ನವದೆಹಲಿ, ಜು 10 (DaijiworldNews/MS): ಸಂವಿಧಾನದ 8ನೇ ಅನುಚ್ಛೇಧಕ್ಕೆ ತುಳು ಭಾಷೆಯನ್ನು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಶೀಘ್ರವೇ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅರಣ್ಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.
ಅವರು ಜು.9ರ ಶುಕ್ರವಾರ ನಗರಕ್ಕೆ ಭೇಟಿ ನೀಡಿ, ಪಿಲಿಕುಳದ ಮೃಗಾಯಲವನ್ನು ವೀಕ್ಷಿಸಿದ ನಂತರ ಅವರು ವರದಿಗಾರರೊಂದಿಗೆ ಮಾತನಾಡಿದರು. ಕೇಂದ್ರ ಸರ್ಕಾರವು ಈ ಕುರಿತಂತೆ ಸೂಕ್ತ ಕ್ರಮದಲ್ಲಿ ಪರಿಶೀಲಿಸಿ ಕಳುಹಿಸುವಂತೆ ನಿರ್ದೇಶನ ನೀಡಿದೆ, ಈ ಹಿನ್ನಲೆಯಲ್ಲಿ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಈ ಕುರಿತಂತೆ ಸಭೆ ನಡೆಸಿ, ಸೂಕ್ತವಾದ ಪ್ರಕ್ರಿಯೆಯಲ್ಲಿ ಮತ್ತೋಮ್ಮೆ ಕೇಂದ್ರಕ್ಕೆ ಸಲ್ಲಿಸಲಾಗಿದ್ದು, ಕೂಡಲೇ ಒಪ್ಪಿಗೆ ದೊರೆಯುವ ಸಾಧ್ಯತೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ
ಪಿಲಿಕುಳದ ಸುಧಾರಣೆಗೆ ಅಗತ್ಯ ಕ್ರಮ:
ಪಿಲಿಕುಳದಲ್ಲಿರುವ ಪ್ರಾಣಿಗಳ ರಕ್ಷಣೆ ಹಾಗೂ ಪೋಷಣೆ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳ ತಂಡದೊಂದಿಗೆ ಪರಿಶೀಲಿಸಲಾಗಿದೆ. ಇಲ್ಲಿ ಪ್ರಾಣಿಗಳನ್ನು ಸ್ಪಚ್ಛಂದ ವಾತಾವರಣದಲ್ಲಿ ಇರಿಸಿರುವುದು ಅತಿ ಪ್ರಮುಖವಾದ ವಿಷಯ, ಅತ್ಯಂತ ಉತ್ತಮ ವಾತಾವರಣದಲ್ಲಿರುವ ಪಿಲಿಕುಳ ನಿಸರ್ಗ ಧಾಮಕ್ಕೆ ಮುಂಬರುವ ದಿನಗಳಲ್ಲಿ ಅರಣ್ಯ ಇಲಾಖೆ ವತಿಯಿಂದ ಮತ್ತಷ್ಟು ಸುಧಾರಣೆಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ, ಈ ಹಿನ್ನಲೆಯಲ್ಲಿ ಕೇಂದ್ರ ಅರಣ್ಯ ಸಚಿವರಾದ ಭೂಪೇಂದ್ರ ಯಾದವ್ ಅವರೊಂದಿಗೆ ಚರ್ಚಿಸಲಾಗುವುದು, ಇತ್ತೀಚೆಗೆ ತಾನೆ ಅವರು ಕೇಂದ್ರ ಅರಣ್ಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ, ಒಟ್ಟಾರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಈ ನಿಸರ್ಗ ಧಾಮದ ಅಭಿವೃದ್ದಿ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಲು ಚಿಂತಿಸಲಾಗಿದೆ ಎಂದು ಹೇಳಿದ್ದಾರೆ.
ಅರಣ್ಯ ಹಕ್ಕು ಕಾಯಿದೆ: ಅರಣ್ಯ ಹಕ್ಕು ಕಾಯಿದೆಗಳ ಕುರಿತು ಮಾತನಾಡಿದ ಸಚಿವರು, ಅರಣ್ಯದಲ್ಲಿ ವಾಸ ಮಾಡುತ್ತಿರುವ ಬುಡಕಟ್ಟು ಜನಾಂಗದವರು ನಗರ ಪ್ರದೇಶಗಳಿಗೆ ಸ್ಥಳಾಂತರಗೊಳ್ಳಲು ಸಿದ್ದವಿರುವವರನ್ನು ಅವರ ಒಪ್ಪಿಗೆ ಮೇರೆಗೆ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆ ಜಾರಿಯಲ್ಲಿದೆ, ಇಲ್ಲವೇ ಬಹುದಿನಗಳಿಂದ ಅರಣ್ಯದಲ್ಲಿಯೇ ವಾಸವಿರುವವರು ಅಲ್ಲಿಯೇ ಇರಲು ಇಚ್ಛಿಸಿದ್ದಲ್ಲೀ ಅರಣ್ಯ ಪ್ರದೇಶಗಳಲ್ಲಿಯೇ ಅಗತ್ಯ ಮೂಲಭೂತ ಸೌಕರ್ಯಗಳನ್ನು ಅಧಿಕಾರಿಗಳು ಒದಗಿಸಿಕೊಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಕಮಿಷನರ್ ವೆಂಕಟೇಶ್ ಜಿ.ಎಸ್, ನಿರ್ದೇಶಕ ಜಯಪ್ರಕಾಶ್ ಭಂಡಾರಿ, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಕೆ.ವಿ ರಾವ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನಟಲ್ಕಾರಿ , ಬಿ.ಸಿ.ಎಫ್ ಕರಿಕಳನ್, ಎ.ಸಿ.ಎಫ್ ಸುಬ್ರಹ್ಮಣ್ಯ, ರೇಂಜ್ ಆಫೀಸರ್ ಶ್ರೀಧರ್, ಹಾಗೂ ಮತ್ತಿತರರು ಉಪಸ್ಥಿತರಿದ್ದರು.