ಬ್ರಹ್ಮಾವರ, ಜು 08 (DaijiworldNews/MS): ಬ್ರಹ್ಮಾವರ ತಾಲೂಕು ವ್ಯಾಪ್ತಿಯಲ್ಲಿ ಬರುವ ಕೋಡಿ ಗ್ರಾಮ ಪಂಚಾಯತ್ ಗೆ ಸರಕಾರದಿಂದ ದೊರೆತ ಅನುದಾನದಲ್ಲಿ ಭ್ರಷ್ಟಾಚಾರ ನಡೆದಿದ್ದು, ಕಳೆದ ಕೆಲವು ವರ್ಷಗಳಲ್ಲಿ ಲಕ್ಷಾಂತರ ರೂಪಾಯಿ ತೆರಿಗೆ ಹಣವನ್ನು ದುರುಪಯೋಗ ಪಡಿಸಿ ಅವ್ಯವಹಾರ ಮಾಡಲಾಗಿದೆ. ಇದರ ಬಗ್ಗೆ ಸಂಬಂಧ ಪಟ್ಟ ಇಲಾಖೆ ಸಮಗ್ರವಾದ ತನಿಖೆ ನಡೆಸಬೇಕು ಎಂದು ಕೋಡಿ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಉದಯ್ ಕುಂದರ್ ಆಗ್ರಹಿಸಿದ್ದಾರೆ.
ಅವರು ಜು.7 ರ ಬುಧವಾರ ಪ್ರಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 'ಸುಮಾರು 25 ಲಕ್ಷ ರೂಪಾಯಿಯಷ್ಟು ಹಣ ಬೇರೆ ಬೇರೆ ಕಾಮಗಾರಿಗಳ ಹೆಸರಲ್ಲಿ ಅವ್ಯವಹಾರ ನಡೆದಿದೆ ಎಂದು ನೇರವಾಗಿ ಆರೋಪಿಸಿದರು.
ಕೋಡಿ ಗ್ರಾಮ ಪಂ ವ್ಯಾಪ್ತಿಯ ಜೋಡಿತಲೆ ಪ್ರದೇಶದಲ್ಲಿ ಸ್ಮಶಾನ ನಿರ್ಮಾಣಕ್ಕೆ ಮಂಜೂರಾದ ಅನುದಾನದಲ್ಲಿ 3,17,000 ರೂಪಾಯಿ ವೆಚ್ಚ ತೋರಿಸಿ ಬಿಲ್ ಮಾಡಿಕೊಳ್ಳಲಾಗಿದ್ದು ಇದುವರೆಗೆ ಅಲ್ಲಿ ಸ್ಮಶಾನ ಕಾಮಗಾರಿಯೇ ನಡೆದಿಲ್ಲ. ಕೋಡಿ ಗ್ರಾಮದ ಎಸ್ಎಲ್ಆರ್ ಎಂ ಘಟಕಕ್ಕಾಗಿ ಕೋಡಿತಲೆಯಲ್ಲಿ ರೂ 6,07,316 ಹಾಗೂ ಎಮ್ ಎಲ್ಸಿ ಅನುದಾನದ 10 ಲಕ್ಷ ರೂಪಾಯಿಯಲ್ಲಿ ಕಾಮಗಾರಿ ನಡೆದಿದೆ ಎಂದು ಬಿಲ್ ಮಾಡಿ ಹಣ ಪಡೆಯಲಾಗಿದೆ. ಆದರೆ ವಿಪರ್ಯಾಸ ಏನಂದರೆ ಕೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇದುವರೆಗೆ ಎಸ್ಎಲ್ಆರ್ ಎಂ ಘಟಕದ ಕಟ್ಟಡವೇ ನಿರ್ಮಾಣ ಆಗಿಲ್ಲ ಎಂದು ಕುಂದರ್ ದೂರಿದ್ದಾರೆ.
ಕೋಡಿ ಕನ್ಯಾಣದಲ್ಲಿ ಸೋಲಾರ್ ಖರೀದಿ ಮತ್ತು ಅಳವಡಿಕೆ ಹಾಗೆ ದಾರಿದೀಪದ ಅಳವಡಿಕೆಗಾಗಿ ಕೇವಲ ಕಳೆದ ಒಂದು ವರ್ಷದಲ್ಲಿ ಸು. 7ಲಕ್ಷಕ್ಕೂ ಮೀರಿ ಹಣ ವ್ಯಯಿಸಲಾಗಿದೆ. ಆದರೆ ಕೇವಲ ಬೆರಳಿಕೆಯಷ್ಟು ಮಾತ್ರ ದೀಪಗಳು ಉರಿಯುತ್ತಿವೆ. ಗ್ರಾಮ ಪಂಚಾಯಿತಿಯ ಒಂದು ಕಾಮಗಾರಿಗೆ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಅಥವಾ ಎಂಎಲ್ಸಿ ಅನುದಾನದಲ್ಲಿ ಎರಡು ಎರಡು ಬಾರಿ ಬಿಲ್ ಪಾಸ್ ಮಾಡಿಕೊಳ್ಳುವುದು, ಕೆಲವೊಂದು ಪ್ರಕರಣದಲ್ಲಿ ಗ್ರಾಮಪಂಚಾಯಿತಿಯ ಒಂದು ಕಾಮಗಾರಿಗೆ ಎರಡೆರಡು ಬಾರಿ ಬಿಲ್ ಪಾಸ್ ಮಾಡಿಕೊಂಡಿರುತ್ತಾರೆ. ಕೋಡಿ ಗ್ರಾಮದಲ್ಲಿ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯವರಿಗೆ ಮೀಸಲಿಟ್ಟ 1,28,000 ಮೊತ್ತದ ಅಂಗಡಿ ಕೋಣೆ ನಿರ್ಮಾಣದ ಬಿಲ್ ಮಂಜುರಾತಿ ಆಗಿದೆ ಆದರೆ ಇದುವರೆಗೆ ಅಂಗಡಿ ಕೋಣೆಯೇ ನಿರ್ಮಾಣವೇ ಅಗಿಲ್ಲ. ಇವೆಲ್ಲ ಮಾಹಿತಿಯನ್ನು ಕಳೆದ ಮೂರು ವರ್ಷದ ಮಾಹಿತಿ ಹಕ್ಕಿನಡಿಯಲ್ಲಿ ಪಡೆಯಲಾಗಿದೆ ಎಂದು ವಿವರಿಸಿದ್ದಾರೆ.
ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಇರುವ ಕಾನೂನೂಗಳನ್ನು ಗಾಳಿಗೆ ತೂರಿ 14 ಮತ್ತು 15 ನೇ ಹಣಕಾಸು ಯೋಜನೆ ಅಡಿಯಲ್ಲಿ ಕೋಡಿ ಗ್ರಾಮದ ಪಿಡಿಓ ಮತ್ತು ಪಂಚಾಯತ್ ಅಧ್ಯಕ್ಷ ಪ್ರಭಾಕರ್ ಮೆಂಡನ್ ಅವಧಿಯಲ್ಲಿ ಹಣ ದುರುಪಯೋಗವಾಗಿದ್ದರೂ ಯಾರೂ ಇದರ ಬಗ್ಗೆ ದನಿ ಎತ್ತುತ್ತಿಲ್ಲ. ಇದರ ವಿರುದ್ಧ ದನಿ ಎತ್ತಿದವರ ಮೇಲೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದು ಇಲ್ಲಸಲ್ಲದ ಅಪವಾದಗಳನ್ನು ಹೊರಿಸಿದ್ದಾರೆ, ಎಂದು ವೇದಿಕೆಯ ಅಧ್ಯಕ್ಷರು ದೂರಿದ್ದಾರೆ.
ಕೋಡಿ ಗ್ರಾಮ ಪಂಚಾಯತ್ ನ ಅಧ್ಯಕ್ಷರು ತಕ್ಷಣ ರಾಜಿನಾಮೆ ನೀಡಬೇಕು ಹಾಗೂ ಅವರ ಸಮಗ್ರ ಭ್ರಷ್ಟಾಚಾರದ ಮೇಲೆ ತನಿಖೆ ನಡೆಸಬೇಕು. ಹಾಗೂ ಇದಕ್ಕೆಲ್ಲಾ ನೆರವು ನೀಡುತ್ತಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯನ್ನು ಕೂಡಲೇ ಅಮಾನತು ಮಾಡಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ. ಕೋಡಿ ಹಿತರಕ್ಷಣಾ ವೇದಿಕೆಯ ಕಾರ್ಯದರ್ಶಿ ಚೇತನ್ ಪುತ್ರನ್, ಪ್ರದಾನ ಕಾರ್ಯದರ್ಶಿ ಮಣಿಕಂಠ ಉಪಸ್ಥಿತರಿದ್ದರು.