ಕಾರ್ಕಳ, ಜು 08 (DaijiworldNews/MS): ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣ ನಾಯಕ್ ಅವರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ವಿಪಕ್ಷ ಮುಖಂಡ ಸಿದ್ದರಾಮಯ್ಯ ಅವರು ಈ ಕುರಿತು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿ ಘಟನೆ ಕುರಿತು ಖಂಡಿಸಿದ್ದಾರೆ.
"ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣ ನಾಯಕ್ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಖಂಡನೀಯ. ಇವರ ಅನಾರೋಗ್ಯವನ್ನೂ ಲೆಕ್ಕಿಸದೆ, ಹಳೆ ಸುಳ್ಳು ಕೇಸ್ ಆಧರಿಸಿ, ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಈ ಬಗ್ಗೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗಳು ತನಿಖೆ ನಡೆಸಿ ನೊಂದ ಯುವಕನಿಗೆ ನ್ಯಾಯ ಒದಗಿಸಬೇಕು " ಎಂದು ಟ್ವೀಟ್ ಮಾಡಿದ್ದಾರೆ
ಘಟನೆಯ ಹಿನ್ನಲೆ:
ರಾಧಾಕೃಷ್ಣ ನಾಯಕ್ ಅವರು ಫೇಸ್ ಬುಕ್ ಪುಟದಲ್ಲಿ ಕಳೆದ ಒಂದು ವರ್ಷದ ಹಿಂದೆ ಯೋಧರ ವಿರುದ್ಧ ಕೇಂದ್ರ, ರಾಜ್ಯ ಸರ್ಕಾರದ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು ಇದರ ಕುರಿತು ಕೆಲವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆದರೆ ತಮ್ಮ ಹೆಸರಿನ ಫೇಕ್ ಐಡಿ ಮೂಲಕ ಕಿಡಿಗೇಡಿಗಳು ಮಾಡಿದ ಪೋಸ್ಟ್ ಇದಾಗಿದೆ ಎಂದು ಹಾಗೂ ಇದರ ವಿರುದ್ದ ಕ್ರಮ ಕೈಗೊಳ್ಳುವಂತೆ ಉತ್ತರ ಗಂಗಮ್ಮ ನ ಗುಡಿ ಪೊಲೀಸ್ ಠಾಣೆಯಲ್ಲಿ 2020ರ ಆಗಸ್ಟ್ ನಲ್ಲಿ ರಾಧಾಕೃಷ್ಣ ಅವರು ದೂರು ನೀಡಿದ್ದರು.
ಇದೇ ವಿಚಾರವಾಗಿ ಇದೀಗ ಕಾರ್ಕಳ ಠಾಣೆಗೆ ವಿಚಾರಣೆಗೆ ಬಂದಿದ್ದ ರಾಧಕೃಷ್ಟ ಅವರಿಗೆ ಎಸೈ ಮಧು ರಾಧಾಕೃಷ್ಣ ಅವರು ಎದೆಗೆ ಕಾಲಿನಿಂದ ಒದ್ದು ದೌರ್ಜನ್ಯ ನಡೆಸಿಲಾಗಿದೆ ಎಂದು ಆರೋಪ ಕೇಳಿ ಬಂದಿದೆ. ರಾಧಾಕೃಷ್ಣ ಅವರು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ತನಿಖೆಗೆ ಆದೇಶ:
ಕಾಂಗ್ರೆಸ್ ಕಾರ್ಯಕರ್ತರ ರಾಧಾಕೃಷ್ಣ ನಾಯಕ್ ಅವರ ಮೇಲೆ ಕಾರ್ಕಳ ಎಸ್ಐ ನಡೆಸಿದ ಪೊಲೀಸ್ ದೌರ್ಜನ್ಯದ ಆರೋಪ ಪ್ರಕರಣದ ಕುರಿತು ತನಿಖೆಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ವಿಷ್ಣುವರ್ಧನ್ ಆದೇಶಿಸಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕರು ಡೈಜಿವರ್ಲ್ಡ್ ಜೊತೆಮಾತನಾಡಿ " ಸೋಶಿಯಲ್ ಮೀಡಿಯಾ ಪೋಸ್ಟ್ ನಕಲಿ ಎಂದು ಸಾಬೀತುಪಡಿಸಲು ದಾಖಲೆಗಳನ್ನು ಸಲ್ಲಿಸುವಂತೆ ರಾಧಾಕೃಷ್ಣ ಅವರಲ್ಲಿ ಕೇಳಿಕೊಳ್ಲಲಾಗಿದೆ. ಅವರು ಸುಮಾರು 11 ತಿಂಗಳುಗಳ ಕಾಲ ವಿಚಾರಣೆಗೆ ಹಾಜರಾಗಿರಲಿಲ್ಲ ಎಂದು ತಿಳಿದುಬಂದಿದೆ. ಅದರೂ ಈ ಘಟನೆಯ ಕುರಿತು ಈಗಾಗಲೇ ತನಿಖೆಗೆ ಆದೇಶಿಸಿದ್ದು, ಡಿವೈಎಸ್ಪಿ ಶ್ರೀಕಾಂತ್ ಅವರಿಗೆ ತನಿಖಾ ವರದಿ ಸಲ್ಲಿಸುವಂತೆ ಹೇಳಿದ್ದೇನೆ. ಇದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.