ಬಂಟ್ವಾಳ, ಜು. 07 (DaijiworldNews/SM): ಸಿಡಿಲು ಬಡಿದು ಆನ್ಲೈನ್ ಕ್ಲಾಸ್ ನಲ್ಲಿ ನಿರತಳಾಗಿದ್ದ ವಿದ್ಯಾರ್ಥಿನಿಯೊರ್ವಳು ಆಘಾತಕ್ಕೆ ಒಳಗಾಗಿ, ಮನೆಗೆ ಹಾನಿಯಾದ ಘಟನೆ ಬಂಟ್ವಾಳ ತಾಲೂಕಿನ ವೀರಕಂಬ ಗ್ರಾಮದ ಕಲ್ಮಲೆ ಎಂಬಲ್ಲಿ ಬುಧವಾರ ಸಂಜೆ ನಡೆದಿದೆ.
ಘಟನೆಯಿಂದ ಸುಮಾರು 1 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ. ಕಲ್ಮಲೆ ನಿವಾಸಿ ರಘರಾಮ ಶೆಟ್ಟಿ ಅವರ ಮನೆಗೆ ಸಂಜೆ ವೇಳೆ ಸಿಡಿಲು ಬಡಿದ ಘಟನೆಯಲ್ಲಿ ಮನೆಯ ಸಂಪೂರ್ಣ ಬಿರುಕುಬಿಟ್ಟಿದ್ದು, ವಿದ್ಯುತ್ ಮೀಟರ್ ಹಾಗೂ ವಯರ್ ಗಳು ಸಂಪೂರ್ಣ ಕೆಟ್ಟುಹೋಗಿದೆ.
ಸಿಡಿಲು ಬಡಿಯುವ ವೇಳೆ ಕಾಲೇಜು ವಿದ್ಯಾರ್ಥಿನಿ ರಘುರಾಮ ಅವರ ಮಗಳು ಪ್ರಜಿತ ಅವರಿಗೆ ಆನ್ ಲೈನ್ ಕ್ಲಾಸ್ ನಡೆಯುತ್ತಿದ್ದು ಅವರು ಮೊಬೈಲ್ ಇಯರ್ ಫೋನ್ ಬಳಸಿ ಮನೆಯ ಕೋಣೆಯಲ್ಲಿ ಕ್ಲಾಸ್ ನ ಪಾಠ ಕೇಳುತ್ತಿದ್ದರು, ಸಂಜೆ ವೇಳೆ ಅಚಾನಕ್ ಆಗಿ ಸಿಡಿಲು ಬಡಿದ ಪರಿಣಾಮ ಆನ್ ಲೈನ್ ಕ್ಲಾಸ್ ನಲ್ಲಿದ್ದ ಪ್ರಜಿತ ಅವರ ಕಿವಿಗೆ ಸಿಡಿಲಿನ ಅಘಾತವಾಗಿದೆ ಎಂದು ಮನೆಯವರು ತಿಳಿಸಿದ್ದಾರೆ.
ಇನ್ನೋರ್ವ ಮಗಳು ರಕ್ಷಿತಾ ಅವರು ಬಚ್ಚಲು ಕೋಣೆಯಲ್ಲಿದ್ದು ಅವರು ಕುಸಿದು ಬಿದ್ದಿದ್ದು ಯಾವುದೇ ಪ್ರಾಣಾಪಾಯವಾಗಿಲ್ಲ. ಇವರ ಜೊತೆಗೆ ಪತ್ನಿ ಮತ್ತು ಅಳಿಯ ಮನೆಯಲ್ಲಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.