ಮಣಿಪಾಲ,ಜು 10 (DaijiworldNews/MS): ದೇಶದಾದ್ಯಂತ ಆಸ್ಪತ್ರೆಗಳನ್ನು ಸ್ಥಾಪಿಸಿ, ಸಾವಿರಾರು ವೈದ್ಯರು ಮತ್ತು ಆರೋಗ್ಯ ಪಾಲಕರ ಸೇವೆಯ ಮೂಲಕ ಸಮಾಜದ ಸ್ವಾಸ್ಥ್ಯ ಪಾಲನೆಯಲ್ಲಿ ವಿಶ್ವವೇ ಗಮನಿಸುವಂಥ ಸೇವೆಯನ್ನು ಮಣಿಪಾಲದ ಸಮೂಹದ ಆಸ್ಪತ್ರೆ ಸಲ್ಲಿಸುತ್ತಿದ್ದು ವೈದ್ಯಕೀಯ ಕ್ಷೇತ್ರದ ನವೀನ ಸಂಶೋಧನೆ, ಪ್ರಯೋಗ, ಅನುಷ್ಠಾನಗಳಿಗೆ ಸದಾ ತೆರೆದುಕೊಂಡಿದೆ ಎಂದು ಡಾ. ಎಚ್. ಎಸ್. ಬಲ್ಲಾಳ್, ಪ್ರೊ ವೈಸ್ಛಾನ್ಸೆಲರ್, ಮಾಹೆ ಹೇಳಿದರು.
‘ಟ್ರಾನ್ಸ್ಫಾರ್ಮೇಶನ್ ಬಿಯಾಂಡ್ ಸೈಟ್’ ಕೃತಿ
ಅವರು, ಜಿಬೂ ಥಾಮಸ್, ಸೀನಿಯರ್ ಮ್ಯಾನೇಜರ್, ನಿರ್ವಹಣಾ ವಿಭಾಗ, ಕೆಎಂಸಿ, ಮಣಿಪಾಲ ಇವರು ಬರೆದಿರುವ ‘ಟ್ರಾನ್ಸ್ಫಾರ್ಮೇಶನ್ ಬಿಯಾಂಡ್ ಸೈಟ್’ ಕೃತಿಯನ್ನು 2021 ಜು.9 ರಂದು ಬಿಡುಗಡೆಗೊಳಿಸಿ ಮಾತನಾಡಿದರು.
‘ಕೋವಿಡ್ 19 ಚಿಕಿತ್ಸೆ ಮತ್ತು ನಿಯಂತ್ರಣದ ಸಂದರ್ಭವೂ ಸೇರಿದಂತೆ ವರ್ತಮಾನದ ದಿನಮಾನದಲ್ಲಿ ಆಸ್ಪತ್ರೆಗಳ ನಿರ್ವಹಣೆಯ ಮಹತ್ವ ಅಧಿಕವಾಗಿದೆ. ಮಾಹೆಯ ಆಡಳಿತವು ಮಣಿಪಾಲ ಸಮೂಹದ ಆಸ್ಪತ್ರೆಗಳ ನಿರ್ವಹಣೆಗೆ ಪ್ರತ್ಯೇಕ ನಿರ್ವಹಣ ವಿಭಾಗವನ್ನು ತೆರೆದಿದ್ದು ಇದು ಪ್ರತ್ಯೇಕ ಅಧ್ಯಯನ ಶಿಸ್ತು ಮತ್ತು ಔದ್ಯೋಗಿಕ ಕ್ಷೇತ್ರವಾಗಿ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬೃಹತ್ ಆಸ್ಪತ್ರೆಗಳ ನಿರ್ವಹಣೆಯ ಕುರಿತಾದ ಕೃತಿಯನ್ನು ಹೊರತರುತ್ತಿರುವುದಕ್ಕೆ ಮಾಹೆ ಅಭಿಮಾನ ಪಡುತ್ತಿದೆ ಎಂದರು.
ಕೃತಿಯನ್ನು ಪ್ರಕಟಿಸಿದ ಮಣಿಪಾಲ್ ಯೂನಿವರ್ಸಲ್ ಪ್ರೆಸ್ನ್ನು ಡಾ. ಬಲ್ಲಾಳ್ ಅಭಿನಂದಿಸಿದರು.
ಕೃತಿ ಪರಿಚಯ ಮಾಡುತ್ತ ಡಾ. ಅವಿನಾಶ್ ಶೆಟ್ಟಿ, ಮೆಡಿಕಲ್ ಸುಪರಿಂಟೆಂಡೆಂಟ್, ಕೆ. ಎಂ. ಸಿ. ಅವರು, ಚಿಕಿತ್ಸೆ, ಶುಶ್ರೂಷೆ, ಸಂಶೋಧನೆಗಳಗಳಷ್ಟೇ ಆಸ್ಪತ್ರೆಗಳ ನಿರ್ವಹಣೆಯೂ ಮುಖ್ಯ ಸಂಶೋಧನ ವಿಷಯವಾಗುತ್ತಿರುವ ಸಂದರ್ಭದಲ್ಲಿ ‘ಟ್ರಾನ್ಸ್ಫಾರ್ಮೇಶನ್ ಬಿಯಾಂಡ್ ಸೈಟ್’ ಕೃತಿಯು ಅಧ್ಯಯನಾಕಾಂಕ್ಷಿಗಳ ಮುಖ್ಯ ಪರಾಮರ್ಶನ ಕೃತಿಯಾಗಿ ಗಮನಸೆಳೆಯಲಿದೆ ಎಂದರು.
ಮತ್ತೋರ್ವ ಮುಖ್ಯ ಅತಿಥಿ, ಸಿ. ಜಿ ಮುತ್ತಣ್ಣ, ಮುಖ್ಯ ನಿರ್ವಹಣಾ ಅಧಿಕಾರಿ, ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ ಮತ್ತು ಮಣಿಪಾಲ ಮತ್ತು ಮುಖ್ಯಸ್ಥರು, ಮಣಿಪಾಲ್ ಕ್ಲಸ್ಟರ್ ಅವರು ಮಾತನಾಡಿ, ಆಸ್ಪತ್ರೆಯ ನಿರ್ವಹಣೆ ಎಂಬುದು ಸಾಮಾನ್ಯ ವ್ಯಕ್ತಿಗಳಿಗೆ ಯಾವತ್ತೂ ಅದೃಶ್ಯವಾಗಿರುವ ಸಂಗತಿಯೇ ಆಗಿರುತ್ತದೆ. ಪ್ರಸ್ತುತ ಕೃತಿಯು ಆಸ್ಪತ್ರೆ ನಿರ್ವಹಣೆಯ ಅನೇಕ ಮಾಹಿತಿಗಳನ್ನು ನೀಡುತ್ತದೆ’ ಎಂದರು.
ಮಣಿಪಾಲ ಯೂನಿವರ್ಸಲ್ ಪ್ರೆಸ್ನ ಪ್ರಧಾನ ಸಂಪಾದಕರಾದ ಪ್ರೊ. ನೀತಾ ಇನಾಂದಾರ್ ಅವರು ಸ್ವಾಗತ ಮತ್ತು ಪ್ರಸ್ತಾವನೆಯ ನುಡಿಗಳನ್ನಾಡುತ್ತ, ವಿಶಿಷ್ಟವಾದ, ವಿಭಿನ್ನವಾದ ಮತ್ತು ಅಷ್ಟಾಗಿ ಬೆಳಕು ಚೆಲ್ಲದ ವಿಷಯಗಳ ಕುರಿತು ಕೃತಿಗಳನ್ನು ಪ್ರಕಟಿಸಲು ಮಣಿಪಾಲ್ ಯೂನಿವರ್ಸಲ್ ಪ್ರೆಸ್ ಮುಂದಾಗುತ್ತಿದೆ. ಹೊಸ ಲೇಖಕರನ್ನೂ ಪ್ರೋತ್ಸಾಹಿಸುತ್ತಿದೆ. ಪ್ರಸ್ತುತ ಕೃತಿಯು ಲೇಖಕರ ಪ್ರಥಮ ಪ್ರಕಟಣೆಯಾಗಿದ್ದು ಅದನ್ನು ಹೊರತರಲು ಮಣಿಪಾಲ ವಿಶ್ವವಿದ್ಯಾನಿಲಯದ ಪ್ರಸಾರಾಂಗ ವಿಭಾಗವು ಅಭಿಮಾನ ಪಡುತ್ತಿದೆ ಎಂದರು.
ಕೃತಿಯ ಲೇಖಕ ಜಿಬೂ ಥಾಮಸ್ ಧನ್ಯವಾದ ಸಮರ್ಪಣೆ ಮಾಡಿದರು. ಡಾ. ಆನಂದ್ ವೇಣುಗೋಪಾಲ್, ಮೆಡಿಕಲ್ ಸುಪರಿಂಟೆಂಡೆಂಟ್, ಯೂನಿಟ್ ಹೆಡ್ ಹಾಗೂ ಡಾ. ಬಿನ್ಸಿ ಎಂ. ಜಾರ್ಜ್, ಸಹಪ್ರಾಧ್ಯಾಪಕರು, ಎನಾಟಮಿ ವಿಭಾಗ, ಮಾಹೆ ಉಪಸ್ಥಿತರಿದ್ದರು.