ಉಡುಪಿ,ಜು 06 (DaijiworldNews/MS): ಮಣಿಪಾಲದ ಸಿಂಡಿಕೇಟ್ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗಿನ ರಸ್ತೆಯನ್ನು ಡಾ. ವಿ.ಎಸ್.ಅಚಾರ್ಯ ರಸ್ತೆ ಎಂದು ನಾಮಕರಣ ಮಾಡಲಾಗಿದ್ದು ಇದರ ಉದ್ಘಾಟನೆ ಯನ್ನು ಜು. 6 ರ ಮಂಗಳವಾರ ರಾಜ್ಯ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ನೇರವೇರಿಸಿದರು.
ಡಾ.ವಿ.ಎಸ್.ಆಚಾರ್ಯ ಅವರ ಜನ್ಮದಿನದ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಅವರ ಪುತ್ಥಳಿಗೆ ಸಚಿವರು ಮಾಲಾರ್ಪಣೆಯನ್ನೂ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್ "ಡಾ. ವಿ.ಎಸ್.ಆಚಾರ್ಯರದ್ದು ಮೇರು ವ್ಯಕ್ತಿತ್ವ. ಇಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. ಆಚಾರ್ಯರು ಕೆಳ ಹಂತದ ರಾಜಕಾರಣದಿಂದ ಬಂದವರು. ಪಕ್ಷವನ್ನು ಕೆಳ ಹಂತದಿಂದ ಕಟ್ಟಿ ಬೆಳೆಸುವಲ್ಲಿ ಅವರು ಅಪಾರ ಶ್ರಮವನ್ನು ವಹಿಸಿದ್ದಾರೆ. ಲಾಲ್ ಕೃಷ್ಣ ಅಡ್ವಾಣಿ ಯವರು ಕೂಡಾ ಡಾ. ವಿ.ಎಸ್.ಆಚಾರ್ಯ ರನ್ನು ಸದಾ ನೆನಪು ಮಾಡಿಕೊಳ್ಳುತ್ತಾರೆ. ಅವರು ಗೃಹ ಇಲಾಖೆಯ ಸಚಿವರಾಗಿ ಕೂಡಾ ತುಂಬಾ ಉತ್ತಮ ನಿರ್ಧಾರ ಗಳ ಮೂಲಕ ಇಲಾಖೆಯ ಕಾರ್ಯವೈಖರಿಯನ್ನು ಉನ್ನತ ಮಟ್ಟಕ್ಕೆ ಏರಿಸಿದ್ದರು. ಕ್ಯಾಬಿನೆಟ್ ನಲ್ಲಿ ಎದುರಾಗುವ ಕ್ಲಿಷ್ಟಕರ ಸಮಸ್ಯೆಗಳನ್ನು ಅವರು ಪರಿಹರಿಸುತಿದ್ದರು. ಅವರ ಮಾರ್ಗದರ್ಶನ ನಮಗೆ ಸದಾ ಇರಲಿದೆ" ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿ "ಡಾ. ವಿ.ಎಸ್. ಆಚಾರ್ಯರದ್ದು ಮೇರು ವ್ಯಕ್ತಿತ್ವ. ಅವರು ಮರಣವನ್ನಪ್ಪಿದ ಸಂಧರ್ಬದಲ್ಲಿ ನಮ್ಮ ವಿರೋದ ಪಕ್ಷವಾದ ಕಾಂಗ್ರೆಸ್ ಕಚೇರಿಯಲ್ಲಿ ಕೂಡಾ ಶೃದ್ದಾಂಜಲಿ ಸಭೆ ಏರ್ಪಡಿಸಲಾಗಿತ್ತು ಇದು ಅವರ ವ್ಯಕ್ತಿತ್ವಕ್ಕೆ ಸಾಕ್ಷಿ. ಈ ರಸ್ತೆಗೆ ಡಾ. ವಿ.ಎಸ್.ಆಚಾರ್ಯರ ಹೆಸರಿಡಬೇಕೆಂಬ ನಿರ್ಧಾರವನ್ನು ಈ ಹಿಂದೇಯೇ ಮಾಡಲಾಗಿತ್ತು. ಇತ್ತೀಚಿಗೆ ನಗರ ಸಭೆಯಲ್ಲಿ ನಿರ್ಣಯವನ್ನು ಮಾಡಿ ಸರಕಾರ ಮಟ್ಟದಲ್ಲಿ ಅನುಮೋದನೆ ಪಡೆದು ಇಂದು ಅದರ ಉದ್ಘಾಟನೆ ನಡೆದಿದೆ. ಡಾ.ವಿ.ಎಸ್.ಆಚಾರ್ಯರು ಯಾವತ್ತೂ ಅಭಿವೃದ್ಧಿಯ ಪರ.ಜನಪ್ರತಿನಿದಿಗಳು ಯಾವತ್ತೂ ಅಭಿವೃದ್ಧಿ ಪರ ಇರಬೇಕು ಎಂಬುವುದು ಅವರ ನಿಲುವು. ಉಡುಪಿ ಜಿಲ್ಲಾಧಿಕಾರಿ ಕಚೇರಿ ನಿರ್ಮಿಸುವಲ್ಲಿ ಡಾ. ಆಚಾರ್ಯರು ಅವಿತರವಾಗಿ ಶ್ರಮಪಟ್ಟಿದ್ದಾರೆ" ಎಂದರು.
ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಘವೇಂದ್ರ ಕಿಣಿ, ಉಡುಪಿ ನಗರ ಸಭೆಯ ಅಧ್ಯಕ್ಷರಾದ ಸುಮಿತ್ರಾ ಆರ್ ನಾಯಕ್, ಉಪಾಧ್ಯಕ್ಷರಾದ ಲಕ್ಷ್ಮೀ ಮಂಜುನಾಥ ಕೊಳ, ನಗರ ಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಗಿರೀಶ್ ಅಂಚನ್, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ, ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷರಾದ ವೀಣಾ ಶೆಟ್ಟಿ ಮತ್ತು ಜಿಲ್ಲಾಧಿಕಾರಿಗಳ ಜಿ ಜಗದೀಶ್, ನಗರ ಸಭೆಯ ಅಧಿಕಾರಿಗಳು ಹಾಗೂ ನಗರ ಸಭೆಯ ಸದಸ್ಯರು ಮತ್ತು ಡಾ|. ವಿ. ಎಸ್ ಆಚಾರ್ಯರ ಪುತ್ರರಾದ ಕಿರಣ್ ಆಚಾರ್ಯ, ರವಿರಾಜ್ ಆಚಾರ್ಯ ಉಪಸ್ಥಿತರಿದ್ದರು