ಮಂಗಳೂರು, ಜು 05 (DaijiworldNews/PY): ಲಾಕ್ಡೌನ್ ಪರಿಣಾಮ ಸಮಾಜದ ಪ್ರತಿಯೊಂದು ಸಮುದಾಯ ಮೇಲೂ ಪರಿಣಾಮ ಬೀರಿದೆ. ಇದು ವಿದ್ಯಾರ್ಥಿಗಳನ್ನೂ ಕೂಡಾ ಬಿಟ್ಟಿಲ್ಲ. ಕೊರೊನಾ ಸಾಂಕ್ರಾಮಿಕದಿಂದ ಬದುಕು ಲಯ ತಪ್ಪಿರುವಾಗ, ವಿದ್ಯಾರ್ಥಿಗಳ ತಂಡವೊಂದು "ಬದುಕಲು ನೂರು ದಾರಿ" ಎಂಬ ಮಾತನ್ನು ಸಾಧಿಸಿ ತೋರಿಸಿದ್ದಾರೆ. ಮಂಗಳೂರಿನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ತಂಡವೊಂದನ್ನು ಕಟ್ಟಿಕೊಂಡು ನೇರಳೆ ಹಣ್ಣು ವ್ಯಾಪಾರದಲ್ಲಿ ತೊಡಗಿಕೊಂಡಿದ್ದು, ಎಲ್ಲರಿಗೂ ಮಾದರಿಯಾಗಿದ್ದಾರೆ.
ಈ ತಂಡದಲ್ಲಿ 24 ವಿದ್ಯಾರ್ಥಿಗಳಿದ್ದು, ನಗರದ ಹಲವು ಕಾಲೇಜಿನ ವಿದ್ಯಾರ್ಥಿಗಳು ಈ ತಂಡದ ಸದಸ್ಯರಾಗಿದ್ದಾರೆ. ನಗರದ ಹಲವು ಬೀದಿ ಬದಿಯಲ್ಲಿ ಕಾಣಸಿಗುವ ಈ ವಿದ್ಯಾರ್ಥಿಗಳು, ಲಾಕ್ಡೌನ್ ಅವಧಿಯಲ್ಲಿ ಈ ವ್ಯಾಪಾರಕ್ಕೆ ತೊಡಗಿಕೊಂಡಿದ್ದು, ಇದರಿಂದ ಆರ್ಥಿಕವಾಗಿ ಸಬಲರಾಗುವತ್ತ ಹೆಜ್ಜೆಯನಿಟ್ಟಿದ್ದಾರೆ.
ಮಂಗಳೂರಿನಲ್ಲಿ ನೇರಳೆ ಹಣ್ಣಿಗೆ ಉತ್ತಮ ಬೇಡಿಕೆ ಇದ್ದು, ಒಂದು ಕಿಲೋ ನೇರಳೆ ಹಣ್ಣಿನ ಬೆಲೆ ಸುಮಾರು 400 ರೂ. ಇದೆ. ಲಾಕ್ಡೌನ್ ಸಂದರ್ಭ ಹಣ್ಣಿನ ಬೇಡಿಕೆ ತೀವ್ರವಾಗಿ ಹೆಚ್ಚಾಗಿದ್ದು, ಔಷಧೀಯ ಮೌಲ್ಯಗಳನ್ನು ಹೊಂದಿರುವುದರಿಂದ ಜನರು ಹಣ್ಣುಗಳನ್ನು ಖರೀದಿಸುತ್ತಾರೆ. ವಿದ್ಯಾರ್ಥಿಗಳು ನಗರದ ವಿವಿಧ ಸ್ಥಳಗಳಾದ, ಟಿಎಂಎ ಪೈ ಹಾಲ್, ಲೇಡಿಹಿಲ್ ಹಾಗೂ ಉರ್ವ ಸ್ಟೋರ್ ಬಳಿ ಹಣ್ಣಗಳನ್ನು ಮಾರಾಟ ಮಾಡುತ್ತಿದ್ದಾರೆ.
ದಾಯ್ಜಿವಲ್ಡ್ ಜೊತೆ ಮಾತನಾಡಿದ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಕಾಂ ವಿದ್ಯಾರ್ಥಿ ಸಂದೀಪ್, "ಕೊರೊನಾದ ಎರಡನೇ ಅಲೆಯ ಕಾರಣ ನಾನು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದೇನೆ. ನನ್ನ ಇತರ ಸ್ನೇಹಿತರು ಕೂಡಾ ಕಷ್ಟಪಡುತ್ತಿದ್ದರು ಹಾಗೂ ಉದ್ಯೋಗ ಹುಡುಕುತ್ತಿದ್ದರು. ಕ್ಯಾಟರಿಂಗ್ ಹಾಗೂ ಡೆಕೊರೇಶನ್ನಂತಹ ಸಣ್ಣ ಕೆಲಸದಿಂದ ಸ್ವಲ್ಪ ಹಣ ಸಂಪಾದಿಸಲು ಸಹಾಯವಾಯಿತು" ಎಂದು ಹೇಳಿದ್ದಾರೆ.
"ಬಳಿಕ ನಾವು ಸತೀಶ್ ಪ್ರಭು ಅವರನ್ನು ಭೇಟಿ ಮಾಡಿದ್ದು, ಅವರು ನಮಗೆ ನೇರಳೆ ಹಣ್ಣಿನ ವ್ಯಾಪಾರ ನಡೆಸಲು ಬೆಂಬಲ ನೀಡಿದ್ದಾರೆ. ಇದರಿಂದ ನನ್ನ ಎಲ್ಲಾ ಸ್ನೇಹಿತರಿಗೆ ಸಹಾಯವಾಯಿತು. ನಮಗೆ ರಘು ಬೊಳೂರು ಅವರು ಕೂಡಾ ಸಹಾಯ ಮಾಡಿದ್ದಾರೆ" ಎಂದು ತಿಳಿಸಿದ್ದಾರೆ.
"ಒಂದು ತಿಂಗಳ ಹಿಂದೆ ಪ್ರತಿ ಕಿಲೋ ನೇರಳೆ ಹಣ್ಣಿಗೆ 400 ರೂ. ಇತ್ತು. ಆದರೆ ಈಗ 200 ರೂ.ಗೆ ಇಳಿದಿದೆ. ನೇರಳೆ ಹಣ್ಣು ಸಾಕಷ್ಟು ಔಷಧೀಯ ಮೌಲ್ಯಗಳನ್ನು ಹೊಂದಿದ್ದು, ಇದು ಮಧುಮೇಹಿಗಳಿಗೆ ಒಳ್ಳೆಯದು. ಹಣ್ಣುಗಳಿಗೆ ಬೇಡಿಕೆ ತುಂಬಾ ಹೆಚ್ಚಿದ್ದು, ಪ್ರತಿದಿನ 200 ಕಿಲೋ ಗಿಂತಲೂ ಹೆಚ್ಚು ನೇರಳೆ ಹಣ್ಣು ಮಾರಾಟವಾಗುತ್ತದೆ. ಒಣಗಿದ ಹಣ್ಣಿನ ಬೀಜಗಳಿಗೆ ಪ್ರತಿ ಕಿಲೋಗೆ 800 ರೂ. ಇದೆ. ವೈದ್ಯರು ಕೂಡ ಈ ಹಣ್ಣನ್ನು ಅಧಿಕ ಪ್ರಮಾಣದಲ್ಲಿ ಖರೀದಿಸುತ್ತಾರೆ. ಈ ಕಷ್ಟದ ಸಮಯದಲ್ಲಿ ನನ್ನ ಎಲ್ಲಾ ಸ್ನೇಹಿತರಿಗೆ ಸಹಾಯ ಮಾಡಿದ ಸತೀಶ್ ಪ್ರಭು ಅವರಿಗೆ ಧನ್ಯವಾದಗಳು"ಎಂದು ಸಂದೀಪ್ ಹೇಳಿದ್ದಾರೆ.