ಮಂಗಳೂರು, ಜು 09 (DaijiworldNews/PY): ಇಲ್ಲಿನ ಡೊಂಗರಕೇರಿ ಅಶ್ವತ್ಥಕಟ್ಟೆ ಸಮೀಪ ರಸ್ತೆ ಕಾಮಗಾರಿ ಸಂದರ್ಭ ಪುರಾತನ ಬಾವಿಯೊಂದು ಪತ್ತೆಯಾಗಿದ್ದು, ಇದು ಶತಮಾನಗಳ ಹಿಂದಿನ ಬಾವಿ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಈ ಬಾವಿ ಸುಮಾರು 50 ಅಡಿ ಆಳವಿದ್ದು, ಬಾವಿಯ ಗೋಡೆಗಳನ್ನು ಕೆಂಪುಕಲ್ಲಿನಿಂದ ನಿರ್ಮಿಸಲಾಗಿದೆ. ಬಾವಿಯ ಅಗಲ ಸುಮಾರು 4.5 ಮೀಟರ್ ಇದ್ದು, ಈ ಬಾವಿಯಲ್ಲಿ ಸುಮಾರು 15 ಅಡಿ ಆಳದವರೆಗೆ ಶುದ್ಧ ನೀರು ಇದೆ. 1917ರಲ್ಲಿ ಅಂದಿನ ಮಂಗಳೂರು ಮುನ್ಸಿಪಾಲಿಟಿ ನಗರದ ವಿವಿಧೆಡೆ ತೋಡಿರುವ ಬಾವಿಗಳಲ್ಲಿ ಈಗ ಪತ್ತೆಯಾಗಿರುವ ಬಾವಿಯೂ ಒಂದು ಎಂದು ಹೇಳಲಾಗುತ್ತಿದೆ. ಆ ಸಂದರ್ಭ ಅಲ್ಲಿನ ಬಹಳಷ್ಟು ಮನೆಯವರು ಈ ಬಾವಿಯ ನೀರನ್ನು ಉಪಯೋಗಿಸುತ್ತಿದ್ದರು.
ನಗರಕ್ಕೆ ನಲ್ಲಿ ನೀರಿನ ವ್ಯವಸ್ಥೆ ಮಾಡಿದ ನಂತರ ಕ್ರಮೇಣವಾಗಿ ಈ ಬಾವಿ ನೀಡು ಬಳಕೆ ಕಡಿಮೆಯಾಯಿತು. ಒಂದೆರಡು ಮಂದಿ ಈ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿದ್ದರು. ನಂತರ ಉಪಯೋಗವಿಲ್ಲ ಎಂದು 1969ರಲ್ಲಿ ಈ ಬಾವಿಯನ್ನು ಮುಚ್ಚಲಾಯಿತು.
ನಗರದ ಸ್ಮಾರ್ಟ್ ಸಿಟಿ ಕಾಮಗಾರಿಯ ಸಂದರ್ಭ ಪತ್ತೆಯಾಗಿರುವ ನಾಲ್ಕನೇ ಪುರಾತನ ಬಾವಿ ಇದಾಗಿದೆ. ಕಳೆದ ಸೆಪ್ಟೆಂಬರ್ನಲ್ಲಿ ಹಂಪನಕಟ್ಟೆ ಬಳಿ ಶತಮಾನದ ಹಿಂದಿನ ಬಾವಿ ಪತ್ತೆಯಾಗಿತ್ತು. ನಂತರ ಬೋಳಾರ ಜಂಕ್ಷನ್ ಬಳಿ ಬ್ರಿಟಿಷ್ ಕಾಲದ ಪುರಾತನ ಬಾವಿ ಪತ್ತೆಯಾಗಿತ್ತು. ತಿಂಗಳ ಹಿಂದ ನವಭಾರತ್ ಸರ್ಕಲ್ ಒಳಗಡೆ ಒಂದು ಬಾವಿ ಪತ್ತೆಯಾಗಿತ್ತು.
"ಸ್ಮಾರ್ಟ್ ಸಿಟಿ ಕಾಮಗಾರಿಯ ಸಂದರ್ಭ ನಾಲ್ಕು ಬಾವಿಗಳು ಪತ್ತೆಯಾಗಿವೆ. ಈ ಪೈಕಿ ಹಂಪನಕಟ್ಟೆ ಬಾವಿಗೆ ಹೊಸ ರೂಪ ನೀಡಲಾಗಿದೆ. ಇನ್ನುಳಿದ ಮೂರು ಬಾವಿಗಳಿಗೆ ಕಾಯಕಲ್ಪ ನೀಡಲಾಗಿದೆ. ನೀರು ಕುಡಿಯಲು ಯೋಗ್ಯವೇ ಎಂದು ಪರೀಕ್ಷಿಸಲಾಗುವುದು" ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ತಿಳಿಸಿದ್ದಾರೆ.