಿ ಪ್ರವಾಸಿಗಳ ಆಕರ್ಷಿಸುತ್ತಾರೆ. ಇದರಿಂದ ಆದಾಯವೂ ಬರುತ್ತದೆ" ಎಂದರು.
"ರಾಜ್ಯದಲ್ಲಿ ಶೇ.13 ಇದ್ದ ಹಸಿರು ವಲಯ ಈಗ ಶೇ.23ಕ್ಕೆ ತಲುಪಿದೆ, ಅದನ್ನು ಶೇ.33ಕ್ಕೆ ಏರಿಸುವ ಗುರಿ ಹೊಂದಿದ್ದೇನೆ. ಕೊರೊನಾ ಸಮಯದಲ್ಲಿ ಆಮ್ಲಜನಕ ಕೊರತೆ ಆಗಿರುವುದನ್ನು ಗಮನಿಸಿದ್ದೇವೆ. ಕಾಂಡ್ಲಾವನ, ಅರಣ್ಯವಿದ್ದರೆ ನೈಸರ್ಗಿಕವಾಗಿ ಆಮ್ಲಜನಕ ಹೇರಳವಾಗಿ ಸಿಗುತ್ತದೆ. ಆ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶಗಳ ಅಭಿವೃದ್ದಿಗೆ ಮೀಸಲು ಅರಣ್ಯ, ಅರಣ್ಯ, ಸಾಮಾಜಿಕ ಅರಣ್ಯ ವಿಭಾಗಗಳು ಕೆಲಸ ಮಾಡುತ್ತಿವೆ" ಎಂದರು.
ಈ ಸಂದರ್ಭದಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿ.ಎಂ.ಸುಕುಮಾರ ಶೆಟ್ಟಿ, ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್, ಬೈಂದೂರು ವಲಯ ಅರಣ್ಯಾಧಿಕಾರಿ ಕಿರಣ್ ಬಾಬು, ಕುಂದಾಪುರ ಪುರಸಭಾ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್, ಉಪಾಧ್ಯಕ್ಷ ಸಂದೀಪ್ ಖಾರ್ವಿ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ವಿಜಯ ಎಸ್.ಪೂಜಾರಿ, ಕುಂದಾಪುರ ಮಂಡಲ ಬಿಜೆಪಿ ಅಧ್ಯಕ್ಷ ಶಂಕರ ಅಂಕದಕಟ್ಟೆ, ಪುರಸಭೆ ಸದಸ್ಯರು, ಬಿಜೆಪಿಯ ಪ್ರಮುಖರು ಉಪಸ್ಥಿತರಿದ್ದರು.