ಕಾರ್ಕಳ, ಜು 09 (DaijiworldNews/PY): ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣ ನಾಯಕ್ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಖಂಡನೀಯ ಎಂದು ಸಿದ್ದರಾಮಯ್ಯ ಟ್ವೀಟ್ ತಿರುಗೇಟು ನೀಡಿರುವ ಕಾರ್ಕಳ ಶಾಸಕ ಸುನಿಲ್ ಕುಮಾರ್, "ದೇಶದ್ರೋಹ ಎಂದರೇನು ಎಂದು ಶ್ರೀ ಸಿದ್ದರಾಮಯ್ಯರಿಂದ ಪ್ರತ್ಯೇಕವಾಗಿ ಕೇಳಬೇಕಿಲ್ಲ. ಅವರು ಸಿಎಂ ಆಗಿದ್ದಾಗ ದೇಶದ್ರೋಹದ ಹೇಳಿಕೆ ಕೊಡುವಂತವರನ್ನು ಜೊತೆಯಲ್ಲಿಟ್ಟುಕೊಂಡೆ ಕೆಲಸ ಮಾಡಿದವರು" ಎಂದಿದ್ದಾರೆ.
"ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣ ನಾಯಕ್ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಖಂಡನೀಯ. ಇವರ ಅನಾರೋಗ್ಯವನ್ನೂ ಲೆಕ್ಕಿಸದೆ,ಹಳೆ ಸುಳ್ಳು ಕೇಸ್ ಆಧರಿಸಿ,ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಈ ಬಗ್ಗೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗಳು ತನಿಖೆ ನಡೆಸಿ ನೊಂದ ಯುವಕನಿಗೆ ನ್ಯಾಯ ಒದಗಿಸಬೇಕು" ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಆಗ್ರಹಿಸಿದ್ದರು.
ಸಿದ್ಧರಾಮಯ್ಯ ಅವರ ಟ್ವೀಟ್ ತಿರುಗೇಟು ನೀಡಿರುವ ಸುನಿಲ್ ಕುಮಾರ್ ಅವರು, "ಕಾಂಗ್ರೆಸ್ ಕಾರ್ಯಕರ್ತ ಜಾಲತಾಣದಲ್ಲಿ ಈ ಹಿಂದೆ ಯಾವ ಪೋಸ್ಟ್ ಹಾಕಿದ್ದಾನೆ ಎಂಬ ಅರಿವಿಲ್ಲದೆ ಸಿದ್ದರಾಮಯ್ಯ ಸಮರ್ಥಿಸಿರುವುದು ಅವರ ಬದ್ಧತೆಯನ್ನು ಪ್ರಶ್ನಿಸುತ್ತದೆ. ಸಮರ್ಥಿಸುವ ಭರದಲ್ಲಿ ಸೈನಿಕರನ್ನು ಸಿದ್ದರಾಮಯ್ಯ ಅವಮಾನಿಸುತ್ತಿದ್ದಾರೆ. ದೇಶದ್ರೋಹಿ ವ್ಯಕ್ತಿಯನ್ನು ಬೆಂಬಲಿಸುವುದು ನಾಚಿಕೆಗೇಡಿನ ಸಂಗತಿ" ಎಂದು ಹೇಳಿದ್ದಾರೆ.
"ದೇಶದ್ರೋಹ ಎಂದರೇನು ಎಂದು ಶ್ರೀ ಸಿದ್ದರಾಮಯ್ಯರಿಂದ ಪ್ರತ್ಯೇಕವಾಗಿ ಕೇಳಬೇಕಿಲ್ಲ. ಅವರು ಸಿಎಂ ಆಗಿದ್ದಾಗ ದೇಶದ್ರೋಹದ ಹೇಳಿಕೆ ಕೊಡುವಂತವರನ್ನು ಜೊತೆಯಲ್ಲಿಟ್ಟುಕೊಂಡೆ ಕೆಲಸ ಮಾಡಿದವರು. ಅದು ನಿಮ್ಮ ಕಾಲ. ಸೈನಿಕರು, ಸೈನ್ಯದ ಬಗ್ಗೆ ದೇಶದ್ರೋಹದ ಹೇಳಿಕೆ ನೀಡಿದ್ದ ವ್ಯಕ್ತಿಯನ್ನು ಈಗ ಕಾರ್ಕಳದಲ್ಲಿ ಪೊಲೀಸ್ ಬಂಧಿಸಿದೆ. ಇದು ನಮ್ಮ ಕಾಲ" ಎಂದಿದ್ದಾರೆ.
"ಅತ್ತಂತೆ ನಟಿಸುವವರ ಸಮರ್ಥನೆಗೆ ನೀವು ಬೇಗ ಬರುತ್ತಿರಿ. ಕೆಜೆ ಹಳ್ಳಿ ಗಲಭೆ - ನಿಮ್ಮ ಸಮರ್ಥನೆ, ಗಲಭೆ- ನಿಮ್ಮ ಸಮರ್ಥನೆ, ಬೆಂಗಳೂರಿನ ಗೌರಿಪಾಳ್ಯದಲ್ಲಿ ವೈದ್ಯರ ಮೇಲೆ ಹಲ್ಲೆ - ನಿಮ್ಮ ಸಮರ್ಥನೆ, ಹಿಂದು ಕಾರ್ಯಕರ್ತರ ಕಗ್ಗೊಲೆ - ನಿಮ್ಮ ಸಮರ್ಥನೆ, ಕೊಲೆಗಡುಕ ಎಸ್ ಡಿ ಪಿಐ, ಪಿಎಫ್ ಐ ಸಂಘಟನೆ - ನಿಮ್ಮ ಸಮರ್ಥನೆ" ಎಂದು ಹೇಳಿದ್ದಾರೆ.