ಕುಂದಾಪುರ, ಜು.05 (DaijiworldNews/HR): ಮದುವೆ ಕಾರ್ಯಕ್ರಮವೊಂದಕ್ಕೆ ಹೋಗಿ ವಾಪಾಸ್ಸು ಬರುತ್ತಿದ್ದ ವೇಳೆ ಕಂಟೈನರ್ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕುಂದಾಪುರದ ಛಾಯಾಗ್ರಾಹಕ ಹಾಗೂ ಅವರ ಪುತ್ರ ಗಂಭೀರ ಗಾಯಗೊಂಡು ಹಿಂಬದಿ ಕುಳಿತಿದ್ದ ಇನ್ನೊಬ್ಬ ಪ್ರಾಣಾಪಾಯದಿಂದ ಪಾರಾದ ಘಟನೆ ದಾವಣಗೆರೆಯಲ್ಲಿ ಇಂದು ನಡೆದಿದೆ.
ಅಪಘಾತದಲ್ಲಿ ಗಂಭೀರಗೊಂಡವರನ್ನು ಕುಂದಾಪುರದ ಹಿರಿಯ ಛಾಯಾಚಿತ್ರಗಾರ, ಕುಂದಾಪುರ ತಾಲೂಕು ಛಾಯಾಗ್ರಾಹಕರ ಸಂಘ ಹಾಗೂ ರಾಜ್ಯ ಛಾಯಾಗ್ರಾಹಕರ ಸಂಘಟನೆಯ ಮಾಜೀ ಅಧ್ಯಕ್ಷ, ಹಾಲೀ ಸಂಚಾಲಕ ಹೇರೂರು ಅಶೋಕ ಕುಮಾರ್ ಶೆಟ್ಟಿ(58) ಮತ್ತು ಅವರ ಪುತ್ರ ಪನ್ನಗ (24) ಎಂದು ಗುರುತಿಸಲಾಗಿದೆ. ಹಿಂಬದಿಯಲ್ಲಿ ಕುಳಿತಿದ್ದ ಕುಮಾರ್ ಎಂಬಾತ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ನಾವುಂದದಲ್ಲಿ ಮಾನಸ ಸ್ಟುಡಿಯೋ ಮಾಲಕರಾಗಿರುವ ಅಶೋಕ್ ಕುಮಾರ್ ಶೆಟ್ಟಿ ಮದುವೆ ಕಾರ್ಯಕ್ರಮವೊಂದರ ಚಿತ್ರೀಕರಣಕ್ಕಾಗಿ ಮಗ ಪನ್ನಗ ಹಾಗೂ ಕುಮಾರ್ ಎಂಬುವರ ಜೊತೆಗೆ ತನ್ನ ಕಿಯಾ ಸೊನೆಟ್ ಕಾರಿನಲ್ಲಿ ಹೋಗಿದ್ದರು.
ಇನ್ನು ಭಾನುವಾರ ಕಾರ್ಯಕ್ರಮ ಮುಗಿಸಿ ರಾತ್ರಿ ವಾಪಾಸ್ಸಾಗುತ್ತಿದ್ದರು. ಅಶೋಕ್ ಕುಮಾರ್ ಶೆಟ್ಟಿ ಪುತ್ರ ಪನ್ನಗ ಕಾರು ಚಲಾಯಿಸುತ್ತಿದ್ದರು. ಮುಂಜಾನೆ 3 ಗಂಟೆ ಸುಮಾರಿಗೆ ಎದುರಿನಿಂದ ಹೋಗುತ್ತಿದ್ದ ಕಂಟೈನರ್ ಲಾರಿಗೆ ಡಿಕಿ ಹೊಡೆದಿದ್ದು, ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.
ಘಟನೆಯಲ್ಲಿ ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.