ಮಂಗಳೂರು: 95ರ ವಯಸ್ಸಿನಲ್ಲೂ ಫಲ್ಗುಣಿ ನದಿಯಲ್ಲಿ ದೋಣಿ ನಡೆಸಿ ದುಡಿಯುತ್ತಿದ್ದಾರೆ ಕರೀಂ ಅಜ್ಜ
Thu, Jul 08 2021 10:31:55 PM
ಮಂಗಳೂರು, ಜು. 08 (DaijiworldNews/SM): 95ರ ಇಳಿ ವಯಸ್ಸಾಗಿದ್ದರೂ ಒಂದಿಷ್ಟು ಹುಮ್ಮಸ್ಸು ಕುಗ್ಗದೆ, ಶಕ್ತಿ ಕಳೆದುಕೊಂಡ ದೇಹವಾದರೂ, ಹರೆಯದ ಯುವಕನಂತೆ ಮೈದುಂಬಿ ಹರಿಯುತ್ತಿರುವ ಫಲ್ಗುಣಿ ನದಿಯಲ್ಲಿ ತನ್ನ ಕಾಯಕವನ್ನು ಮುಂದುವರೆಸಿದ್ದಾರೆ. ಮಂಗಳೂರು ಹೊರ ವಲಯದ ಅಡ್ಡೂರಿನ ಮೊಯಿದ್ದೀನಾಕ ಅವರ ಎರಡನೇ ಪುತ್ರ ಅಬ್ದುಲ್ ಕರೀಂ ಅವರ ಸ್ಪೂರ್ತಿದಾಯಕ ಕಥೆ ಇದು.
ಹಿಂದಿನಿ ಕಾಲದಲ್ಲಿ ಒಂದು ಊರಿನಿಂದ ಮತ್ತೊಂದು ಊರಿಗೆ ಸಂಪರ್ಕದ ವೇಳೆ ಹೊಳೆ, ನದಿಗಳನ್ನು ದಾಟಲು ತೆಪ್ಪ, ದೋಣಿಗಳನ್ನು ಬಳಸುತ್ತಿದ್ದರು. ಕ್ರಮೇಣ ತಂತ್ರಜ್ಞಾನದ ಬಳಕೆಯಿಂದ ಹಳೆ ಪದ್ಧತಿಗಳು ತೆರೆಗೆ ಸರಿದಿವೆ. ತೆಪ್ಪ, ದೋಣಿಗಳನ್ನು ನಡೆಸುವುದು ಅಪರೂಪವಾಗಿ ಬಿಟ್ಟಿದೆ. ಆದರೆ, ಅಡ್ಡೂರಿನ ಮೊಯಿದ್ದೀನಾಕ ಅವರ ಎರಡನೇ ಪುತ್ರ ಅಬ್ದುಲ್ ಕರೀಂ ಅವರು ತಮ್ಮ 95ನೇ ಇಳಿ ವಯಸ್ಸಿನಲ್ಲೂ ಹುಮ್ಮಸ್ಸಿನಿಂದಲೇ ದೋಣಿ ನಡೆಸುವ ಮೂಲಕ ಸ್ಪೂರ್ತಿದಾಯಕರಾಗಿದ್ದಾರೆ.
ಹೊಟ್ಟೆ ಪಾಡಿಗಾಗಿ 7 ವರ್ಷದವರಿದ್ದಾಗಲೇ ನಾವಿಕ ವೃತ್ತಿ ಆರಂಭಿಸಿದ್ದರು. ಕಳೆದ ಸುಮಾರು 88 ವರ್ಷಗಳಿಂದ ದೋಣಿ ನಿರಂತರವಾಗಿ ನಡೆಸುತ್ತಿದ್ದಾರೆ. ಇವರು ಹಿಂದೆ ಅಡ್ಡೂರಿನಿಂದ ಮಂಗಳೂರು ಬಂದರ್ ಪ್ರದೇಶಕ್ಕೆ ದೋಣಿಗಳ ಮೂಲಕ ಸರಕು ಸಾಗಟ ಮಾಡುತ್ತಿದ್ದರು. 6 ಆಣೆ ಗೆ ನಿತ್ಯ ದುಡಿದು ಜೀವನ ನಡೆಸುತ್ತಾ ಬಂದಿದ್ದರು. ಎಳೆ ವಯಸ್ಸಿನಲ್ಲಿ ಕೈ ಹಿಡಿದ ಕಾಯಕ ಇಳಿ ವಯಸ್ಸಿನಲ್ಲೂ ಮುಂದುವರೆಸಿದ್ದಾರೆ. ಹಲವು ದಶಕಗಳ ಕಾಲ ಕುಟುಂಬಕ್ಕೆ ಆಧಾರವಾಗಿದ್ದ ದುಡಿಮೆಯನ್ನು ಮರೆಯಲು ಅಸಾಧ್ಯವೆನ್ನುವ ಕರೀಂ ಅಜ್ಜಗೆ ನಿತ್ಯ ದೋಣಿ ವಿಹಾರ ನಡೆಸದಿದ್ದರೆ ನಿದ್ದೆ ಬರೋದಿಲ್ಲ ಎನ್ನುತ್ತಾರೆ.
ದೈಜಿವರ್ಲ್ಡ್ ಜೊತೆ ಮಾತನಾಡಿರುವ ಕರೀಂ ಅಜ್ಜ, "ಹಿಂದೆ ವೃತ್ತಿಗಾಗಿ ದೋಣಿ ಮೂಲಕ ತಮ್ಮ ಕಿರಿಯ ವಯಸ್ಸಿನಲ್ಲಿ ಸರಕು ಸಾಗಟ ಮಾಡುತ್ತಿದೆ. ಮುಂದೆ ತಮ್ಮ ಊರು ಅಡ್ಡೂರು ಹೊಳೆ ಬದಿಯಿಂದ ಫಲ್ಗುಣಿ ನದಿ ಮೂಲಕ ಪಕ್ಕದ ಊರದ ಉದ್ದಬೆಟ್ಟಿಗೆ ಜನರ ಪ್ರಯಾಣಕ್ಕೆ ದೋಣಿ ಚಲಾವಣೆ ಮಾಡುತ್ತಿದ್ದೆ. ಈ ಸಮಯದಲ್ಲಿ ಯಾರಾದರೂ ಹಣ ಇಲ್ಲದೆ ಬಂದಲ್ಲಿ ಅವರನ್ನು ಸುರಕ್ಷಿತವಾಗಿ ಮತ್ತು ಉಚಿತವಾಗಿ ದಡ ಸೇರಿಸುವ ಕಾರ್ಯ ಮಾಡುತ್ತಿದ್ದೆ. ಇಂತಹ ಸಹಾಯ ಪಡೆದ ಅನೇಕ ಮಂದಿ ದೂರದ ಊರುಗಳಲ್ಲಿ ವೃತ್ತಿಯಲ್ಲಿದ್ದಾರೆ. ಆದರೆ, ಇಂದಿಗೂನನ್ನನ್ನು ಭೇಟಿ ಮಾಡಿ ಮಾತಕತೆ ನಡೆಸಿ ಹೋಗ್ತಾರೆ" ಎಂದು ನೆನಪಿಸಿಕೊಳ್ಳುತ್ತಾರೆ.
ಪ್ರಸ್ತುತ ನಿತ್ಯ ಮುಂಜಾನೆ 7 ಗಂಟೆಗೆ ಕರೀಂ ಅವರು ನದಿ ತಟಕ್ಕೆ ಬಂದು ದೋಣಿಯನ್ನು ಸ್ವಚ್ಚಗೊಳಿಸಿ ಸಂಜೆವರೆಗೂ ಜನರು ಬಂದಲ್ಲಿ ದೋಣಿ ಸೇವೆ ಕೊಡುತ್ತಿದ್ದು, ಹಿರಿ ಜೀವ ಉತ್ಸಾಹದಿಂದ ಮಾಡುವ ಕಾರ್ಯ ನವ ಸಮಾಜಕ್ಕೆ ಸ್ಪೂರ್ತಿಯ ಸೆಳೇಯಾಗಿದೆ.