ಮಂಗಳೂರು, ಜು 05 (DaijiworldNews/MS): ಕೊರೋನಾ ಎರಡನೇ ಅಲೆಯ ಹಾವಳಿ ಗಣನೀಯ ಪ್ರಮಾಣದಲ್ಲಿ ತಗ್ಗಿದ ಹಿನ್ನೆಲೆಯಲ್ಲಿ ಸೋಮವಾರದಿಂದ ಬಹುತೇಕ ನಿರ್ಬಂಧ ಸಲ್ಲಿಸಲಾಗಿದ್ದು, ರಾಜ್ಯದ ಜನತೆಗೆ ಸುಮಾರು ಎರಡು ತಿಂಗಳ ಬಳಿಕ ಬಿಡುಗಡೆ ಭಾಗ್ಯ ದೊರೆತಿದೆ.
ರಾಜ್ಯದಲ್ಲಿ ಏಪ್ರಿಲ್ 27 ರಿಂದ ರಾಜ್ಯಾದ್ಯಂತ ಜನತಾ ಕರ್ಪ್ಯೂ ಪ್ರಾರಂಭವಾಗಿತ್ತು.ಈ ಮೂಲಕ ಜನ ಅಘೋಷಿತ ಗೃಹ ಬಂಧನಕ್ಕೆ ಒಳಗಾಗಿದ್ದರು. ಮನೆಯಿಂದ ಹೊರಗೆ ಕಾಲಿಡಲು ಹಲವಾರು ನಿರ್ಬಂಧ ಗಳಿದ್ದವು. ಈಗ ಅವುಗಳು ಸಡಿಲಿಸಲಾಗಿದೆ ಬೆಳಗ್ಗಿನಿಂದ ರಾತ್ರಿಯವರೆಗೆ ಮುಕ್ತ ವಾತಾವರಣ ಕಲ್ಪಿಸಲಾಗಿದೆ. ಹೀಗಾಗಿ ಕರಾವಳಿಯಲ್ಲೂ ಜನಜೀವನ ನಿಧಾನಗತಿಯಲ್ಲಿ ಸಹಜತೆಯತ್ತ ಮರಳುತ್ತಿದೆ. ಅಂಗಡಿ ಮುಂಗಟ್ಟುಗಳು ತೆರೆದಿದ್ದು ವ್ಯಾಪಾರಸ್ಥರು ವಹಿವಾಟಿನಲ್ಲಿ ತೊಡಗಿರುವುದು ಕಂಡುಬಂತು. ಸಮಯ ಮಿತಿ ಇಲ್ಲದ ಹಿನ್ನಲೆಯಲ್ಲಿ ಗ್ರಾಹಕರು ಕೂಡಾ ಸಾವಾಕಾಶದಲ್ಲಿ ಸಾಮಾಗ್ರಿಗಳ ಖರೀದಿ ದೃಶ್ಯ ನಗರದಲ್ಲಿ ಸರ್ವೇಸಾಮಾನ್ಯವಾಗಿತ್ತು. ಇನ್ನು ನಗರದ ಪ್ರಮುಖ ರಸ್ತೆಯಲ್ಲಿ ಜನದಟ್ಟನೆ ಹಾಗೂ ಹೆಚ್ಚಿನ ವಾಹನ ಸಂಚಾರ ಕಂಡುಬಂತು.
ನಗರದ ಕುದ್ರೋಳಿ ಗೋಕರ್ಣನಾಥೇಶ್ವರ , ಕದ್ರಿ ಶ್ರೀ ಮಂಜುನಾಥ ದೇವಸ್ಥಾನಗಳಿಗೆ ಬೆಳಗ್ಗೆಯಿಂದಲೇ ಭಕ್ತರು ಭೇಟಿ ನೀಡುವ ದೃಶ್ಯ ಕಂಡುಬಂತು.