ಕಾರ್ಕಳ, ಜು. 09 (DaijiworldNews/SM): ಹಿರ್ಗಾನ ನಿವಾಸಿ ರಾಧಕೃಷ್ಣ ನಾಯಕ್ ಅವರನ್ನು ಠಾಣೆಗೆ ಕರೆಸಿ ಹಿಗ್ಗ-ಮುಗ್ಗ ಥಳಿಸಿದ ಆರೋಪ ಎದುರಿಸುತ್ತಿರುವ ನಗರ ಠಾಣಾಧಿಕಾರಿಯವರ ನಡೆ ಖಂಡನೀಯ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್ ನಯನ್ ಆರೋಪಿಸಿದ್ದಾರೆ.
ರಾಧಾಕೃಷ್ಣ ಅವರ ನಕಲಿ ಖಾತೆ ತೆರೆದು ಸೈನಿಕರ ವಿರುದ್ದ ದೇಶದ್ರೋಹಿಯಾಗಿ ಬಿಂಬಿಸುವ ಪೋಸ್ಟನ್ನು ಒಂದು ವರ್ಷದ ಹಿಂದೆಯೇ ಯಾರೋ ಹರಿಯಬಿಟ್ಟಿದ್ದರು. 2020ರ ಸೆ.4ರಂದು ಅವರ ವಿರುದ್ದ ಪ್ರಕರಣ ದಾಖಲಿಸಲಾಗಿತ್ತು. ಬೆಂಗಳೂರು ಗಂಗಮ್ಮನ ಗುಡಿ ಠಾಣೆಯಲ್ಲಿ ಸೈಬರ್ ಕ್ರೈಂ ಸಂಬಂಧಿಸಿ ದೂರು ದಾಖಲಿಸಲಾಗಿತ್ತು. ಅಂದು ಸ್ವತಃ ರಾಧಾಕೃಷ್ಣ ನಾಯಕ್ ಅವರೇ ಈ ನಕಲಿ ಖಾತೆ ತೆರೆದಿರುವ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದ್ದರು.
ಆದರೆ ಒಂದು ವರ್ಷದ ಬಳಿಕ ಅದೇ ಪ್ರಕರಣವನ್ನು ಮುಂದಿಟ್ಟುಕೊಂಡು ನಗರ ಠಾಣಾಧಿಕಾರಿ ಅಮಾನುಷ ರೀತಿಯಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಅದಲ್ಲದೆ ಸೈಬರ್ ಕ್ರೈಂ ವಿಭಾಗದ ಪೊಲೀಸರು ತನಿಖೆ ನಡೆಸುವ ಪ್ರಕರಣವನ್ನು ಕೈಗೆತ್ತಿಕೊಂಡು ಆಡಳಿತ ಪಕ್ಷಕ್ಕೆ ಖುಷಿ ತರುವಂತಹ ಕೆಲಸವನ್ನು ಪಿಎಸ್ಐ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ತಪ್ಪಿತಸ್ಥ ಠಾಣಾಧಿಕಾರಿಯನ್ನು ತಕ್ಷಣ ಅಮಾನತು ಮಾಡುವಂತೆ ಗೃಹ ಇಲಾಖೆ ಮತ್ತು ಸರಕಾರವನ್ನು ಒತ್ತಾಯಿಸಿದರು. ಸರಕಾರ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟಿಸುವುದಾಗಿ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರ, ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ನಕ್ರೆ ಬಿಪಿನ್ಚಂದ್ರಪಾಲ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ರಾಜ್ಯ ಯುವ ಕಾಂಗ್ರೆಸ್ ಮುಖಂಡ ರವಿಶಂಕರ್ ಶೇರಿಗಾರ್, ಪುರಸಭೆ ಸದಸ್ಯ ಶುಭದ ರಾವ್, ತಾಲೂಕು ರೈತ ಸಂಘದ ಅಧ್ಯಕ್ಷ ಪ್ರಕಾಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.