ಉಡುಪಿ, ಜು 08 (DaijiworldNews/MS): ಹೋಮ್ ಗಾರ್ಡ್ ಸಿಬ್ಬಂದಿಗಳಿಗೆ ಮೂರು ತಿಂಗಳಿಂದ ಬಾಕಿ ಇರುವ ವೇತನವನ್ನು ತಕ್ಷಣ ಪಾವತಿಸುವಂತೆ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಒತ್ತಾಯಿಸಿದ್ದಾರೆ.
ಉಡುಪಿಯ ಹೋಮ್ ಗಾರ್ಡ್ ಸಿಬ್ಬಂದಿಯೋರ್ವರು ಪ್ರಮೋದ್ ಮಧ್ವರಾಜ್ ಅವರನ್ನು ಸಂಪರ್ಕಿಸಿ ಕಳೆದ ಮೂರು ತಿಂಗಳಿನಿಂದ ತಮಗೆ ವೇತನ ಸಿಗದಿರುವ ಬಗ್ಗೆ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಈ ವಿಚಾರವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಮಾಜಿ ಶಾಸಕರು ವೇತನ ಬಿಡುಗಡೆಗೆ ಒತ್ತಾಯಿಸಿದ್ದಾರೆ.
"ಕರ್ನಾಟಕ ಪೋಲಿಸ್ ನ ಶಕ್ತಿಗಳಲ್ಲೊಂದಾಗಿರುವ ಹೋಂ ಗಾರ್ಡ್ಸ್ ಸಿಬ್ಬಂದಿಗಳು ಹಗಲಿರುಳು ಪೋಲಿಸ್ ರವರ ಜೊತೆಗೆ ಶ್ರಮಿಸುತ್ತಿದ್ದು , ಕಳೆದ ಮೂರು ತಿಂಗಳಿನಿಂದ ತಮಗೆ ವೇತನ ಸಿಗದಿರುವ ಬಗ್ಗೆ ಹೋಂ ಗಾರ್ಡ್ ಒಬ್ಬರು ನನಗೆ ಕರೆ ಮಾಡಿ ತಿಳಿಸಿದ್ದು ಜಿಲ್ಲಾಡಳಿತದ ಜಿಲ್ಲಾಧಿಕಾರಿಯವರಿಗೆ ಕರೆ ಮಾಡಿ ಸೂಕ್ತ ಕ್ರಮವಹಿಸುವಂತೆ ತಿಳಿಸಿದ್ದೇನೆ ಮತ್ತು ಈ ವಿಚಾರವನ್ನು ಐಎಎಸ್ ಅಧಿಕಾರಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿರುವ ಮೇಜರ್ ಮಣಿವಣ್ಣನ್ ರವರ ಗಮನಕ್ಕೂ ತರಲಾಗಿದ್ದು ಈ ಬಗ್ಗೆ ಮೇಜರ್ ಮಣಿವಣ್ಣನ್ ರವರು ತಕ್ಷಣ ಪ್ರತಿಕ್ರಿಯಿಸಿ ಉಡುಪಿ ಜಿಲ್ಲಾಧಿಕಾರಿಯವರ ಜೊತೆಗೆ ಚರ್ಚಿಸಿ ಶೀಘ್ರದಲ್ಲಿ ವೇತನ ಪಾವತಿಗೆ ಕ್ರಮವಹಿಸುವುದಾಗಿ ತಿಳಿಸಿದ್ದಾರೆ ಎಂದು ಮಾಜಿ ಶಾಸಕರು ಬರೆದುಕೊಂಡಿದ್ದಾರೆ.