ಉಡುಪಿ, ಜು.10 (DaijiworldNews/HR): ದೇಶದ್ರೋಹದ ಕೆಲಸ ಮಾಡಿದ ಕಾರ್ಕಳ ಹಿರ್ಗಾನದ ರಾಧಾಕೃಷ್ಣ ಅವರನ್ನು ತಕ್ಷಣಕ್ಕೆ ಬಂಧಿಸಬೇಕು. ಕೇವಲ ಈತನನ್ನು ಠಾಣೆಗೆ ಕರೆದು ವಿಚಾರಿಸಿದ ಕಾರಣಕ್ಕೆ ಕಾಂಗ್ರೆಸ್ಸಿಗರು ಪೊಲೀಸ್ ದೌರ್ಜನ್ಯ ಎಂದು ಕಥೆ ಕಟ್ಟೆ ಪೊಲೀಸರ ವಿರುದ್ಧವೇ ಪ್ರತಿಭಟನೆ ನಡೆಸಲು ಸಿದ್ಧರಾಗಿದ್ದಾರೆ ಎಂದು ತಿಳಿದುಬಂದಿದ್ದು, ಒಂದು ವೇಳೆ ಕಾಂಗ್ರೆಸಿಗರು ಈ ದೇಶದ್ರೋಹಿಯನ್ನು ಬೆಂಬಲಿಸಿ ಪ್ರತಿಭಟನೆ ನಡೆಸುವುದಾದರೆ, ನಾವು ಕಾರ್ಕಳ ಪೊಲೀಸರನ್ನು ಮತ್ತು ದೇಶದ ಯೋಧರನ್ನು ಬೆಂಬಲಿಸಿ ಕಾಂಗ್ರೆಸ್ಸಿಗರಿಗಿಂತ ಹತ್ತು ಪಟ್ಟು ದೊಡ್ಡ ಸಂಖ್ಯೆಯಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಲಿದ್ದೇವೆ" ಎಂದು ಹಿಂದು ಜಾಗರಣ ವೇದಿಕೆಯ ಮಂಗಳೂರು ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ ಎಚ್ಚರಿಕೆ ಕೊಟ್ಟಿದ್ದಾರೆ.
ಈ ಕುರಿತು ಉಡುಪಿ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಡೆಸಿ ಮಾತನಾಡಿ, "ರಾಧಾಕೃಷ್ಣಾ ಓರ್ವ ವೃತಿಪರ ಕ್ರಿಮಿನಲ್. ದೇಶದ್ರೋಹದ ಆ ಕೆಲಸ ಮಾಡುವವರ ಪರ ಕಾಂಗ್ರೆಸ್ ಯಾವಾಗಲು ಬೆಂಬಲ ನೀಡುತ್ತಾ ಬಂದಿದೆ. ಓರ್ವ ಪ್ರಾಮಾಣಿಕ ಎಸ್ ಐ ಅವರನ್ನು ಅಮಾನತು ಮಾಡಿಸುವ ಹುನ್ನಾರ ಇದಾಗಿದ್ದು, ರಾಧಾಕೃಷ್ಣಾ ಅವರ ಮೇಲೆ ಹಲ್ಲೆ ಮಾಡಿದ್ದಾರೆಂದು ಪೊಲೀಸರ ಮೇಲೆ ಕಾಂಗ್ರೆಸಿಗರು ಸುಳ್ಳು ಆರೋಪ ಹೊರಿಸಿ ತಮ್ಮ ಕಾರ್ಯಕರ್ತನಾದನನ್ನು ಸ್ವಾತಂತ್ರ್ಯ ಹೋರಾಟಗಾರ ಎಂಬಂತೆ ಬಿಂಬಿಸಲು ಹೊರಟಿದ್ದಾರೆ" ಎಂದರು.
"ಭಾರತೀಯ ಯೋಧರ ಸಾವನ್ನು ಬಯಸಿ ಪಾಕಿಸ್ತಾನಿ ಸೈನಿಕರ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಈ ದೇಶದ್ರೋಹಿಯನ್ನು ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮೊದಲಾದವರು ತನ್ನ ಕಾರ್ಯಕರ್ತ ಎಂದು ಸಮರ್ಥಿಸುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ" ಎಂದಿದ್ದಾರೆ.
"ಪೊಲೀಸರು ರಾಧಾಕೃಷ್ಣಾಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವುದು ಸತ್ಯಕ್ಕೆ ದೂರವಾದ ಸಂಗತಿ, ವಿಚಾರಣೆ ಮುಗಿದ ಬಳಿಕ ನಡೆದುಕೊಂಡು ಮನೆಗೆ ಹೋದವನನ್ನು ಕಾಂಗ್ರೆಸ್ ನಾಯಕರೇ ಕರೆತಂದು ಅಸ್ಪತ್ರೆಗೆ ಸೇರಿಸಿ ಪೊಲೀಸರ ಮೇಲೆ ಹಲ್ಲೆ ಆರೋಪ ಮಾಡುತ್ತಿದ್ದಾರೆ".
ಇನ್ನು "ರಾಧಾಕೃಷ್ಣ ನಾಯಕ್ ಹಿರ್ಗಾನ ಈತನ ಮೇಲೆ ಇದೇ ಮೊದಲ ಬಾರಿ ಪ್ರಕರಣ ದಾಖಲಾಗುತ್ತಿರುವುದಲ್ಲ. ಈ ಹಿಂದೆಯೂ ಈತನ ಮೇಲೆ ಬೆಂಗಳೂರಿನಲ್ಲಿ ಮಹಿಳಿಯೊಬ್ಬರ ಬಗ್ಗೆ ಅಶ್ಲೀಲ ಪೋಸ್ಟ್ ಹಾಕಿ ತೇಜೋವಧೆ ಮಾಡಿರುವ ಬಗ್ಗೆ ದೂರು ದಾಖಲಾಗಿದೆ. ಇಂತಹ ವಿಕೃತ ವ್ಯಕ್ತಿಯ ಸಮರ್ಥನೆಗೆ ಸಿದ್ದರಾಮಯ್ಯ ಮೊದಲಾದ ಹಿಂದೂ ವಿರೋಧಿ ದೇಶವಿರೋಧಿ ರಾಜಕಾರಣಿಗಳು ಮುಂದಾಗಿದ್ದಾರೆ" ಎಂದರು.
ವಿವಾದಿತ ಪೋಸ್ಟ್ ತನ್ನದಲ್ಲದೆ ಇದ್ದಿದ್ದರೆ ನಕಲಿ ಪೋಸ್ಟ್ ಹಾಕಿದವರ ವಿರುದ್ಧ ಕಾಂಗ್ರೆಸ್ ಪಕ್ಷ ಅಥವಾ ಅವರೇ ಒಂದೂ ಹೇಳಿಕೆಯನ್ನು ನೀಡದೇ ಇರುವುದೇಕೆ? ಅವಹೇಳನಖರಿ ಪೋಸ್ಟ್ ಗಳನ್ನೂ ತೆಗೆದಿರುವ ಕಾರಣ ಏನು? ಎಂದು ಪ್ರಶ್ನಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಹಿಂದು ಜಾಗರಣ ವೇದಿಕೆಯ ಮುಖಂಡರಾದ ರಾಜೇಶ್ ಉಚ್ಚಿಲ, ಪ್ರವೀಣ್ ಹಿರೇಮಠ, ರಿಕೇಶ್ ಪಾಲನ್ , ಮಹೇಶ್ ಬೈಲೂರು ಮೊದಲಾದವರು ಉಪಸ್ಥಿತರಿದ್ದರು.