ಕುಂದಾಪುರ, ಜು 07 (DaijiworldNews/PY): "ಉದ್ಯೋಗಗಳನ್ನು ಸೃಷ್ಟಿ ಮಾಡುವ ಉದ್ಯಮಿಗಳಿಗೆ ಸರ್ಕಾರಗಳು ಸಹಾಯ ಹಸ್ತ ನೀಡುವುದರಿಂದ ಉದ್ಯಮ ಹಾಗೂ ಅದನ್ನು ಅವಲಂಬಿತರಾಗಿರುವ ಕೆಲಸಗಾರರು ತೃಪ್ತಿಯಿಂದ ಇರಲು ಸಾಧ್ಯ" ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಇಲ್ಲಿಗೆ ಸಮೀಪದ ಮಂಗಳೂರಿನ ಸಹನಾ ಕನ್ವೇಷನ್ ಹಾಲ್ನಲ್ಲಿ ನಡೆದ ಉದ್ದಿಮೆದಾರರ ಸಭೆಯಲ್ಲಿ ಅವರು ಮಾತನಾಡಿದರು.
"ಕೊರೊನಾದಿಂದಾಗಿ ಇಡೀ ಜಗತ್ತೆ ಸಂಕಷ್ಟಕ್ಕೆ ಒಳಗಾಗಿದೆ. ಕೇಂದ್ರ ಸರ್ಕಾರದ ವಿತ್ತ ಸಚಿವೆ ಘೋಷಣೆ ಮಾಡಿರುವ ಪ್ಯಾಕೇಜ್ಗಳು ಹಾಗೂ ಆರ್ಥಿಕ ಸಹಾಯಗಳು ತಲುಪಬೇಕಾದವರಿಗೆ ಇನ್ನೂ ತಲುಪಿಲ್ಲ. ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಆರ್ಥಿಕ ರಿಯಾಯಿತಿಗಳನ್ನು ನೀಡಲು ಬ್ಯಾಂಕ್ಗಳು ಹಿಂದೇಟು ಹಾಕುತ್ತಿದೆ. ಕೆಲಸವಿಲ್ಲದೆ, ವ್ಯವಹಾರವಿಲ್ಲದೆ ತಿಂಗಳುಗಳ ಕಾಲ ಮುಚ್ಚಿರುವ ಕೈಗಾರಿಕೆ ಹಾಗೂ ಉದ್ದಿಮೆಗಳ ಕಟ್ಟಡ ತೆರಿಗೆಯಲ್ಲಿಯೂ ರಿಯಾಯಿತಿ ನೀಡಿಲ್ಲ. ದೊಡ್ಡ ದೊಡ್ಡ ಉದ್ದಿಮೆದಾರರು ಹೇಗಾದರೂ ಈ ಹೊರೆಯನ್ನು ತಾಳಿಕೊಳ್ಳುತ್ತಾರೆ. ಆದರೆ ಸಣ್ಣ ಉದ್ದಿಮೆದಾರರ ಕಷ್ಟ ಹೇಳಿಕೊಳ್ಳಲು ಆಗುತ್ತಿಲ್ಲ" ಎಂದರು.
"ದಿನದಿಂದ ದಿನಕ್ಕೆ ಏರುತ್ತಿರುವ ತೈಲೋತ್ಪನ್ನಗಳ ಬೆಲೆಯಿಂದಾಗಿ ಪರೋಕ್ಷವಾಗಿ ಎಲ್ಲ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೆ ಏರುತ್ತಿದೆ. ನಮ್ಮಲ್ಲಿ ಅದಿರು ಗಣಿಗಾರಿಕೆಗೆ ನಿರ್ಬಂಧ ಇರೋದರಿಂದ, ವಿದೇಶದ ಕಬ್ಬಿಣಗಳನ್ನು ಅವಲಂಭಿಸಬೇಕಾಗಿದೆ. ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಕಬ್ಬಿಣದ ಬೆಲೆ ಏರಿಕೆಯಾಗುತ್ತಿರುವುದರಿಂದ ನಿರ್ಮಾಣ ಕ್ಷೇತ್ರ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ನೋಟು ಅಮಾನ್ಯಕರಣದಿಂದಾಗಿ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದೆ. ದೇಶದ ಉದ್ದಿಮೆದಾರರನ್ನು ಸಾಲದ ಕೂಪಕ್ಕೆ ತಳ್ಳಿ, ವಿದೇಶಿ ಉದ್ದಿಮೆದಾರರನ್ನುರತ್ನಕಂಬಳಿ ಹಾಕಿ ಸ್ವಾಗತಿಸಲಾಗುತ್ತಿದೆ" ಎಂದು ತಿಳಿಸಿದರು.
"ಯುಪಿಎ ಸರ್ಕಾರದ ಅವಧಿಯಲ್ಲಿ ಬೆಲೆ ಏರಿಕೆಯ ನಿಯಂತ್ರಣಕ್ಕಾಗಿ ಸೋನಿಯಾ ಗಾಂಧಿ ಅವರ ಮಾರ್ಗದರ್ಶನದಲ್ಲಿ ಅಂದಿನ ಪ್ರಧಾನಿ ಮನ್ಮೋಹನ್ ಸಿಂಗ್ ಸ್ವಷ್ಟವಾದ ಆರ್ಥಿಕ ನೀತಿಯನ್ನು ಜಾರಿಗೆ ತಂದಿದ್ದರು. ಇದೀಗ ಆ ವಿಷಯವನ್ನು ಪ್ರಾಸ್ತಾಪಿಸಿದರೇ, ಅದು ರಾಜಕೀಯವಾಗುತ್ತದೆ. ಆದರೆ ದಾಖಲೆ ಹಾಗೂ ಚರಿತ್ರೆಯನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ದೇಶದ ಸಣ್ಣ ಸಣ್ಣ ಉದ್ದಿಮೆದಾರರಿಗೆ ಎದುರುರಾಗಿರುವ ಸಂಕಷ್ಟ ಹಾಗೂ ಸಮಸ್ಯೆಯ ಪರಿಹಾರಕ್ಕೆ ಸರ್ಕಾರ ಆದ್ಯತೆ ನೀಡಬೇಕು. ಕೇಂದ್ರ ಹಾಗೂ ರಾಜ್ಯದಲ್ಲಿ ಮುಂದೆ ಕಾಂಗ್ರೆಸ್ ಪಕ್ಷದ ಅಧಿಕಾರ ಬಂದಾಗ ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಲಾಗುವುದು" ಎಂದು ಅವರು ಹೇಳಿದರು.
"ಸಭೆಯಲ್ಲಿ ಅಭಿಪ್ರಾಯ ಹಂಚಿಕೊಂಡ ಉದ್ಯಮಿ ಕೌಶಿಕ್ ಶೆಟ್ಟಿ ಅವರು ದೇಶದಲ್ಲಿ ಹೆಚ್ಚುತ್ತಿರುವ ಕಬ್ಬಿಣದ ಬೆಲೆ ಏರಿಕೆಗೆ ವಿದೇಶದ ಕಡೆ ಬೊಟ್ಟು ಮಾಡುತ್ತಾರೆ. ಡಿಸೇಲ್ ಹಾಗೂ ಪೆಟ್ರೋಲ್ ಏರಿಕೆಯಿಂದಾಗಿ ಸರಕು ಸಾಗಾಟದ ಬೆಲೆಯೂ ಹೆಚ್ಚಳವಾಗಿದೆ. ಗ್ರಾಮೀಣ ಭಾಗದಲ್ಲಿ ಉದ್ದಿಮೆ ಹೊಂದಿದವರು ಹಾಗೂ ನಗರ ಪ್ರದೇಶದ ಮಾರುಕಟ್ಟೆ ಅವಲಂಭಿತರಾಗಿರುವವರಿಗೆ ಇದರಿಂದಾಗಿ ದೊಡ್ಡ ಹೊಡೆತ ಬಿದ್ದಿದೆ" ಎಂದರು.
ಮಾಜಿ ಸಚಿವ ವಿನಯಕುಮಾರ ಸೊರಕೆ, ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿ, ಜೆ.ಡಿ.ನಾಯ್ಕ್ ಭಟ್ಕಳ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕಕುಮಾರ ಕೊಡವೂರು, ಕೆಪಿಸಿಸಿ ಪದಾಧಿಕಾರಿ ರಘುನಂದನ್, ಯುವ ಕಾಂಗ್ರೆಸ್ ಮುಖಂಡರಾದ ಮಿಥುನ್ ರೈ, ಮೊಹಮ್ಮದ್ ಹ್ಯಾರಿಸ್ ನಲಪಾಡ್, ಎಐಸಿಸಿ ಸದಸ್ಯ ಪಿ.ವಿ.ಮೋಹನ್ ಇದ್ದರು.
ಸಹನಾ ಗ್ರೂಪ್ಸ್ ಪ್ರವರ್ತಕ ಸುರೇಂದ್ರ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನು ಹೇಳಿದರು, ಸಾಹೀಲ್ ರೈ ಮಂಗಳೂರು ನಿರೂಪಿಸಿದರು.