ಮಂಗಳೂರು, ಜು 05 (DaijiworldNews/MS): ತುಳುಭಾಷೆ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳ್ಳಬೇಕು ಎಂದು ಒತ್ತಾಯಿಸಿ ಭಾನುವಾರ ಹಮ್ಮಿಕೊಂಡಿದ್ದ ಟ್ವಿಟರ್ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರಕಿದೆ.ಒಂದೇ ದಿನ ಲಕ್ಷಾಂತರ ಮಂದಿ ಟ್ವೀಟ್ ಮಾಡುವ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ.
ಟ್ವೀಟ್ ಅಭಿಯಾನದಲ್ಲಿ ಜನಪ್ರತಿನಿಧಿಗಳು, ಸಿನಿಮಾ ತಾರೆಯರು, ಸಾರ್ವಜನಿಕರೂ ಸೇರಿ #tulto8thschedule ಹ್ಯಾಶ್ ಟ್ಯಾಗ್ ಮೂಲಕ ಟ್ವೀಟ್ ಮಾಡಲಾಗಿದೆ.
ಟ್ವೀಟ್ ಅಭಿಯಾನಕ್ಕೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ,ಕಂಪ್ಯೂಟರ್ ನೆಟ್ವರ್ಕಿಂಗ್ ತಂತ್ರಜ್ಞ ಅನ್ಸಿಲ್ ಸಕ್ಸೇನ,ರಾಜ್ಯಸಭಾ ಸಂಸದ ಡಾ. ಸುಬ್ರಹ್ಮಣ್ಯ ಸ್ವಾಮಿ, ಸಾಂಸದ ಪ್ರಜ್ವಲ್ ರೇವಣ್ಣ, ಮಾಜಿ ಸಚಿವ ಎಂ.ಬಿ. ಪಾಟೀಲ್ , ಮಾಜಿ ಶಾಸಕ ವೈ.ಎಸ್.ವಿ ದತ್ತ ಸೇರಿದಂತೆ ಹಲವಾರು ಮಂದಿ ಟ್ವೀಟ್ ಮಾಡುವ ಮೂಲಕ ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ ನೀಡಲು ಒತ್ತಾಯಿಸಿದ್ದಾರೆ.
ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸುವುದು ತುಳುಭಾಷೆಯ ಭಾಷಿಕರ ಸಂಸ್ಕೃತಿ ಹಾಗೂ ಸಾಂಸ್ಕೃತಿಕ ಅಸ್ಮಿತೆಯನ್ನು ಬೆಳೆಸುವಲ್ಲಿ ಹಾಗೆಯೇ ಇದು ತುಳುಲಿಪಿಯ ಪುನರುತ್ಥಾನದಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ಸಿಟಿ ರವಿ ಹೇಳಿದ್ದಾರೆ.
ತುಳುಭಾಷೆಯ ಸ್ಥಾನಮಾನಕ್ಕಾಗಿ ಈ ಹಿಂದೆಯೂ ಟ್ವೀಟ್ ಅಭಿಯಾನ ನಡೆಸಿ ರಾಜ್ಯ ಸರಕಾರಕ್ಕೆ ಮನವಿ ಮಾಡಲಾಗಿತ್ತು. ಅಲ್ಲದೆ, ತುಳು ಸಾಹಿತ್ಯ ಅಕಾಡೆಮಿ, ಜನಪ್ರತಿನಿಧಿಗಳು ಗಣ್ಯರು ಕೂಡ ರಾಜ್ಯ, ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದರು.