ಉಡುಪಿ, ಜು 07 (DaijiworldNews/PY): "ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಬಂದಲ್ಲಿ, ಡಿ.ಕೆ.ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗುತ್ತಾರೆ" ಎಂದು ಮಹಮ್ಮದ್ ನಲಪಾಡ್ ಹೇಳಿದ್ದಾರೆ.
ಉಡುಪಿಯಲ್ಲಿ ಮೀನುಗಾರರ ಮಹಿಳೆಯರ ಜೊತೆಗೆ ಮಾತನಾಡುತ್ತಾ ಸಿಎಂ ವಿಚಾರ ಪ್ರಸ್ತಾಪಿಸಿದ ಅವರು, "ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕ ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬಂದಲ್ಲಿ ಸಿಎಂ ಸ್ಥಾನವನ್ನು ಡಿ.ಕೆ.ಶಿವಕುಮಾರ್ ಅವರು ಅಲಂಕರಿಸಲಿದ್ದಾರೆ" ಎಂದು ಹೇಳುವ ಮೂಲಕ ಮುಂದಿನ ಸಿಎಂ ಹೇಳಿಕೆಯ ಬೆಂಕಿ ತಣ್ಣಗಾಗುವ ಮುನ್ನ ನಲಪಾಡ್ ತುಪ್ಪ ಸುರಿದಿದ್ದಾರೆ.
"ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗುತ್ತಾರೆ. ಎಲ್ಲರೂ ಅವರಿಗೆ ಬೆಂಬಲ ನೀಡಿ. ಎಲ್ಲಿರೂ ಮತ ಹಾಕಿದರೆ. ಡಿ.ಕೆ.ಶಿವಕುಮಾರ್ ಅವರೇ ಸಿಎಂ ಆಗುತ್ತಾರೆ" ಎಂದಿದ್ದಾರೆ.
ಕಾಂಗ್ರೆಸ್ನಲ್ಲಿ ಮುಂದಿನ ಸಿಎಂ ಯಾರು ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಡುವೆ ಬಿಗ್ ಫೈಟ್ ಉಂಟಾಗಿದೆ ಎನ್ನಲಾಗುತ್ತಿದೆ. ಇನ್ನು ಇದರ ನಡುವೆ ಅವರವರ ನಾಯಕರ ಪರ ಅನೇಕರು ಬ್ಯಾಟಿಂಗ್ ನಡೆಸೋದು ಮುಂದುವರೆದಿದೆ.