ಪುತ್ತೂರು, ಜು 06 (DaijiworldNews/MS): ಪುತ್ತೂರಿನ ಯುವಕನನ್ನು ಹನಿಟ್ರ್ಯಾಪ್ ಗೆ ಸಿಲುಕಿಸಿ ಆತನಿಂದ ೩೦ ಲಕ್ಷ ರೂ ಹಣ ವಸೂಲಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು, ಸೋಮವಾರ ಸವಣೂರು ಸಮೀಪದ ಸರ್ವೇ ಬಳಿ 3 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ನಟ್ಟಣಿಗೆ ಮುಡ್ನೂರು ಗ್ರಾಮದ ಕೊಟ್ಯಾಡಿ ನಿವಾಸಿ ಶಾಫಿ (34), ಸವಣೂರು ಗ್ರಾಮದ ಅತ್ತಿಕೆರೆ ನಿವಾಸಿ ಅಝರುದ್ದೀನ್(30) ಮತ್ತು ಮಾಂತೂರು ನಿವಾಸಿ ನಝೀರ್ (38) ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಬಂಟ್ವಾಳ ನಿವಾಸಿ ತನಿಷಾ ರಾಜ್ ಳನ್ನು ಶುಕ್ರವಾರವೇ ಬಂಧಿಸಲಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದೆ.
ಬಂಧಿತರಿಂದ 7.05 ಲಕ್ಷ ರೂ. ನಗದು, ಕಾರು, ಅಟೋರಿಕ್ಷಾ ಮತ್ತು 3 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ನಟ್ಟಣಿಗೆ ಮುಡ್ನೂರು ಗ್ರಾಮದ ಬೀಚಗದ್ದೆ ನಿವಾಸಿ ಯುವಕನಿಗೆ ಮೊಬೈಲ್ ಮೂಲಕ ಹನಿಟ್ರ್ಯಾಪ್ ನಡೆಸಿದ ತಂಡ ಆತನಿಗೆ ಬೆದರಿಕೆಯೊಡ್ಡಿ 30 ಲಕ್ಷ ರೂ. ವಸೂಲಿ ಮಾಡಿರುವುದಾಗಿ ಆತ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪುತ್ತೂರು ಡಿವೈಎಸ್ ಪಿ ಗಾನ ಪಿ ಕುಮಾರ್ ನೇತೃತ್ವದಲ್ಲಿ ತನಿಖೆ ಕೈಗೆತ್ತಿಕೊಂಡಿದ್ದರು.