ಮಂಗಳೂರು ,ಜು 08 (DaijiworldNews/MS): ರಸ್ತೆ ಅಪಘಾತದಲ್ಲಿ ಮೃತಪಟ್ಟ ಮೂಲ್ಕಿ ಪೊಲೀಸ್ ಠಾಣೆಯ ಹೋಂಗಾರ್ಡ್ ಸ್ಥಳೀಯ ಕುಬೇವೂರು ಬಳಿಯ ನಿವಾಸಿ ರಾಕೇಶ್ ಕುಟುಂಬಕ್ಕೆ ಮಂಗಳೂರು ಪೊಲೀಸ್ ಕಮಿಷನರೇಟ್ ಸಿಬ್ಬಂದಿ ಸುಮಾರು 5.26 ಲಕ್ಷ ರೂ ಆರ್ಥಿಕ ನೆರವು ಒದಗಿಸುವ ಮೂಲಕ ಮಾನವೀಯ ಸ್ಪಂದನೆ ತೋರಿದ್ದಾರೆ.
ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಮತ್ತು ಬಿಸಿಪಿ ಹರಿರಾಮ್ ಶಂಕರ್ ಅವರು ಜು.08 ರ ಗುರುವಾರ ಮುಲ್ಕಿಯ ಕುಬೇವೂರಿನ ರಾಕೇಶ್ ಮನೆಗೆ ತೆರಳಿ ತಂದೆ ಶಾಂತರಾಮ ಮತ್ತು ತಾಯಿ ವಾರಿಜಾ ದಂಪತಿಗೆ ಸಾಂತ್ವನ ಹೇಳಿ ಮೊತ್ತವನ್ನು ಹಸ್ತಾಂತರಿಸಿದರು.
22 ವರ್ಷದ ರಾಕೇಶ್ ಜೂನ್ 30ರಂದು ಉಡುಪಿಯ ಉದ್ಯಾವರದಲ್ಲಿಸಂಭವಿಸಿದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ರಾಕೇಶ್ ನಿಧನದಿಂದಾಗಿ ಅವರ ಕುಟುಂಬ ದುಡಿಯುವ ಕೈಗಳಿಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಈ ಬಡ ಕುಟುಂಬಕ್ಕೆ ನೆರವಾಗುವ ದಿಶೆಯಲ್ಲಿ ಕಮಿಷನರೇಟ್ ವ್ಯಾಪ್ತಿಯ ಎಲ್ಲಾ 16 ಪೊಲೀಸ್ ಠಾಣೆಗಳಿಂದ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಹಣ ಸಂಗ್ರಹ ಮಾಡಿದ್ದರು.