ಉಡುಪಿ ಜು 08 (DaijiworldNews/MS): ದನ ಅಕ್ರಮ ಸಾಗಾಟ ಆರೋಪದಲ್ಲಿ ವ್ಯಕ್ತಿಯೊಬ್ಬರ ಮೇಲೆ ಮೂವರ ತಂಡವೊಂದು ಹಲ್ಲೆ ನಡೆಸಿ ವಾಹನ ಹಾನಿ ಮಾಡಿದ ಘಟನೆ ಜುಲೈ 6ರಂದು ಅಲೆವೂರು ರಾಂಪುರ ಜಂಕ್ಷನ್ ಸಮೀಪ ಸಂಭವಿಸಿದೆ. ಅಕ್ರಮ ಸಾಗಾಟ ಮಾಡಿದವರು ಹಾಗೂ ಹಲ್ಲೆ ನಡೆಸಿದ ಇಬ್ಬರು ಆರೋಪಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಹಲ್ಲೆ ನಡೆಸಿದ ಆರೋಪಿ ಕಿರಿಯೂರಿನ ಗಿರಿರಾಜ್ (28)ನನ್ನು ಪೊಲೀಸರು ಬಂಧಿಸಿದ್ದು ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ದನ ಅಕ್ರಮ ಸಾಗಾಟ ಮಾಡಿರುವ ಆರೋಪಿ ಶೇಕ್ ಅಬ್ದುಲ್ಲ ನನ್ನು ಬುಧವಾರ ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗಳಾದ ಹಲ್ಲೆ ಆರೋಪಿಗಳಾದ ಕೆಮ್ಮಣ್ಣಿನ ರೋಮಿಯೋ ಮತ್ತು ಹರಿ ತಲೆಮರೆಸಿಕೊಂಡಿದ್ದಾರೆ.
ಹಲ್ಲೆಗೊಳಗಾದ ಶೇಕ್ ಅಬ್ದುಲ್ಲಾ ಗುಣಕರ ಅವರಿಂದ ಪಡೆದ ಹಸುವನ್ನು ಪಿಕಪ್ ವಾಹನದಲ್ಲಿ ಹಿರಿಯರಿಂದ ಮಣಿಪುರ ರಸ್ತೆಯ ಮೂಲಕ ಕಟಪಾಡಿ ಕಡೆಗೆ ಸಾಗಿಸುತ್ತಿದ್ದರು ಈ ವೇಳೆ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ಆರೋಪಿಗಳು ವಾಹನ ಅಡ್ಡಗಟ್ಟಿ ಹಸುವನ್ನು ಕಳ್ಳತನ ಮಾಡಿ ಸಾಗಾಟ ಮಾಡುತ್ತಿದ್ದಿರಾ ಎಂದು ಹೇಳಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ ವಾಹನ ಮುಂಬಾಗದ ಗಾಜು ಹೆಡ್ ಲೈಟ್ ಒಡೆದು ಹಾಕಿದ್ದರೆ. ಮಾತ್ರವಲ್ಲದೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಶೇಕ್ ಅಬ್ದುಲ್ಲಾ ನೀಡಿದ ದೂರಿನಲ್ಲಿ ದೂರಲಾಗಿದೆ.
ಇನ್ನು ಹಲ್ಲೆ ನಡೆಯುತ್ತಿದ್ದಂತೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಣಿಪಾಲ ಪೊಲೀಸರು ಪಿಕಪ್ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಅಬ್ದುಲ್ಲಾ ವಿರುದ್ಧ ಪ್ರಕರಣ ದಾಖಲಿಸಿ ವಾಹನವನ್ನು ವಶಪಡಿಸಿಕೊಂಡಿದ್ದಾರೆ.