ಉಡುಪಿ, ಜು 08 (DaijiworldNews/MS): ಉಡುಪಿ–ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರು ಮೋದಿ ಸಂಪುಟ ಸೇರಿದ್ದು ಕೇಂದ್ರ ಕೃಷಿ ಹಾಗೂ ರೈತರ ಅಭಿವೃದ್ಧಿ ಖಾತೆ ಸಿಕ್ಕಿದೆ. ಸ್ಏಳು ವರ್ಷಗಳ ನಂತರ ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಸಚಿವ ಸ್ಥಾನ ಅಲಂಕರಿಸಿದ್ದಾರೆ. ಇದರ ಬೆನ್ನಲ್ಲೇ ಕ್ಷೇತ್ರದ ಜನತೆಯಲ್ಲಿ ಹಲವಾರು ಪ್ರಶ್ನೆ ಎದ್ದಿದೆ.
ಶೋಭಾ ಕರಂದ್ಲಾಜೆಯವರು ಪ್ರಸ್ತುತ ಉಡುಪಿ- ಚಿಕ್ಕಮಗಳೂರು ಲೋಕಸಭಾ ಸದಸ್ಯರಾಗಿ ಬಹಳಷ್ಟು ಕೆಲಸ ಮಾಡಿದ್ದಾರೆ. ಬಿಜೆಪಿ ಪಕ್ಷದ ಹಲವಾರು ಲೆಕ್ಕಚಾರದಿಂದ ಅಳೆದು ತೂಗಿ ಆಕೆಗೆ ಈಗ ಕ್ಯಾಬಿನೆಟ್ ಸದಸ್ಯರಾಗಿ ಅವಕಾಶ ದೊರಕಿದೆ. ಹಳ್ಳಿಯ ಹಕ್ಕಿ ಇನ್ನು ದಿಲ್ಲಿಯಲ್ಲಿ ಸದ್ದು ಮಾಡಲು ಅವಕಾಶ ಸಿಕ್ಕಿದೆ. ಆದರೆ ತಮ್ಮದೇ ಲೋಕಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಮತಗಳ ಅಂತರದಿಂದ ಗೆದ್ದ ಶೋಭಾ ಅವರು ತನ್ನ ತವರು ಕ್ಷೇತ್ರದಲ್ಲಿ ಸಚಿವೆಯಾಗಿದ್ದಕ್ಕೆ ಒಂದು ಸಣ್ಣ ಪಟಾಕಿಯನ್ನು ಸಿಡಿಸಿ ಸಂಭ್ರಮಿಸಿಲ್ಲ. ಎಲ್ಲಿಯೂ ಲಡ್ಡು ಹಂಚಿದ ದೃಶ್ಯಗಳಿಲ್ಲ. ಯಾವುದೋ ಸ್ಥಳೀಯ ಕಾರ್ಯಕರ್ತ ಚುನಾವಣೆ ಗೆದ್ದರೋ ಅಥವಾ ಉನ್ನತ ಹುದ್ದೆಗೆ ಹೋದರೂ ಸಂಭ್ರಮಿಸಿ ಕುಣಿಯುವ ಬಿಜೆಪಿ ನಾಯಕರ ಜೋಶ್ ಶೋಭಾರವರು ಸಚಿವೆಯಾಗಿರುವುದರಲ್ಲಿ ಯಾಕಿಲ್ಲ ಎನ್ನುವುದು ಸದ್ಯ ಸಾರ್ವಜನಿಕ ವಲಯದಲ್ಲಿ ಬಹಳ ಕುತೂಹಲ ಕೆರಳಿಸುತ್ತಿರುವ ಪ್ರಶ್ನೆ?
ಸಂಸದೆಯಾಗಿ ಶೋಭಾ ಕರಂದ್ಲಾಜೆಯವರು ಮೊದಲಿನಿಂದಲೂ ರಾಜ್ಯ ರಾಜಕಾರಣದಲ್ಲಿ, ಮುಖ್ಯಮಂತ್ರಿಗಳ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. 2004 ರಿಂದ ವಿಧಾನ ಪರಿಷತ್ ಸದಸ್ಯರಾಗಿ, ಶಾಸಕಿಯಗಿ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವೆಯಾಗಿ, ನಾಗರೀಕ ಮತ್ತು ಆಹಾರ ಸರಬರಾಜು ಇಲಾಖೆ, ಇಂಧನ ಇಲಾಖೆ, ಮಹಿಳಾ ಸಬಲೀಕರಣ, ರಕ್ಷಣಾ ಸಮಿತಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸೇವೆ ಮಾಡಿದ್ದಾರೆ. 2014ರ ಉಡುಪಿ- ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಫಲಿತಾಂಶ ಅವರ ಇಡೀ ರಾಜಕೀಯದ ಪಥವನ್ನೇ ಬದಲಾಯಿಸಿತು ಎಂದರೆ ತಪ್ಪಿಲ್ಲ. ೨೦೧೯ರಲ್ಲಿ ನಡೆದ ಲೋಕಸಭೆಯಲ್ಲೂ ತಮ್ಮ ಸಾಧನೆಯಿಂದ ಅಲ್ಲದಿದ್ದರೂ ಕೂಡ ಮೋದಿಯ ಕಾರ್ಯವೈಖರಿಯಿಂದ, ಶೋಭಾ ಅತ್ಯಧಿಕ ಮತಗಳನ್ನು ಪಡೆದು ಕರ್ನಾಟಕದಲ್ಲೇ ನಂಬರ್-1 ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದರು.
ಎರಡನೆಯ ಬಾರಿಗೆ ಅವರು ಸ್ಪರ್ಧಿಸಲು ಅಣಿಯಾದಾಗ 'ಗೋ ಬ್ಯಾಕ್ ಶೋಭಾ" ಎಂಬ ಅಭಿಯಾನವನ್ನು ಬಿಜೆಪಿಯ ಒಂದು ಪಂಗಡವೇ ಗುಟ್ಟಾಗಿ ನಡೆಸಿತ್ತು. ಇದರ ಹೊರತಾಗಿಯೂ ಮೋದಿಯ ಅಲೆಯಲ್ಲಿ ತೇಲಿ ಗೆದ್ದು ಬಂದಿದ್ದರು. ಇದೀಗ ಅವರು ಸದ್ದಿಲ್ಲದೆ ಕೇಂದ್ರ ಸಚಿವೆ ಆಗಿದ್ದಾರೆ.
ಸುಶಿಕ್ಷಿತ ಜಿಲ್ಲೆ ಎಂದು ಹೆಸರು ಪಡೆದಿರುವ ಉಡುಪಿಗೆ ಎಲ್ಲರೂ ಇದ್ದಾರೆ, ಆದರೆ ಯಾರೂ ಇಲ್ಲ ಎಂಬ ಪರಿಸ್ಥಿತಿ. ಯಾಕೆಂದರೆ ಉಸ್ತುವಾರಿಗಳು ನಮ್ಮವರೇ ಆಗಬೇಕು ಎನ್ನುವ ಉಡುಪಿಯ ಜನತೆಯ ಮಹಾದಾಸೆಗೆ ಗೃಹ ಸಚಿವರಾದ ಬಸವರಾದ ಬೊಮ್ಮಾಯಿಯವರು ಉಸ್ತುವಾರಿಯಾಗಿ ಆಸೆಯ ಮೇಲೆ ತಣ್ಣೀರೆರಚಿದಂತಾಯಿತು. ಅವರ ರಾಜ್ಯದ ಕಾರ್ಯದೊತ್ತಡದಿಂದ ಉಡುಪಿಗೆ ಬರುವುದೇ ಅಪರೂಪವಾಗಿದ್ದು, ಅವರ ಜವಾಬ್ದಾರಿ ಯನ್ನು ಪರೋಕ್ಷವಾಗಿ ಜಿಲ್ಲಾಧಿಕಾರಿಗಳೇ ನಿರ್ವಹಿಸುತ್ತಿದ್ದಾರೆ.
ಸಂಸದೆಯಾಗಿ ಅತಿಥಿಯಂತೆ ಬರುವ ಶೋಭಾ , ಕೇಂದ್ರ ಸಚಿವೆಯಾದ ನಂತರ ಉಡುಪಿ ಜನತೆಯ ಕೈಗೆ ಸಿಗ್ತಾರಾ?
ಜಿಲ್ಲಾ ಉಸ್ತುವಾರಿಯವರ ಕಥೆ ಒಂದು ಕಡೆಯಾದರೆ, ಇದೀಗ ಅತಿಥಿಯಾಗಿ ಬರುವ ಸರದಿ ಶೋಬಾ ಕರಂದ್ಲಾಜೆಯವರದ್ದು. ಮೊದಲೇ ರಾಜ್ಯ ರಾಜಕಾರಣದಲ್ಲಿ ಗುರುತಿಸಿಕೊಂಡ ಶೋಭಾ, ಜಿಲ್ಲೆಯಲ್ಲಿ ಮೂರು ತಿಂಗಳಿಗೊಮ್ಮೆ ನಡೆಯುವ ದಿಶಾ ಸಭೆ ಹೊರತು ಪಡಿಸಿ ಪಕ್ಷದ ಕಾರ್ಯಕ್ರಮಗಳಿಗೆ ಬಂದು ಹೋಗುವ ಅತಿಥಿಯಾಗಿ ಉಳಿದಿದ್ದಾರೆ. ಉಡುಪಿ ಜನತೆ ನಡುವೆ ನೇರಾನೇರ ಸಂಬಂಧ ಇಟ್ಟುಕೊಳ್ಳುವುದಕ್ಕಿಂತ ವಿವಾದಾತ್ಮಕ ಹೇಳಿಕೆ ನೀಡಿ ಪ್ರಚಾರ ಪಡೆದುಕೊಂಡದ್ದೇ ಹೆಚ್ಚು.
ಇನ್ನು ಉಡುಪಿಯಲ್ಲಿ ಕೇಂದ್ರದ ಯೋಜನೆಯನ್ನು ಘೋಷಣೆ ಮಾಡಿದ್ದು ಬಿಟ್ಟರೆ ಅನುಷ್ಠಾನ ಮಾಡುವಲ್ಲಿ ಸಂಸದೆ ಯಶಸ್ಸು ಕಾಣಲಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಮಲ್ಪೆ -ತೀರ್ಥ ಹಳ್ಳಿ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿ ಇಷ್ಟು ವರ್ಷವಾದರೂ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಅಭಿವೃದ್ಧಿ ಆಗದೆ ಹಾಗೆಯೇ ಉಳಿದಿದೆ. ಇನ್ನು ಪರ್ಕಳ ಹೆದ್ದಾರಿ ದುಸ್ಥಿತಿ, ಅಲ್ಲಿ ಪ್ರಯಾಣ ಮಾಡುವಾಗ ಪ್ರಯಾಣಿಕರಿಗೆ ಆಗುವ ತೊಂದರೆ ಹೇಳತೀರದು. ಈ ಬಗ್ಗೆ ಸ್ವತಃ ಅವರದೇ ಪಕ್ಷದ ನಾಯಕರು ಅಸಹಾಯಕತೆಯಿಂದ ಉತ್ತರಿಸುವ ರೀತಿ. "ಶೋಭಾರವರು ಸಚಿವರಾದರೆ ಏನಂತೆ.. ಮಣಿಪಾಲ -ಪರ್ಕಳದ ರಾ. ಹೆದ್ದಾರಿ ಸ್ಥಿತಿ ಬದಲಾದರೆ ಮಾತ್ರ ಅವರಿಗೆ ಶುಭಾಶಯ ಹೇಳಬಹುದು ಎಂಬುದಾಗಿ " ಈ ಮಾತನ್ನು ಖುದ್ದಾಗಿ ಬಿಜೆಪಿ ನಾಯಕರೇ ದಾಯ್ಜಿವರ್ಲ್ಡ್ ಗೆ ಸಾಂದರ್ಭಿಕವಾಗಿ ಹೇಳಿಕೊಂಡಿದ್ದಾರೆ. ಇನ್ನು ಕ್ಷೇತ್ರದ ಜನತೆಯ ಜೊತೆಗೆ ಸಮಾಲೋಚನೆ, ಮಾತುಕತೆ ಒಲವು ಇರುವುದು ಅಷ್ಟಕಷ್ಟೆ. ಇನ್ನು ಪಕ್ಷದೊಳಗೆ ಆಕೆ ಸಂಸದೆಯಾಗಿ ಆಯ್ಕೆ ಮಾಡಿದ್ದಕ್ಕೆ ಒಳಗಿಂದೊಳಗೆ ಕತ್ತಿ ಮಸಿಯುತ್ತಿದ್ದಾರೆ. ಈಗ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವರಾಗಿ ಸ್ಥಾನ ಪಡೆದುಕೊಂಡಿದ್ದಾರೆ. ಸದ್ಯದ ಮಟ್ಟಿಗೆ ತಮ್ಮ ತವರು ಕ್ಷೇತ್ರಕ್ಕೆ ಬರುವ ವಿಚಾರವಿಲ್ಲ ಎಂಬ ಮಾತು ಅವರ ಆಪ್ತ ಮೂಲಗಳು ತಿಳಿಸಿವೆ. ಹಳ್ಳಿಯ ಹಕ್ಕಿ ದಿಲ್ಲಿಗೆಯವರೆಗೆ ಸಾಗಿ ಸಚಿವರಾಗಿರೋದೇ ದೊಡ್ಡ ವಿಚಾರ.
ಮೊದಲಿನಿಂದಲೂ ಪಕ್ಷದ ಕಾರ್ಯಕರ್ತರೊಂದಿಗೆ ಅಂತರ ಕಾಯ್ದುಕೊಂಡೇ ಬಂದಿರುವ ಶೋಭಾ ಸಚಿವೆ ಆದ ನಂತರ ಉಡುಪಿಯ ಜನತೆಗೆ ಇವರು ವರವಾಗ್ತಾರಾ? ಅಥವಾ ದಿಲ್ಲಿಯಲ್ಲಿಯೇ ಉಳಿದು ಉಡುಪಿಗೆ ಬರುವ ಅತಿಥಿಯಾಗ್ತಾರಾ? ಉಡುಪಿ-ಚಿಕ್ಕಮಗಳೂರು ಮತದಾರರಿಗೆ ಕೃತಜ್ಞತೆ ಏನೋ ಸಲ್ಲಿಸಿದರು. ಮುಂದೆ ತಮ್ಮ ಪಕ್ಷದೊಳಗೆ ಕತ್ತಿ ಮಸಿಯುತ್ತಿರುವ ಕಾರ್ಯಕರ್ತರು ಇವರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದೇ ಕುತೂಹಲಕಾರಿ ಪ್ರಶ್ನೆ.. ಕಾದು ನೋಡಬೇಕು.