ಕಾರ್ಕಳ, ಜು 07 (DaijiworldNews/MS): ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ದೈವಗಳ ಕಡ್ಸಲೆಯನ್ನು ಉಡುಗೊರೆಯಾಗಿ ಕೊತ್ಟ ಉಡುಪಿ ಜಿಲ್ಲಾ ಕಾಂಗ್ರೆಸ್ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. ತುಳುನಾಡಿನ ದೈವಾರಾಧನೆಯಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿರುವ "ಕಡ್ಸಲೆ " ದೈವಪಾತ್ರಿಗಳ ಹೊರತು ಯಾರು ಹಿಡಿಯುವಂತಿಲ್ಲ ಎಂಬ ನಂಬಿಕೆ ಇದೆ.
ಆದರೆ ಡಿಕೆಶಿ ಉಡುಪಿ ಭೇಟಿ ವೇಳೆ , ತಮ್ಮ ಮುಖಂಡನನ್ನು ಖುಷಿ ಪಡಿಸಲು ಹೋಗಿ ಉಡುಪಿ ಕಾಂಗ್ರೆಸ್ ನಾಯಕರು ಎಡವಟ್ಟು ಮಾಡಿಕೊಡಿದ್ದಾರೆ. ಈ ವಿಚಾರವಾಗಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಪರ -ವಿರೋಧ ಚರ್ಚೆಗಳು ಆರಂಭವಾಗಿದೆ.
ಇನ್ನು ಇದೇ ವಿಚಾರವಾಗಿ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಪ್ರತಿಕ್ರಿಯಿಸಿ, " ತುಳುನಾಡಿನ ದೈವಾರಾಧನೆಯು ಬಹು ಹಿಂದಿನ ಕಾಲದಿಂದಲೂ ಕಟ್ಟು ಕಟ್ಟಲೆಗಳನ್ನೊಳಗೊಂಡು ನಡೆದು ಬರುತ್ತಿರುವ ಧಾರ್ಮಿಕ ಆಚರಣೆ. ಇದರಲ್ಲಿ ದೈವಗಳು ನುಡಿ ಕೊಡುವ ಖಡ್ಸಲೆ (ದೈವದ ಖಡ್ಗ) ಇದಕ್ಕೆ ಅದರದೇ ಆದ ವಿಶಿಷ್ಟ ಪ್ರಾದಾನ್ಯತೆ ಇದೆ. ದೈವಾರಾಧನೆಗೆ ಒಂದು ಶಕ್ತಿ ಇದೆ. ಆ ಖಡ್ಸಲೆಯಲ್ಲಿ ಕೊಡುವ ನುಡಿಯನ್ನು ಇಡೀ ತುಳುನಾಡು ಪಾಲನೆ ಮಾಡಿಕೊಂಡು ಬರುತ್ತಿದೆ".
"ಇಂತಹ ಪ್ರಾಮುಖ್ಯತೆ ಹೊಂದಿರುವ ಖಡ್ಸಲೆಯನ್ನು ಒಂದು ರಾಜಕೀಯ ವೇದಿಕೆಯಲ್ಲಿ ರಾಜಕೀಯ ಮುಖಂಡರಿಗೆ ಸ್ಮರಣಿಕೆಯಾಗಿ ಕೊಟ್ಟಿರುವುದು ಕಾಂಗ್ರೆಸ್ ಪಕ್ಷದ ದಿವಾಳಿತನ, ಕಾಂಗ್ರೆಸ್ ಪಕ್ಷ ಇಡೀ ತುಳುನಾಡಿಗೆ ಅಪಮಾನ ಮಾಡಿದೆ. ಸ್ಮರಣಿಕೆ ನೀಡಲು ಬೇಕಾದಷ್ಟು ಬೇರೆ ಬೇರೆ ಅವಕಾಶ ಇದ್ದರೂ ಸಹ ಕಾಂಗ್ರೆಸ್ ಮುಖಂಡರು ದೈವಾರಾಧನೆಯ ಖಡ್ಸಲೆ ನೀಡಿರುವುದು ಖಂಡನೀಯ. ಈ ಕ್ಷಣವೇ ಇಡೀ ತುಳುನಾಡಿಗೆ ಕ್ಷಮೆ ಯಾಚಿಸಬೇಕು".
"ಕಾಂಗ್ರೆಸ್ ಈ ತರಹ ತುಳುನಾಡಿಗೆ ಅವಮಾನ ಮಾಡುತ್ತಿರುವುದು ಹೊಸತೇನಲ್ಲ. ಇಂತಹ ಅನೇಕ ನಡವಳಿಕೆಯಲ್ಲಿ ಬೇರೆ ಬೇರೆ ಸಮಯಗಳಲ್ಲಿ ಅವಮಾನ ಮಾಡುತ್ತಾ ಬಂದಿದೆ. ಇನ್ನಾದರೂ ಕಾಂಗ್ರೆಸ್ ಇಂತಹ ಬುದ್ದಿಯನ್ನು ಬಿಡಬೇಕು ಎಂದು ಹೇಳಿದ್ದಾರೆ.
ಇದಲ್ಲದೆ , ಸಾಮಾಜಿಕ ಜಾಲತಾಣದಲ್ಲಿಯೂ ಧಾರ್ಮಿಕವಾಗಿ ಬಹಳ ಪವಿತ್ರವಾಗಿರುವ ಕಡ್ಸಲೆಯನ್ನು ಉಡುಗೊರೆಯಾಗಿ ನೀಡಿದ್ದು ಸರಿಯಲ್ಲ ಎಂದು ದೈವಾರಾಧಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.