ಉಳ್ಳಾಲ, ಜು 07 (DaijiworldNews/MS): ಎರಡು ಮನೆಗಳಿಗೆ ಬಾಗಿಲು ಮುರಿದು ನುಗ್ಗಿದ ಕಳ್ಳರ ತಂಡ, ಮನೆಯೊಳಗಿದ್ದ ಸೊತ್ತುಗಳನ್ನು ಹಾನಿಗೈದು ಒಂದು ಮನೆಯಿಂದ ವಾಚ್ ಕಳವುಗೈದು ಪರಾರಿಯಾಗಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೊಲ್ಯ ಮೂಕಾಂಬಿಕಾ ದೇವಸ್ಥಾನ ಬಳಿ ಜು.06ರ ಮಂಗಳವಾರ ರಾತ್ರಿ ನಡೆದಿದೆ.
ವಿದೇಶದಲ್ಲಿ ನೆಲೆಸಿರುವ ಸುರೇಶ್ ಎಂಬವರಿಗೆ ಸೇರಿದ ಮನೆಯ ಬಾಗಿಲು ಒಡೆದು ಒಳನುಗ್ಗಿರುವ ಕಳ್ಳರು ಕಪಾಟು ಪುಡಿಗೈದು, ಮನೆಯೊಳಗಿನ ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿಗೈದು ಹಣ ಹಾಗೂ ಒಡವೆಗಾಗಿ ಹುಡುಕಾಡಿ ಏನೂ ಸಿಗದೇ ವಾಪಸ್ಸಾಗಿದ್ದಾರೆ. ಇವರ ನೆರೆಮನೆಯ ರಾಜೇಶ್ ಎಂಬವರ ಮನೆಯೊಳಕ್ಕೆ ಬೀಗ ಒಡೆದು ಒಳನುಗ್ಗಿದ ಕಳ್ಳರು ಕಪಾಟನ್ನು ಜಾಲಾಡಿ ಮೂರು ವಾಚ್ ಗಳನ್ನು ಕಳವು ನಡೆಸಿದ್ದು, ಈ ವೇಳೆ ಕೋಣೆಯೊಳಗೆ ಮಲಗಿದ್ದ ರಾಜೇಶ್ ಅವರು ಎಚ್ಚೆತ್ತುಕೊಂಡು ಬೊಬ್ಬಿಡಲು ಆರಂಭಿಸಿದ್ದಾರೆ. ಬೊಬ್ಬೆ ಕೇಳಿ ಮೇಲಿನ ಬಾಡಿಗೆ ಮನೆಯಲ್ಲಿರುವ ಮಂದಿ ಕೆಳಗೆ ಓಡಿ ಬರುವಷ್ಟರಲ್ಲಿ ಕಳ್ಳರ ತಂಡ ಪರಾರಿಯಾಗಿದೆ.
ಆರು ವರ್ಷಗಳ ಹಿಂದೆ 45 ಪವನ್ ಚಿನ್ನಾಭರಣ ದೋಚಿದ್ದ ಮನೆಯಿಂದಲೇ ಕಳವಿಗೆ ಯತ್ನ!
2015 ರಲ್ಲಿ ರಾಜೇಶ್ ಅವರ ಮನೆಗೆ ನುಗ್ಗಿದ್ದ ಕಳ್ಳರು 45 ಪವನ್ ತೂಕದ ಚಿನ್ನಾಭರಣಗಳನ್ನು ದೋಚಿದ್ದರು. ಆ ವೇಳೆಯೂ ಮನೆಯಲ್ಲಿ ಯಾರೂ ಇರಲಿಲ್ಲ. ಆದರೆ ಈವರೆಗೂ ಕಳ್ಳರ ಸುಳಿವು ಲಭ್ಯವಾಗಿಲ್ಲ. ಇದೀಗ ಅದೇ ಮನೆಗೆ ಮತ್ತೆ ನುಗ್ಗಿದ ಕಳ್ಳರ ತಂಡ ಕಳವಿಗೆ ಯತ್ನಿಸಿದೆ. ರಾಜೇಶ್ ಅವರು ವಿದೇಶದಲ್ಲಿದ್ದು, ಅವರ ಕುಟುಂಬವೂ ಅಲ್ಲೇ ನೆಲೆಸಿದೆ. ಸಂಬಂಧಿಕರು ವಾರಕ್ಕೊಮ್ಮೆ ಬಂದು ಮನೆಯನ್ನು ನೋಡಿಕೊಳ್ಳುತ್ತಿದ್ದಾರೆ.