ಕುಂದಾಪುರ, ಜು 06 (DaijiworldNews/MS): ಯಕ್ಷಗಾನ ಕಲಾವಿದರು, ವೇಷದ ತದ್ರೂಪ ಸೃಷ್ಟಿಸುವ ಈ ‘ಕಲಾವಿದ’ ಬಹುಮುಖಿ ಪ್ರತಿಭಾ ಸಂಪನ್ನಮಿಥುನ್ ನಾಯಕ್ ಹಂದಾಡಿ. ಯಕ್ಷಗಾನ ವೇಷ ಮಾಡಲು ಸೈ, ಯಕ್ಷಗಾನ ವೇಷಭೂಷಣ ಅಲಂಕಾರಕ್ಕೂ ಸೈ, ಕುಂಚ ಹಿಡಿದು ಯಕ್ಷ ಚಿತ್ತಾರ ಬರೆಯಲು ಸರಿ, ಹೆಚ್ಚೆಕೆ ಪೈಬರ್, ರಬ್ಬರ್ನಲ್ಲಿ ತನ್ನ ನೆಚ್ಚಿನ ಕಲಾವಿದರ ಯಥಾರೂಪ ಕೆತ್ತಲು ಸೈ ಈ ಕಲಾವಿದ.
ಒಬ್ಬ ವ್ಯಕ್ತಿಯ ವೇಷಗಾರಿಕೆ ಚಿತ್ರವನ್ನು ಚಿತ್ತಭಿತ್ತಿಯಲ್ಲಿ ಪ್ರತಿಷ್ಠಾಪಿಸಿಕೊಂಡು ಅದರ ಪ್ರತಿಕೃತಿ ರಚಿಸುವಲ್ಲಿ ಇವರ ಏಕಾಗ್ರಚಿತ್ತ, ಸಿದ್ಧಿಸಿಕೊಂಡ ಅನುಭವ, ಅಂತರ್ಯದಲ್ಲಿ ಹುದುಗಿರುವ ಪ್ರತಿಭೆ ಬೆಕ್ಕಸ ಬೆರಗಾಗಿಸಿಬಿಡುತ್ತದೆ ಅವರ ಕೃತಿಗಳಲ್ಲಿ ನೈಜತೆ, ಜೀವಂತಿಕೆ ಕಾಣಬಹುದಾಗಿದೆ.
ಯಕ್ಷಗಾನದ ಸ್ತಬ್ದ ಚಿತ್ರಗಳು, ಗೊಂಬೆಗಳ ನಿರ್ಮಾಣ ಕಲೆಗಾರಿಕೆಯಲ್ಲಿನ ನಿಷ್ಣಾತತೆ ಅದ್ಬುತ. ಸ್ತಬ್ದ ಚಿತ್ರವೊಂದನ್ನು ನಿರ್ಮಾಣ ಮಾಡುವುದೆಂದರೆ ಸುಲಭದ ಕೆಲಸವಲ್ಲ, ಆಳವಾದ ಅನುಭವ ಮತ್ತು ಊಹನಾ ಚಾತುರ್ಯ ಬೇಕಾಗುತ್ತದೆ. ತಾಳ್ಮೆಯ ತಪಸ್ಸು ಅದು. ಇವತ್ತು ಮಿಥುನ್ ರಚನೆಯ ನೂರಾರು ಸ್ಮರಣಿಕೆಗಳು, ಸ್ತಬ್ದ ಚಿತ್ರಗಳು ಗಣ್ಯಾತಿಗಣ್ಯರ ಮನೆಯ ಒಳಾಂಗಣದ ಅಂದ ಹೆಚ್ಚಿಸಿವೆ. ಆ ಎಲ್ಲಾ ಆಕೃತಿ-ಪ್ರತಿಕೃತಿಗಳ ಹಿನ್ನೆಲೆ ಹೆಜ್ಜೆ ಗುರುತುಗಳ ಹಿಂಬಾಲಿಸಿ ಹೊರಟಾಗ ಸಿಗುವುದು ಅದೊಂದು ಕಲಾವಂಶ ಕುಡಿಯೆಂದು.
ಯಕ್ಷರತ್ನ ಹಂದಾಡಿಯ ಬಾಲಕೃಷ್ಣ ನಾಯಕ್ ಎಂಬುದು ಯಕ್ಷಲೋಕದಲ್ಲಿ ಚಿರಪರಿಚಿತ ಹೆಸರು. ಯಕ್ಷಗಾನ ವೇಷಭೂಷಣ ಅಂದ ಕೂಡಲೇ ಬಾಬಣ್ಣ ಬಲ್ಲುನಾಯ್ಕರ ಹೆಸರು ತಟ್ಟನೆ ನೆನಪಾಗುತ್ತದೆ. ಬಾಲಕೃಷ್ಣ ನಾಯಕ್ ಸವಿತಾ ದಂಪತಿಯ ದ್ವಿತೀಯ ಪುತ್ರನಾಗಿ 16-4-1989ರಲ್ಲಿ ಬ್ರಹ್ಮಾವರದಲ್ಲಿ ಜನಿಸಿದ ಮಿಥುನ್ ಕಲಾವಲಯದಲ್ಲಿಯೇ ಬೆಳೆದವರು.
ಬ್ರಹ್ಮಾವರ ಸರಕಾರಿ ಪದವಿಪೂರ್ವ ಕಾಲೇಜಿನಲಿ ಶಿಕ್ಷಣ ಪಡೆದ ಮಿಥುನ್ ಶಾಸ್ತ್ರೀಯವಾಗಿ ಯಕ್ಷ ಶಿಕ್ಷಣ ಪಡೆದವರು. ಉಡುಪಿಯ ಯಕ್ಷಗಾನ ಕೇಂದ್ರದ ಪುರಸ್ಕ್ರತ ಬನ್ನಂಜೆ ಸಂಜೀವ ಸುವರ್ಣ ಸತೀಶ ಕೇದ್ಲಾಯ ದೇವದಾಸ್ ರಾವ್ ಕೃಷ್ಣಮೂರ್ತಿ ಭಟ್ ಪ್ರಸಾದಕುಮಾರ್ ಮೊಗೆಬೆಟ್ಟು, ಮಂಜುನಾಥ ಕುಲಾಲ್ ಇವರೆಲ್ಲಾ ಉಡುಪಿ ಕೇಂದ್ರದಲ್ಲಿ ಇವರಿಗೆ ಗುರುಗಳಾಗಿ ಯಕ್ಷಗಾನ ವಿದ್ಯೆ ಧಾರೆಯರೆದರು.
ತನ್ನ ತಂದೆಯವರ ನೇತೃತ್ವದ ಶ್ರೀ ಗಜಾನನ ಯಕ್ಷಗಾನ ವೇಷಭೂಷಣ ಸಂಸ್ಥೆಯಲ್ಲಿ ಮುಖವರ್ಣಿಕೆ ಹಾಗೂ ವೇಷಭೂಷಣ ತಯಾರಿಕೆಯ ಕಲೆಯನ್ನು ಕಲಿತರು.ಮಿಥುನ್ ನಾಯಕ್ ಹಂದಾಡಿ ಅತ್ಯುತ್ತಮ ನೃತ್ಯಪಟು. ಉತ್ತಮ ಸ್ತ್ರೀ ವೇಷಧಾರಿ. ಸ್ತ್ರೀ ಪುರುಷ ವೇಷಗಳೆರಡಲ್ಲೂ ಪ್ರಭುತ್ವವಿರುವ ಕಲಾವಿದ. ಮಿಥುನ್ ನಾಯಕ್ ಬಣ್ಣದ ರೇಖೆಗಳಲ್ಲಿ ಬೆರಗು ಮೂಡಿಸುವ ಕಲಾಕಾರ. ಮುಖವರ್ಣಿಕೆಗೆ ಕುಳಿತರೆ ಅದ್ಭುತ, ಅಸದೃಶಗಳನ್ನು ಸೃಷ್ಟಿಸುತ್ತಾರೆ. ಮುಖಮಂಡಲದಲ್ಲಿ ಮಿಥುನ್ ಚಿತ್ರಿಸುವ ಬಣ್ಣ ರೇಖೆಗಳ ಬೆಡಗು ಅನುಪಮ-ಅಸಾಧಾರಣ. ಪಾತ್ರದೊಳಗೆ ಪರಾಕಾಯ ಪ್ರವೇಶ ಎನ್ನುವಂತೆ ತನ್ನೋಳು ಸ್ವಕಾಯ ಪ್ರವೇಶಗೊಂಡ ಪಾತ್ರವೊದರ ಗುಣಸ್ವಭಾವವನ್ನು ಮುಖಮಂಡಲದ ಬಣ್ಣಗಳ ವೈವಿಧ್ಯತೆಯಲ್ಲಿಯೇ ತೋರಿಸಿಕೊಡುವ ಚತುರ್ಯತೆ ಇವರದ್ದು.
ಯಕ್ಷಗಾನ ನೃತ್ಯ ಶಿಕ್ಷಕನಾಗಿ, ರಂಗಪ್ರದರ್ಶನಗಳ ನಿರ್ದೇಶಕರಾಗಿ, ಹೊಸತನಗಳ ಅನಾವರಣಕಾರರಾಗಿ ಗಮನ ಸಳೆಯುವ ಮಿಥುನ್, ಸೌಮ್ಯ ಸ್ವಭಾವ ಕೆಲವೊಂದು ಪಾತ್ರಗಳನ್ನು ಕಂಡರೆ ಅವರಾ ಇವರು ಎನ್ನಿಸುವುದಿದೆ. ಅಷ್ಟೇಕೆ ಹುಲಿ ವೇಷ ಧರಿಸಿದರೆ ಜೀವಂತ ಹುಲಿಯೇ! ಆ ಸಂಪ್ರದಾಯಬದ್ದ ಬಲಿಷ್ಠ ಹೆಜ್ಜೆಗಾರಿಕೆ ಮೂಕವಿಸ್ಮಿತಗೊಳಿಸುತ್ತದೆ.
ಮಿಥುನ್ ಕಲಾ ಪ್ರತಿಭೆ ಈಗಾಗಲೇ ದೆಹಲಿ, ನೇಪಾಳ, ಮಿಜೋರಾಂ, ಸಿಕ್ಕಿಂ, ಅಸ್ಸಾಂ, ರಾಜಸ್ಥಾನ್ ಆಂದ್ರಫ್ರದೇಶ ಮುಂಬೈ, ಕಲ್ಕತ್ತಾ ಹೀಗೆ ಹಲವಾರು ಕಡೆ ಪರಿಚಯವಾಗಿದೆ. ವಿದೇಶಗಳಿಗೂ ಸೀಮೋಲ್ಲಂಘನಗೈದು ಮಿಡುನ್, ಸಿಂಗಾಪುರದಲ್ಲಿಯೂ ಮಿಂಚಿದ್ದಾರೆ. ಇವರ ಕಲಾ ಸಾಧನೆಗೆ ಸಂಚಲನ ಸಂಸ್ಥೆಯ ವತಿಯಿಂದ ‘ಯಕ್ಷ ಮಣಿಕ್ಯ’ ಬಿರುದು ಸಹಿತ ಆನೇಕ ಸನ್ಮಾನಗಳು ಈ ಪ್ರತಿಭೆಗೆ ಸಂದಿವೆ.